ನಮಗೆ ನಾವೇ ಕೇಳುವಂತ ಪ್ರಶ್ನೆ!

 

 

ನಮಗೆ ನಾವೇ ಕೇಳುವಂತ ಪ್ರಶ್ನೆ!

ಈ ಆತ್ಮವೆಂಬ ಬತ್ತಿ ಕತ್ತಲೆಯ ತೊರೆದು ಹೊತ್ತಿ ಉರಿಯಬೇಕಿದೆ!

ಭಯವೆಂಬ ಬಾನು ಕತ್ತಲೆಯ ತೊರೆದು ಸೂರ್ಯನನ್ನು ಅರಸಿ ಹೊರಡಬೇಕಿದೆ..

ಕಣ್ಣೆದುರಲ್ಲೇ ಎಲ್ಲ ಉತ್ತರಗಳೂ ಅಂಗೈನ ಬೆಣ್ಣೆಯಂತಿದೆ ಆದರೂ

ತುಪ್ಪಕ್ಕಾಗಿ ಅಲೆವ ಬೆಪ್ಪನಂತೆ “ಇಲ್ಲಗಳ” ವ್ಯೂಹದಲ್ಲಿ ಸಿಲುಕಿದೆ ಈ ಮನ!.

 

ಈ ಅಭಯ ಭಾವನೆ ನನ್ನೊಳಗರಳುವುದಾದರೂ ಯಾವಾಗ ?,

ನಾ ಭಯವೆಂಬ ಗರ್ಭದಿಂದಾಚೆ ಬರುವುದ್ಯಾವಾಗ ??…

ಈ ಹೆಸರಿಗೊಂದು ಉಸಿರು ಬರುವುದ್ಯಾವಾಗ?,

ಈ ಮನವು ತನ್ನ ತಾನೇ ಪ್ರೀತಿಸದೇ ಹೋದಾಗ ಇನ್ನೆಲ್ಲಿಯಾ ಭರವಸೆ!

 

ಆದರೂ ಸಾಧನೆ ಬಿಸಿಲುಗೋಲು ಮನವೆಂಬ ಮನೆಯ ಕಿಟಕಿಯ ನುಸುಳಿ

ತನ್ನ ಬೆಳಕೊಗೆಯ ಬೇಕಿದೆ, ಆ ಬೆಳಕು ಈ ತನುವರಳಿದ ಕಾರಣವ ತೋರ ಬೇಕಿದೆ.

ಅರಳಿದ ತನುವು ಬಾಡುವ ಮೊದಲೇ ಸುಗಂಧಿಸಿ ಅದರ ಗಮ ಎಲ್ಲರ ನಾಸಿಕದಲ್ಲೇ ಚಿರಂಜೀವಿಯಾಗಬೇಕಿದೆ!, ಅರಿಯಬೇಕಿದೆ ಅರಿವು ಅರಳಬೇಕಿದೆ..

 

ನಾನೂ ನನ್ನ ಪ್ರಾಚಾರ್ಯರೊಂದಿಗೆ ನಿಂತು ಭಾವಚಿತ್ರವ ಪಡೆಯ ಬೇಕಿದೆ

ಆದರಾ ಭಾವಚಿತ್ರದೊಳಗೆ ನಾ ಮಾಡಿದ ಸಾಧನೆಯ ಭಾವಬೆಳಕು

ನನ್ನ ಪ್ರಾಚಾರ್ಯರ ಮೊಗದಲ್ಲಿ ಪ್ರತಿಫಲಿಸಿ ಪ್ರಜ್ವಲಿಸುತ್ತಿರ ಬೇಕಿದೆ..

ಸಾಧನೆಯ ಬಟ್ಟೆಯ ತೊಡಬೇಕಿದೆ,

 

ಹೊರಟ ಬಟ್ಟೆಯಲ್ಲೇ ಲಕ್ಷ್ಯವ ಇಟ್ಟು ಗುರಿಯ ಗರಿಯ ಸ್ಪರ್ಶಿಸಬೇಕಿದೆ.

“ಇಲ್ಲಗಳ” ಸೊಲ್ಲ ಹೇಳದೆ ಆತ್ಮ ವಿಶ್ವಾಸದ ದೀಪವ ಹಚ್ಚಿಕೊಂಡು ನಾ ಹೊರಡಲೇ ಬೇಕಿದೆ,

ನಾನೂ ಇರುವೆನೆಂಬ ಇರುವಿಕೆಯ ಅರವಳಿಕೆಯ ಮೂಡಿಸಬೇಕಿದೆ.

 

ನನ್ನಿಂದ ಅ’ಸಾಧ್ಯ’ ಎನ್ನುವ ಕಪ್ಪು ಅಂಧಕಾರದ ಪಟ್ಟಿಯ ಕಟ್ಟಿಕೊಂಡು

ತಿರುಗುತ್ತಿರುವ ಮನಸು ಪಟ್ಟಿಯ ಕಿತ್ತೊಗೆದು ತೇಜವ ಕಾಣಬೇಕಿದೆ.

ಒಟ್ಟಾರೆಯಾಗಿ ನನಗೆ ನಾನೇ ಕೇಳಿಕೊಳ್ಳುವ ಪ್ರಶ್ನೆ ಏನೆಂದರೆ..

 

ತನುವೆ ನೀನೇಕೆ ಅರಳಿರುವೆ?….”

ಕವನ ಕೆ. ,

ಪ್ರಥಮ ಬಿಎ, ವಿದ್ಯಾರ್ಥಿನಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ನಮ್ಮ ಹೆಮ್ಮೆಯ ಸಮಾಜಕಾರ್ಯ

ವಿಶ್ವ ಸಮಾಜಕಾರ್ಯ ದಿನವನ್ನು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಮಂಗಳವಾರದಂದು ವಿಶ್ವದ್ಯಂತ ಆಚರಿಸಲಾಗುತ್ತದೆ. ಈ ದಿನದ ವಿಶೇಷತೆ ಏನೆಂದರೆ, ಸಮಾಜ ಸೇವಕರ ಸಾಧನೆಗಳನ್ನು ಸರ್ವರಿಗೂ ತಿಳಿಸಲು ಅವರ ಕಾರ್ಯಗಳನ್ನು ಹಾಗೂ ಅವರ ಕಾರ್ಯಗಳ ಉದ್ದೇಶ ವನ್ನು ಸಮಾಜಕ್ಕೆ ದರ್ಶಿಸಲು ಹಾಗೂ ನವ ಸಮಾಜ ನಿರ್ಮಾಣದಲ್ಲಿ ಸಮಾಜ ಕಾರ್ಯ ಸೇವೆಗಳ ಅರಿವನ್ನು ಸರ್ವರಿಗೂ ಮೂಡಿಸಲು ಮೀಸಲಾದ ದಿನವೆಂದು ಹೇಳಬಹುದು

ಸಮಾಜ ಕಾರ್ಯಕರ್ತರು ವ್ಯಕ್ತಿಗಳು, ಕುಟುಂಬ, ಸಮುದಾಯ ಮತ್ತು ವಿವಿಧ ಸಂಸ್ಥೆಗಳೊಂದಿಗೆ ಅವರ ಅಳಲನ್ನು ನಿವಾರಿಸಲು ಮತ್ತು ಸಾಮರ್ಥ್ಯವನ್ನು ವೃದ್ಧಿಸಲು ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಸೇರ್ಪಡೆ, ಸಮಾನತೆ, ಸುಸ್ಥಿರ ಅಭಿವೃದ್ಧಿ, ಮಾನವ ಹಕ್ಕುಗಳನ್ನು ಉತ್ತೇಜಿಸುವಲ್ಲಿ ಸಮಾಜ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸುತ್ತಾರೆ.

ವಿಶ್ವ ಸಮಾಜಕಾರ್ಯ ದಿನವೂ ಇನ್ನೊಬ್ಬರ ಬದುಕಿನಲ್ಲಿ ಬದಲಾವಣೆಯನ್ನು ಮಾಡುವ ಸಮಾಜ ಕಾರ್ಯಕರ್ತನನ್ನು ಸಮಾಜದಲ್ಲಿ ಗುರುತಿಸಿ ಅವರಿಗೆ ಉತ್ತೇಜನ ನೀಡುವ ದಿನವಾಗಿದೆ ಅಂತೆಯೇ ಸಮಾಜ ಸೇವೆಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವ್ಯಕ್ತಿಗಳ ಕುಟುಂಬದ ಹಾಗೂ ಸಮುದಾಯಗಳ ಮೇಲೆ ಸಮಾಜ ಕಾರ್ಯದಿಂದ ಆಗುವ ಸಕಾರಾತ್ಮಕ ಪರಿಣಾಮವನ್ನು ಉತ್ತೇಜಿಸುವ ದಿನವಾಗಿದೆ.

ಇಂದಿನ ಯುವ ಸಮಾಜ ಕಾರ್ಯಕರ್ತರಿಗೆ ಪ್ರೇರಕರಾಗಿ ಇರುವಂತಹ ಪ್ರಮುಖ ಚಿಂತಕರನ್ನು ನೋಡೋಣ:

ಮೇಧಾ ಪಾಟ್ಕರ್ ಇವರು ಸಾಮಾಜಿಕ ಕಾರ್ಯಕರ್ತೆ ಹಾಗೂ ಪರಿಸರ ಹೋರಾಟಗಾರ್ತಿ ಎಂದೇ ಪ್ರಸಿದ್ದರು.

ಮದರ್ ತೆರೇಸಾ ಇವರು ಮಾನವೀಯತೆಗೆ ಸಹಾನುಭೂತಿ ಮತ್ತು ನಿಸ್ವಾರ್ಥ ಸೇವೆಗೆ ತಮ್ಮನ್ನು ಮುಡುಪಾಗಿಸಿದವರು.

 ರಾಜಾರಾಮ್ ಮೋಹನ್ ರಾಯ್ ಇವರು ಭಾರತದಲ್ಲಿ ಸಾಮಾಜಿಕ ಸುಧಾರಕರಾಗಿ ಸತಿ ಪದ್ಧತಿಯ ನಿರ್ಮೂಲನೆ ಹಾಗೂ ವಿಧವೆಯರ ಮರುವಿವಾಹಕ್ಕೆ ಉತ್ತೇಜನ ನೀಡಿದವರು.

ಮಹಾತ್ಮ ಗಾಂಧೀಜಿ ಇವರು ತಮ್ಮ ಜೀವನವನ್ನು ದೇಶ ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸಲು ಮುಡಿಪಾಗಿಟ್ಟವರು ಇವರು ತಮ್ಮ ಮೌಲ್ಯಗಳೊಂದಿಗೆ ಮತ್ತು ತತ್ವಗಳೊಂದಿಗೆ ವಿಶ್ವಾದ್ಯಂತ ಯುವಜನರಿಗೆ ಸ್ಪೂರ್ತಿ ಮತ್ತು ಪ್ರೇರಣೆಯಾಗಿದ್ದಾರೆ.

ಅಣ್ಣ ಹಜಾರೆ ಇವರು ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸಿದವರು. ಸರಕಾರದ ಪಾರದರ್ಶಕತೆಯನ್ನು ಹೆಚ್ಚಿಸಲು  ಚಳುವಳಿಗಳನ್ನು ಮುನ್ನಡೆಸಿದವರು.

ಕೈಲಾಶ್ ಸತ್ಯರ್ತಿ ಇವರು ಭಾರತೀಯ ಸಮಾಜ ಸುಧಾರಕ, ಮಕ್ಕಳ ಹಕ್ಕುಗಳ ಕಾರ್ಯಕರ್ತರು ಎಂದು ಪ್ರಖ್ಯಾತರಾದವರು.

ಸುನೀತಾ ಕೃಷ್ಣನ್ ಇವರು ಮಾನವ ಹಕ್ಕುಗಳ ಕಾರ್ಯಕರ್ತೆ, ಪ್ರಜ್ವಲ ಸಂಸ್ಥೆಯನ್ನು ಹುಟ್ಟು ಹಾಕಿದವರು ಹಾಗೂ ಮಾನವ ಕಳ್ಳ ಸಾಗಾಣಿಕೆ ವಿರುದ್ಧ ಹೋರಾಡಿದವರು.

ಇವರೆಲ್ಲರನ್ನು ಮಾದರಿಯಾಗಿಟ್ಟುಕೊಂಡು ನವ ಸಮಾಜ ಕಾರ್ಯಕರ್ತರು ರೂಪುಗೊಳ್ಳಬೇಕಾಗಿದ್ದು ದೇಶಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಗಳ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ, ಪ್ರಸ್ತುತ ಸಮಾಜದಲ್ಲಿ ಪರಿಸರವನ್ನು   ರಕ್ಷಣೆ ಮಾಡುವಲ್ಲಿ ನಾವು ಹೊಸ ಜವಾಬ್ದಾರಿಗಳನ್ನು ನಿರ್ವಹಿಸುತ್ತ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡೋಣ.

ಸಮಾಜ ಕಾರ್ಯವು ಒಂದು ವೃತ್ತಿಪರ ಶಿಕ್ಷಣವಾಗಿದ್ದು ನೀವು ಕೂಡ ಸಮಾಜದಲ್ಲಿ ಸಮಾಜ ಕಾರ್ಯಕರ್ತನೆಂದು ಗುರುತಿಸಿಕೊಳ್ಳಬೇಕಾದರೆ ಬಿ.ಎಸ್.ಡಬ್ಲ್ಯೂ, ಎಂ.ಎಸ್.ಡಬ್ಲ್ಯೂ ಕೋರ್ಸ್ಗೆ ಸೇರಲು ಪ್ರವೇಶಾತಿ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿ, ಉತ್ತಮ ಸಮಾಜ ರಚನೆಯಲ್ಲಿ  ನಮ್ಮ ಪಾಲು ನೀಡೋಣ.

 

ಬರಹ : ನ್ಯಾನ್ಸಿ ಲವಿನಾ ಪಿಂಟೊ,

ಸಹಾಯಕ ಪ್ರಾಧ್ಯಾಪಕರು,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಅಪ್ಪ ಐ ಲವ್ ಯೂ

ನೋವ ನುಂಗಿ ಮಕ್ಕಳಿಗೆ ಪ್ರೀತಿ ಧಾರೆ ಎರೆಯುವ ತಂದೆಗೆ ಮಕ್ಕಳ ಭವಿಷ್ಯವೇ ಮುಖ್ಯವಾಗಿರುತ್ತದೆ

ಅಪ್ಪ ಅಂದರೆ ಅದ್ಭುತ, ಅಮರ ಪ್ರತಿಪಾದಕ, ಅಮೋಘ, ಆನಂದ, ಆದರ್ಶ, ಅನಂತ, ನನ್ನ ಜಗತ್ತು, ಮೊದಲ ಸ್ನೇಹಿತ ಅಪ್ಪಾ… ಅಕಾಶದಷ್ಟು ಎತ್ತರವಿರುವ ಗೋಪುರ ಕೇಳಿದರು ಕೊಡಿಸುವ ಶಕ್ತಿ ಹೊಂದಿದವರು, ಕಿರು ಬೆರಳು ಹಿಡಿದು ನಿನ್ನೊಂದಿಗೆ ನಾನಿರುವೆ ಎಂದು ನಡೆದ ಹೆಜ್ಜೆ ಗುರುತು ಅಪ್ಪನದು, ತಾನು ನೋಡದ ಪ್ರಪಂಚವನ್ನು ಹೆಗಲ ಮೇಲೆ ಕೂರಿಸಿ ತೋರಿಸಿದ ಹೃದಯವಂತ, ಕಲಿತ ಪಾಠ, ಕಂಡ ಕಷ್ಟಗಳು, ಸದಾ ಕಾಲ ನಗು ಮುಖವ ತೋರು ಎಂದು ತಿಳಿಸಿದವರು, ಬದುಕಿನ ಉದ್ದಕ್ಕೂ ಭರವಸೆಯ ಬೆಳಕಲ್ಲೇ ಸಾಗುತ್ತಿದ್ದ ನನಗೆ ಜೀವನದ ಅರ್ಥ ತಿಳಿಸಿ, ಛಲದಿಂದ ಸಾಧನೆಯನ್ನು ಹುಡುಕಿ ಸಾಗು ಎಂದು ಹೇಳಿ ಹಿಂಬಾಲಿಸಿದವರು ನನ್ನಪ್ಪ…. ಸಾವಿರ ಸಾವಿರ ಕಷ್ಟ ಬಂದರು ಛಲ ಬಿಡದೆ ಹೆಜ್ಜೆ ಮುಂದಿಟ್ಟ ಸಾಹುಕಾರ, ಅಪ್ಪ ಬರೀ ಅಪ್ಪನಾಗಿಯೇ ಉಳಿಯದೇ ಸ್ನೇಹಿತನಾಗಿ, ಹಿತೈಷಿಯಾಗಿದ್ದಾನೆ. ತಪ್ಪು ಹೆಜ್ಜೆ ಇಟ್ಟಾಗ ತಿದ್ದಿ ತಿಳಿ ಹೇಳಿ ಸರಿದಾರಿ ತೋರಿಸಿದವ, ತಾನು ಶಿಕ್ಷಣ ಪಡೆದಿಲ್ಲ ಆದರೂ ಮಕ್ಕಳು ಪಾಠದಿಂದ ವಂಚಿತರಾಗದಿರಲಿ ಎನ್ನುವ ಗುಣ ಅಪ್ಪನದು, ನಾ ಕಂಡ ಪಾಡು ನನ್ನ ಮಕ್ಕಳು ಕಾಣದಿರಲಿ ಎಂದು ಹಗಲಿರುಳ್ಳೆನ್ನದೇ ದುಡಿಯುತ್ತಿದ್ದಾರೆ….

ನಾನು ನೋಡಿದ ಮೊದಲ ವೀರ

ಬಾಳು ಕಲಿಸಿದ ಸಲಹೆಗಾರ

ಬೆರಗು ಮೂಡಿಸೋ ಜಾದೂಗಾರ ಅಪ್ಪ✨❤

ತಂದೆ ಮಗಳ ಸಂಬಂಧ ಅನ್ನೋದೇ ಒಂಥರಾ ಚಂದ ಕರಗದಷ್ಟು ಪ್ರೀತಿ ಅನ್ನೋ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋ… ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರಿ ಮುಟ್ಟಿಸುವ ಹೊಣೆ, ಸದಾ ಜೊತೆಯಾಗಿರುವ ಬೆರಳು, ಬದುಕಿನ ಎಲ್ಲವೂ ಅಪ್ಪ…ಹೆಣ್ಣು ಮಕ್ಕಳು ತಾಯಿಗಿಂತ, ತಂದೆಯನ್ನ ಹಚ್ಕೊಳ್ಳೋದೇ ಜಾಸ್ತಿ…

ನೆನಪಿರಲಿ ಮಗಳೇ… ಈಗಲೇ ಹೇಳಿಬಿಡುತ್ತೇನೆ ನನಗೇನೂ ಬೇಡ ನಿನ್ನಿಂದ ಆದರೆ ನೀ ರಾಣಿಯಾಗು ನನ್ನ ಖುಷಿಯ ನೂರ್ಪಾಲು ನಿನಗಿರಲಿ ನಿನ್ನ ಕಣ್ಣೀರು ಬರೀ ಕನಸಾಗಲಿ. ಸಾಧಿಸು…ಧೈರ್ಯಗೆಡಬೇಡ ಬಿದ್ದರೆ ತುಳಿಯುವವರೇ ಇಲ್ಲಿ ಎದ್ದು ಗೆದ್ದು ಬಾ ಹಕ್ಕಿಯಂತೆ ಹಾರಾಡು…ಆದರೆ, ಮರೆಯಬೇಡ ಮಗಳೇ ನನ್ನ- ನನ್ನಾಕೆಯ ಮರೆಯಬೇಡ…

ಜನ್ಮ  ಕೊಡೋದು ತಾಯಿ,
ಜೀವನ ಕಲಿಸಿಕೊಡೋದು ತ೦ದೆ,

ತುತ್ತು ಕೊಡೋದು ತಾಯಿ
ತುತ್ತು ತ೦ದಾಕೋದು ತ೦ದೆ,

ಅತ್ತಾಗ ಮಡಿಲು   ಕೊಟ್ಟು ಕ೦ಬನಿ ಒರೆಸೋದು  ತಾಯಿ
ದ್ರುತಿಗೆಟ್ಟು ಕೂತಾಗ  ಹೆಗಲ ಕೊಟ್ಟು ಧೈರ್ಯ ತು೦ಬೋನು ತ೦ದೆ,,

ಮಗಳ ಮದುವೆಯಲ್ಲಿ ತನ್ನ ಕ೦ದನ ಅಗಲುವಿಕೆ
ನೆನೆದು ನೆನೆದು   ಕಣ್ಣೀರಿಡುವಳು ತಾಯಿ
ಮರೆಯಲಿ ನಿ೦ತು ಮಗಳೆದುರು ಕಣ್ಣೀರಿಡಲು
ಆಗದೇ ತಾಯಿ ಸ್ವರೂಪಿಣಿಯ೦ತಿದ್ದ  ಮಗಳು

ಜೀವ ಕೊಟ್ಟದ್ದು  ತಾಯಿಯೇ
ಜೀವವಿರುವ ವರೆಗೂ  ಜೀವನದ ಬಗ್ಗೆ ಪಾಠ ಕಲಿಸೋದು ತ೦ದೆ.. ❤❤

ತಂದೆ ನೀನು ತಂದೆ ನನ್ನ ಬಾಳ ತುಂಬಾ ಹರುಷ,
ಮರೆಯಲಾರೆ ನಿನ್ನ ನಾನು ಸಾವಿರ ವರುಷ,
ನೊಂದ ಗುರುತು ಬಹಳ ಕಂಡದ್ದು ನಗುವ ಮುಖ,
ಎಲ್ಲ ನಮಗೆ ಕೊಟ್ಟು ನೀ ಬಯಸಲಿಲ್ಲ ಸುಖ…

ನಮಗೆ ಎಲ್ಲ ಕೊಟ್ಟೆ ನೀ ಹರಿದ ಬಟ್ಟೆ ತೊಟ್ಟೆ,
ಕಷ್ಟ ನೋರಿದ್ದರು ನಿನ್ನೊಳಗೆ ಹುಧುಗಿ ಇಟ್ಟೆ,
ಸಂಸಾರ ಸಾಗಿಸಲು ಬಹಳ ಕಷ್ಟ ಪಟ್ಟೆ,
ಆದರೂ ನಿನ್ನ ನಾನು ಇಷ್ಟ ಪಟ್ಟೆ….

ನನ್ನ ನೋವ ಕಂಡ ನಿನ್ನ ಎರಡೂ ಕಣ್ಣಲ್ಲಿ,
ನೋವು ನಿನಗೆ ಹೆಚ್ಚು ಬಿದ್ದಾಗ ನಾನು ಮಣ್ಣಲ್ಲಿ,
ಆಡ ಬಯಸುವೆ ಆಟ ಮಗುವಾಗಿ ನಿನ್ನೊಂದಿಗೆ,
ಮರೆಯಲಾರೆ ನಿನ್ನ, ನಿನ್ನ ನೆನಪೇ ನನ್ನೊಂದಿಗೆ….

ಬಯದಿ ಅವಿತು ನೆನಪು ನಿನ್ನ ಬೆನ್ನಲ್ಲಿ,
ಮಗುವಾಗಿ ಆಡುವಾಸೆ ನಿನ್ನ ಬಳಿಯಲ್ಲಿ,
ಮಗುವಾಗಿ ಮಲಗುವಾಸೆ ನಿನ್ನ ತೋಳಲ್ಲಿ,
ಮಗುವಾಗಿ ನಲಿವ ಆಸೆ ನಿನ್ನ ಜೊತೆಯಲ್ಲಿ!❣….

ಅಪ್ಪ  ಐ  ಲವ್ ಯೂ….❤❤❣

 

ಸುಶ್ಮಿತಾ.  ಆರ್

ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

To My Ultimate Role Models

Credit : Akshatha R Kamath

Yes, I know,

The journey has its own ups and down…

But I could rather deny, coz, her dreams are through my eyes…

She sees me, as the rower of her boat,

As the writer of her note…

She wants me to achieve umpteen things, she couldn’t; and learn all kinds of things, she didn’t…

She has poured her life into me and ignited the interminable light within…

So, for my lovely Alladin, I wish to be a Djinn…

Not only to her, but also to the person, who is always by my side,

He is the best companion and an incredible guide…

He, never, expressed his love in words, rather he preferred actions…

He kept all is works and care unseen, unlike maa, who would always shower her care and love ❤

Probably he was left unrecognized…

He felt our pain but couldn’t cry,

He knew our needs so he would try…

Try and Try until his last breath, to make everyone contempt,

But probably he forgot, he too is a living being… 

He too needs rest; he too could rely on my shoulder when he is tired…

Hey Krishna, pls listen to my urges, coz they aren’t my wishes or wants, but they are my needs…

Moreover, they are my goals, that, I have to, I will and I must, flourish it…

I plead to u give me energy, to overcome all the obstacles, humiliation, failures, to not get distracted, to discontinue the path of struggle…

I hope that ur love and well wishes are always with me…

 

Akshatha R Kamath

I Year BSc

Kateel Ashok Pai Memorial College, Shivamogga

ಸ್ವಾಭಿಮಾನದ ಕಡಲು ನನ್ನಮ್ಮ ನೊಡಲು……..

Image Credit : Google / Merrill Weber

ಯಾಕೆ !? ತಾಯಂದಿರ ದಿನದಂದು ಮಾತ್ರ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಸೋಶಿಯಲ್ ಮೀಡಿಯಾಗಳಲ್ಲಿ, ಪತ್ರಿಕೆಗಳಲ್ಲಿ ಬರೆಯಬೇಕೇ ? ತನ್ನ ಹೃದಯದ ಮಂದಿರದಲ್ಲೇ ನಮ್ಮನ್ನು ಇಟ್ಟುಕೊಂಡಿರುವ ತಾಯಿಯ ಬಗ್ಗೆ ಪ್ರತಿದಿನವೂ ನೆನೆಸಿಕೊಳ್ಳುತ್ತಾ ಮೈ ಮರೆಯಬಾರದೇಕೆ ? ಅದಕ್ಕಾಗಿಯೇ ಇವತ್ತೊಂದು ತಾಯಿಯ ಬಗೆಗಿನ ಭಾವನಾತ್ಮಕ ಲೇಖನವನ್ನು ಓದಿ ;

ಸ್ವಾಭಿಮಾನ, ಧೈರ್ಯ, ಆತ್ಮ ವಿಶ್ವಾಸ, ಆತ್ಮಗೌರವವನ್ನು ನಾನು ಕಲಿಯಲಾರಂಬಿಸಿದ್ದು ನನ್ನಮ್ಮನನ್ನು ನೋಡಿ. ಅವಳು ನಿರೂಪಮಾಧ್ಬುತ. ಅವಳನುಭವಿಸಿದ ಕಷ್ಟಗಳು, ನೋವು, ಅವಮಾನಗಳು, ಅನುಮಾನಗಳು ಒಂದೇ ಎರಡೆ !..? ಆಕೆಯೊಡಲಾಳದಲ್ಲಿ ಅದೆಷ್ಟು ನೋವುಗಳಿದೆಯೋ ಅದೆಷ್ಟು ಪ್ರಶ್ನೆಗಳಿವೆಯೋ..? ಬಲ್ಲವರಾರು !. “ಹುಟ್ಟಿನಿಂದ ಸಾಯವವರೆಗೂ ಇದೆ ಹಣೆ ಬರಹ”. ಇದು ಅವಳ ಸರ್ವೇ ಸಾಮಾನ್ಯ ಮಾತು. ತನ್ನ ನೋವಿನಡುಗೆಯನ್ನ ತಾನೊಬ್ಬಳೇ ಉಂಡು ಅರಗಿಸಿಕೊಳ್ಳಲೂ ಆಗದೆ ಹಾಗೆ ಬಸಿರಲ್ಲೇ ಇಟ್ಟುಕೊಳ್ಳಲೂ ಆಗದೇ ಮರುಗುತಿಹಳು ನನ್ನಮ್ಮ.

ಕೂಡು ಕುಟುಂಬವೆಂಬ ಸಂಪಿಗೆ ಮರದಲ್ಲಿ ಅರಳಿದ ಮೊದಲ ಹೂವು ನನ್ನಮ್ಮ. ಅವಳು ತನ್ನ ಹದಿಮೂರನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡಳು, ತಂದೆ ಹೊರಟ ಹಲವು ದಿನಗಳಲ್ಲೇ ಕೂಡು ಕುಟುಂಬ ಬೇಸಿಗೆಯಲ್ಲಿ ಗದ್ದೆ ಬಿರಿದಂತೆ ಬಿರಿಯಿತು. ಆಗ ಆಕೆಯ ಮೇಲೆ ಮೂವರು ತಂಗಿಯರು ಹಾಗೂ ಓರ್ವ ತಮ್ಮನ ಜವಾಬ್ದಾರಿ ಬಿತ್ತು. ಏನೂ ಅರಿಯದ ಮುಗ್ಧ ಮನದ ಅಮ್ಮ ಒಂದೆಡೆಯಾದರೆ ಇನ್ನೊಂದೆಡೆ ಅರಿಯದ ವಯಸ್ಸಿನಲ್ಲಿ ತಂದೆಯಿಂದ ತೆಗೆದುಕೊಂಡ ಭಾಷೆ, ದುಡಿಯಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಊರಿನ ಬ್ರಾಹ್ಮಣರ ಮನೆಯಲ್ಲಿ ಕಾಯಕ ತೋರಿದಾಗ ಅವಳಿಗೆ ಬೆಲ್ಲ ತಿಂದಷ್ಟು ಖುಷಿ. ಯಾರದ್ದೋ ಮನೆಯ ಎಂಜಲ ಬಟ್ಟಲ ತೊಳೆದಳು. ಆದರೆ, ಒಂದು ದಿನವೂ ಕೂಡ ತನ್ನ ಕೆಲಸದ ಮೇಲೆ ಅಸೂಯೆ ಪಡಲಿಲ್ಲ ಆಕೆ.

“ಸ್ವಂತ ದುಡಿಮೆಯೇ ಜೀವನ” ಎಂಬುದೇ ಅಮ್ಮನ ಬಾಳ ಸೂಕ್ತಿ. ಕಷ್ಟಗಳ ಸಾಲು ಒಂದರಮೇಲೊಂದು ಬಂದರೂ ಎಂದಿಗೂ ಆತ್ಮ ವಿಶ್ವಾಸ ಕಳೆದುಕೊಳ್ಳದೇ ಗಟ್ಟಿ ಗೊಡೆಯಾಗಿ ನಿಂತಳು. ಮನೆಯನ್ನು ನಿಭಾಯಿಸಲು ಅಕ್ಕನಿಗೊಬ್ಬಳಿಗೆ ಕಷ್ಟ ಎಂದು ಸ್ವ – ಅರಿವು ಮೂಡಿಸಿಕೊಂಡ ತಂಗಿಯರು ಊರಲ್ಲಿದ್ದ ಶಾಲೆಯಲ್ಲಿ ಅಕ್ಷರ ಜ್ಞಾನವನ್ನು ಪಡೆದುಕೊಂಡರು. ಪ್ರೌಢ ಶಿಕ್ಷಣಕ್ಕಾಗಿ ದೂರದೂರಿಗೆ ನಡೆದೇ ಹೋಗಬೇಕಾದ್ದರಿಂದ ಮೊದಲು ಮತ್ತು ಕೊನೆಯ ತಂಗಿ – ತಮ್ಮಂದಿರು ವ್ಯಾಸಂಗವನ್ನು ಅಲ್ಲೇ ಅರ್ಧ ದಾರಿಗೇ ಮರೆತರು. ಆದರೆ ಕಲಿಕೆಯ ಹಸಿವು ಎರಡನೆ ತಂಗಿಯನ್ನು ಬಿಡಲೇ ಇಲ್ಲ, ಆಕೆ ಕೂಡ ತನಗೆ ಕೈಗೆಟಕಿದ ಕೆಲಸ ಮಾಡಿ ತನ್ನ ಓದನ್ನು ಮುಂದುವರಿಸಿದಳು. ಅದೆಷ್ಟೋ ದಿನದ ಉಪವಾಸ, ಅದೆಷ್ಟೋ ಗೋಳಾಟ, ಕಂಬನಿಗಳು, ಬಿಸಿಯುಸಿರು ನನ್ನಮ್ಮನ ದೇಹದ ಮಾಂಸ ಖಂಡಗಳಂತೆ….. ಇದರ ನಡುವೆಯೇ ಪುಟ್ಟ ತಮ್ಮನ ಆರೋಗ್ಯ ಕೈ ಮೀರಿದಾಗ ತಾನೊಬ್ಬಳೇ ಒಬ್ಬ ಪುರುಷನ ಸರಿ ಸಮನಾಗಿ ನಿಂತು ಯಮನೆದುರು ತಿಂಗಳುಗಟ್ಟಲೆ ಹೋರಾಡಿ ತಮ್ಮನನ್ನು ಉಳಿಸಿಕೊಂಡಳು ನನ್ನಮ್ಮ…. ತನ್ನ ಯವ್ವನ ಪೂರ್ತಿ ಬೇರೆಯವರಿಗಾಗಿಯೇ ತೆಯ್ದಳು ಅಮ್ಮ…..ಅವಳೇ ನನ್ನ ಅಮ್ಮ…..

ವಿವಾಹದ ವಯಸ್ಸಿಗೆ ಬಂದಾಗ ಆಕೆಯ ಬಾಳಿಗೇ ಇನ್ನೊಂದು ಅಚ್ಚರಿ ಕಾದಿತ್ತು. ಅದುವೇ ತಾಯಿ ಇಲ್ಲದ ಎರಡು ಮುಗ್ಧ ಮಕ್ಕಳ ಜವಾಬ್ದಾರಿ. ತಿರಸ್ಕರಿಸಲು ಅವಕಾಶವೇ ಇಲ್ಲದಂತಹ ಸಂದರ್ಭ ಒದಗಿದಾಗ ಆಕೆಯ ಇಷ್ಟ ಕಷ್ಟಗಳನ್ನು ಕೇಳಿದವರೇ ಇಲ್ಲ !. ನವ ಜೀವನದಲ್ಲೂ ನವ ತಿರುವುಗಳು, ಹೊಸ ಸಮಸ್ಯೆಗಳು. ಬೇರಾವುದೇ ದಾರಿ ಇಲ್ಲದೆ ಕಂಡಂತಹ ದಾರಿಯಲ್ಲಿ ನಡೆಯಬೇಕಾಯಿತು. ತವರು ಮನೆಯ ಸೊಬಗನ್ನು ತೊರೆಯಲೇಬೇಕಾದ ಆ ಕಷ್ಟದ ಅನುಭವವನ್ನು ಅನುಭವಿಸಿದವರಿಗೆ ಗೊತ್ತು. ಹೊಸ ಮನೆಯಲ್ಲಿ ನಾಲ್ಕು ಜನ ಕುಳಿತುಕೊಳ್ಳಲು ಕಷ್ಟವಾಗುವಂತಹ ಇಕ್ಕಟ್ಟಿನ ಜಾಗ….. ತರಕಾರಿ ಹೆಚ್ಚುವ ಕತ್ತಿಗೂ ಗತಿ ಇಲ್ಲದಂತಹ ಕ್ಲಿಷ್ಟ ಪರಿಸ್ಥಿತಿ, ಜೊತೆಗೆ ಅರಿಯದ ಎರಡು ಮುಗ್ಧ ಮಕ್ಕಳು ಬೇರೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ನನ್ನ ಅಮ್ಮನಿಗೆ ತಾನು ಸ್ವಂತ ಮನೆಯನ್ನ ಕಟ್ಟಲೇಬೇಕೆಂಬ ಛಲ, “ನನ್ನ ಕಣ್ಣೀರು, ನನ್ನ ನೋವುಗಳು ನನ್ನ ಮಕ್ಕಳಿಗೆ ಕಾಣಬಾರದು” ಎಂದು ಕೈಲಾದಷ್ಟು ದುಡಿದು ಸಂಪಾದಿಸಿದ ಹಣದಿಂದ ಮನೆಯ ಅಡಿಪಾಯವನ್ನಂತು ಮಾಡಿದಳು, ಆದ್ರೆ ಆ ಹೊತ್ತಿಗೆ ಗರ್ಭಿಣಿಯಾಗಿದ್ದ ನನ್ನಮ್ಮನಿಗೆ ಮತ್ತೊಂದು ಆಘಾತ ಕಾದಿತ್ತು.

ತುಂಬು ಗರ್ಭಿಣಿಯಾದ ಅವಳು ತಣ್ಣಗೆ ಬಾಗಿಲ ಬಳಿಯಲ್ಲಿ ದಣಿದು ಮಲಗಿದ್ದಾಗ ಆಡುವ ಮಕ್ಕಳೆರಡು ಬಂದು ಅರಿಯದೆ ಆಕೆಯ ಹೊಟ್ಟೆಯ ಮೇಲೆ ತಮ್ಮ ಕಾಲಿಟ್ಟು ಜಿಗಿದರು. ತೀವ್ರ ನೋವಲ್ಲಿ ಹೊಟ್ಟೆಯ ಒಳಗಡೆಯೇ ಒದ್ದಾಡಿ – ಒದ್ದಾಡಿ ಕಣ್ತೆರೆವ ಮೊದಲೇ ತನ್ನ ಕಣ್ಣನ್ನ ಗರ್ಭದಲ್ಲೇ ಮುಚ್ಚಿತು ಆ ಮಗು. ಒಂಭತ್ತು ತಿಂಗಳು ಹೊತ್ತ ಮಗು ಕೈಗೆ ಸಿಗದಂತಹ ಪರಿಸ್ಥಿತಿಯಲ್ಲೂ ಕುಗ್ಗದ ನನ್ನಮ್ಮ, ನಿಂದನೆಯ ಮಾತುಗಳನ್ನು ನುಂಗಿದ ನನ್ನಮ್ಮ ತನ್ನ ಮನೆಯ ಕೆಲಸಗಳನ್ನು ಮುಂದುವರಿಸಿದಳು. ಅಷ್ಟರಲ್ಲಿ ಮತ್ತೆ ಗರ್ಭಿಣಿಯಾದ ನನ್ನಮ್ಮ ನನ್ನನ್ನು ತನ್ನ ಗರ್ಭದಲ್ಲಿ ಹೊತ್ತಳು. ತಾಯಿ ಇಲ್ಲದ ಆ ಎರಡು ಮುಗ್ಧ ಮಕ್ಕಳನ್ನು ಎಂದಿಗೂ ಬೇರೆಯವರೆಂದು ಭಾವಿಸದೇ ತನ್ನ ಸ್ವಂತ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯನ್ನು ಉಣಿಸಿ ಸಾಕಿದಳು. ನಾನು ಆಕೆಯ ಸ್ವಂತ ಮಗಳೇ ಆದರೂ ನನ್ನನ್ನು ಎಂದಿಗೂ ಕೂಡ ಅತಿಯಾಗಿ ಪ್ರೀತಿಸಲಿಲ್ಲ, ನನಗೆ ಕೆಲವೊಮ್ಮೆ ಅನುಮಾನವಾಗುತ್ತದೆ “ಈಕೆ ನಿಜವಾಗಿಯೂ ನನ್ನ ತಾಯಿಯೇ” ಎಂದು. ಇಂದಿಗೂ ಕೂಡ ನನಗೆಂದೇ ಪ್ರತ್ಯೇಕವಾಗಿ ಯಾವುದನ್ನೂ ಎತ್ತಿಟ್ಟವಳಲ್ಲ ನನ್ನಮ್ಮ, ಒಂದು ದಿನವೂ ನನ್ನನ್ನ ಮುದ್ದು ಮಾಡಿದವಳಲ್ಲ ನನ್ನಮ್ಮ, ಅಬ್ಬಾ….! ಅವಳಷ್ಟು ತಾಳ್ಮೆ ಯಾರಿಗೂ ಇಲ್ಲ. ನೋವಿನಲ್ಲಿ ತನ್ನ ಹೃದಯ ಜರ್ಜರಿತವಾಗಿದ್ದರು ಎಂದಿಗೂ ರಕ್ತದ ಕಲೆಯನ್ನು ತೋರಿದವಳಲ್ಲ ನನ್ನಮ್ಮ. ಅವಲಂಬನೆ ಎಂಬುದೊಂದು ಬಂಧನ ಎಂದು ಅರಿತ ಅವಳು ಮುಕ್ತ ಜೀವನವನ್ನೇ ನಡೆಸಿದಳು. ಆಕೆಯ ಪ್ರೀತಿಗೆ ಪಾಲುದಾರರಿದ್ದಾರಲ್ಲವೇ, ಅವರಿಗೂ ಕೂಡ ನ್ಯಾಯ ಒದಗಿಸಬೇಕಲ್ಲವೇ ?!. ಪುಣ್ಯ ಮಾಡಿರುವೆನು ಅವಳ ಮಡಿಲ ಮಗುವಾಗಿ ಬೆಳೆಯಲು, ಆಕೆಯ ಜೀವನವೇ ನನಗೆ ಕಲಿಸಿಕೊಟ್ಟ ಪಾಠವೆಂದರೆ ನಾವೆಂದಿಗೂ ಯಾವುದಕ್ಕೂ ಯಾರನ್ನೂ ಅವಲಂಬಿಸಬಾರದು ಅದು ಅನ್ನಕ್ಕೇ ಆಗಿರಲಿ, ಅರಿವಿಗೇ ಆಗಿರಲಿ ಅಥವಾ ಆಶ್ರಯಕ್ಕೇ ಆಗಿರಲಿ…….ಜಗತ್ತಿನ ಎಲ್ಲಾ ತಾಯಂದಿರಿಗೂ ಶತ ಶತ ನಮನಗಳು.

 

ಬರಹ : ಕವನ ಕೆ.,

ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

 

Teachers Day:2023

‘ಸಂಧ್ಯಾ’ ಕಾಲದಲಿ ‘ಅನರ್ಘ್ಯ’ ‘ಶ್ರೀಕರ’ನ ‘ರೇಷ್ಮೆ’ಯ
‘ಕಿರಣ’ಗಳು
‘ಅನು’ದಿನವು ‘ಶ್ವೇತ’ಪತ್ರಗಳ ಮೇಲೆ ‘ಮಂಜಿ’ನ
‘ಹನಿ’ಯ ಸುರಿಸುತ ‘ನೆನೆಸಿ’
‘ಸುನೀಲಾ’ಕಾಶದಲಿ ‘ರಜತ’ ಮೇಘಗಳ ‘ಅಂಜಿ’ಸಿ
ಹುತ’ವಹಾಬ’ನ ಹಿಂದಿಕ್ಕಿ ಹರಿಸುತ ‘ವಿಭಾ’ವಳಿಯ
‘ಚೆನ್ನ-ವಿಶ್ವ’ದಲಿ ಮುರುಳಿ ‘ರಾಯ’ನ ‘ಶೃತಿ’ಯ ‘ಮೋಹಿಸುತ’
‘ಜೇನ”ಸುವರ್ಚಲ’ ‘ಪ್ರಶಾಂತ’ ಮನಸಿನಲಿ
‘ಹುಚ್ಚ’ನ ಗುರು-‘ಪ್ರೇಮ’ ಕವಿತೆಗಳ
‘ನವೀನ’ ‘ಕಾವ್ಯದಿಂಚರ’ಗಳು ಕಡೆದು
‘ಅಶ್ವಿನಿ’ಯ ‘ರೂಪ’ವಿಹ ‘ವಜ್ರಕಾಯ’ನ
‘ಕೀರ್ತಿ’ಯ ಮಿತ್ರ,
ಉರದಿ ‘ನಾಗ’ವ ಧರಿಸಿಹ ಗುರು-‘ಗಣೇಶ’ನ ‘ಪೂಜೆ’ಯ
‘ವಿನಯ’ದಿ ‘ಅರ್ಚಿಸಿ’
ಹೆಸರ ಅರಿಯದ ಗುರುವ ಕ್ಷಮಿಸೆಂದು ಬೇಡುತ
ಸಹಸ್ರ ‘ಮನುಷ್ಯ’ ಜನುಮದಲಿ ‘ಸಂತೋಷ’ಕೆ ‘ಮೇರೆ’ಗಳಿಲ್ಲದೆ ನೀವು ಬದುಕಿ , ನಾವು ನಿಮ್ಮ ಪಾದದ
ಧೂಳಾಗಿರಲೆಂದು ‘ಶ್ರೀದೇವಿಗೆ’
‘ಅಶೋಕ’ವನದಡಿಗಿರುವ ಇವರೆಲ್ಲರಿಗೂ ‘ಶಿಕ್ಷಕರ-ದಿನಾಚರಣೆ’ಯ ದಿನ ಆಶೀರ್ವಾದಗಳ ‘ಅಕ್ಷಯ-ಪ್ರಸಾದವನು’ ನೀಡೆನುತ ಕೇಳುತಲಿ…..

 

ರಕ್ಷಿತ್.  ಹೆಚ್. ಆರ್

ತೃತೀಯ ಬಿ ಎ ,  ವಿಧ್ಯಾರ್ಥಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

 

ಶಿಕ್ಷಕರ ದಿನಾಚರಣೆ ಪ್ರಯುಕ್ತ, ಕಾಲೇಜಿನ ಎಲ್ಲ ಅಧ್ಯಾಪಕರುಗಳ ಹೆಸರಿನಲ್ಲಿ ರಚಿಸಿರುವ ಕವನ,

ಸದ್ಯವಾದರೆ ! ಅವುಗಳನ್ನು ಗುರುತಿಸಿ ಕಮೆಂಟ್‌ ಮಾಡಿ. 

 

 

ವಿಶ್ವ ಸಾಹಿತ್ಯದ ಪರಿಚಯ – ಒಂದು ವಿಶೇಷ ಕಾರ್ಯಗಾರ

ಸಾಹಿತ್ಯದ ಓದು ಮತ್ತು ಚರ್ಚೆ ಮಾನವ ತನ್ನನ್ನು ಹಾಗೂ ತನ್ನ ಸಮಾಜವನ್ನು ಆತ್ಮಾವಲೋಕನಕ್ಕೊಳಪಡಿಸಲು ಸಹಾಯಮಾಡುತ್ತದೆ. ಈ ನಿಟ್ಟಿನಲ್ಲಿ ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಆಯೋಜಿಸಿದ್ದ “ವಿಶ್ವ ಸಾಹಿತ್ಯದ ಪರಿಚಯ” ಎಂಬ ವಿಷಯದ ಮೇಲಿನ ಕಾರ್ಯಾಗಾರ ನಮ್ಮ ಸಮಾಜವನ್ನು ಮತ್ತಷ್ಟು ಅರಿತುಕೊಳ್ಳಲು ಸಹಾಯ ಮಾಡಿತು. ಈ ಕಾರ್ಯಗಾರದಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳು ಜಗತ್ತಿನ ಶ್ರೇಷ್ಠ ಬರಹಗಾರರು ಹಾಗೂ ಕೃತಿಗಳನ್ನು ಪರಿಚಯ ಮಾಡುವ ಮೂಲಕ ನಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿದರು.

ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಶ್ರೀ ಸೋಮನಹಳ್ಳಿ ದಿವಾಕರ್ ರವರು ಪಾಕಿಸ್ತಾನದ ಪ್ರಖ್ಯಾತ ಲೇಖಕ ಸಾಧತ್ ಹಸನ್ ಮಂಟೋರವರ ಜೀವನ ಹಾಗೂ ಕೃತಿಗಳ ಬಗ್ಗೆ ಬೆಳಕು ಚೆಲ್ಲುತ್ತಾ, ಮಂಟೋರವರ “ಕೋಲ್ ದೋ” ಹಾಗೂ “ಟೋಬಾ ಟೇಕ್ ಸಿಂಗ್” ಕೃತಿಗಳಲ್ಲಿ ಭಾರತ ಪಾಕಿಸ್ತಾನ ವಿಭಜನೆಯ ಸಂದರ್ಭದ ಮಕ್ಕಳು, ಮಹಿಳೆಯರು ಹಾಗೂ ಅನ್ಯಕೋಮಿನವರ ಮೇಲಾದ ದೌರ್ಜನ್ಯದ ವಿವರಣೆಯಂತೂ ಅವರು ವಿವರಿಸುವಾಗ ನಮ್ಮನ್ನು ದಿಗ್ಬ್ರಮೆಗೊಳಿಸಿತು. ಇನ್ನು ದಿವಾಕರ್ ಸರ್ ಅವರು ಪೋಲ್ಯಾಂಡಿನ ಲೇಖಕ ಹಾಗೂ ಪತ್ರಕರ್ತ ಟಡಾಯಿಸ್ ಬೋರೋಸ್ಕಿ ಅವರ “ದಿಸ್ ವೇ ಫಾರ್ ಗ್ಯಾಸ್ ಲೇಡೀಸ್ ಅಂಡ್ ಜೆಂಟಲ್ ಮೆನ್” ಕೃತಿಯನ್ನು ಪರಿಚಯಿಸುತ್ತಾ ಜರ್ಮನಿಯಲ್ಲಿ ಹಿಟ್ಲರ್ ನ ಕಾಲದಲ್ಲಿ ಯಹೂದ್ಯರ ಮೇಲಾದ ಆಕ್ರಮಣದ (ಹಾಲೋ ಕಾಸ್ಟ್) ವಿವರಣೆ ನಮ್ಮನ್ನು ಮೂಕ ವಿಸ್ಮಿತರನ್ನಾಗಿಸಿತು.

ಮತ್ತೊಬ್ಬ ಖ್ಯಾತ ಲೇಖಕ ಹಾಗೂ ಅನುವಾದಕರಾದ ಡಾ.ಮಾಧವ ಚಿಪ್ಪಲ್ಲಿ ಅವರು ರಷ್ಯಾದ ರಾಜಪ್ರಭುತ್ವ ಮತ್ತು ಸಮಾಜದ ವಿವರಣೆಯನ್ನು ನೀಡುತ್ತಾ, ರಾಜಮನೆತನಕ್ಕೆ ಸೇರಿದ್ದರೂ ದಿವಾಳಿತನವನ್ನು ಅನುಭವಿಸಿ ನಂತರ ತನ್ನ ಬರಹಗಳ ಮೂಲಕ ಬಡತನವನ್ನು ಗೆದ್ದ ರಷ್ಯಾದ ಖ್ಯಾತ ಲೇಖಕ ಲಿಯೋ ಟಾಲ್ ಸ್ಟಾಯ್ ಜೀವನವನ್ನು ಪರಿಚಯಿಸಿದರು. ಟಾಲ್ ಸ್ಟಾಯ್ ಅವರ ಗಮನಾರ್ಹ ಕೃತಿಗಳಾದ “ವಾರ್ ಅಂಡ್ ಪೀಸ್”, “ಹೌ ಮಚ್ ಲ್ಯಾಂಡ್ ಡಸ್ ಎ ಮ್ಯಾನ್ ನೀಡ್” ಬಗೆಗಿನ ವಿವರಣೆ ರಾಜ್ಯಾಡಳಿತದ ಬಗ್ಗೆ ವಿಭಿನ್ನ ದೃಷ್ಟಿಕೋನವನ್ನು ಒದಗಿಸಿತು.

ಸ್ತ್ರೀವಾದಿ ಲೇಖಕಿ ಶ್ರೀಮತಿ ಜಯಶ್ರೀ ಕಾಸರವಳ್ಳಿ ಅವರು ಜೆಂಡರ್ ಸ್ಟಡೀಸ್ ಅಧ್ಯಯನ ಮಾಡುವ ವಿಧಾನವನ್ನು ವಿವರಿಸುತ್ತಾ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆ ಹೇಗೆ ದಬ್ಬಾಳಿಕೆಯ ಸಾಧನವಾಗಿದ್ದಾಳೆ ಎಂಬುದನ್ನು ಜಾನ್ ಹೂಸ್ಟನ್ ಅವರ “ರಿಫ್ಲೆಕ್ಷನ್ ಇನ್ ಎ ಗೋಲ್ಡನ್ ಐ” ಮತ್ತು ತೆಹೆಮಿನ ದುರೈನಿ ಅವರ “ಮೈ ಫ್ಯೂಡಲ್ ಲಾರ್ಡ್” ಕೃತಿಗಳ ಮೂಲಕ ವಿವರಿಸಿದರು.

ಶಿವಮೊಗ್ಗದ ಲೇಖಕ, ವಿಮರ್ಶಕ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊಫೆಸರ್ ಟಿ.ಪಿ.ಅಶೋಕ್ ಯುರೋಪಿನ ಹೆಸರಾಂತ ಬರಹಗಾರರಾದ ಫ್ರಾನ್ಸ್ ಕಾಫ್ಕ ಹಾಗೂ ಆಲ್ಬರ್ಟ್ ಕಮು ಅವರ “ದ ಟ್ರಯಲ್”, “ದ ಕ್ಯಾಸೆಲ್”, “ದಿ ಮೆಟಾಮಾರ್ಫಸಿಸ್” ಹಾಗೂ “ದಿ ಕಲಿಗುಲಾ” ಕೃತಿಗಳನ್ನು ವಿವರಿಸುತ್ತಾ ಸಾಹಿತ್ಯದ ವಿದ್ಯಾರ್ಥಿಗಳಿಗೆ ಸಾಹಿತ್ಯ ಜಗತ್ತಿನ ಆಳ ಅಗಲವನ್ನು ಅರಿಯಲು ಕನಿಷ್ಠ ಎರಡು ಭಾಷೆಗಳ ಸಾಹಿತ್ಯ ಪರಿಚಯ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರು. ಕನ್ನಡದ ಮತೋರ್ವ ವಿಮರ್ಶಕ, ಲೇಖಕ ಡಾ.ರಾಜೇಂದ್ರ ಚೆನ್ನಿ ಅವರು ಪ್ರಸ್ತುತ ಸನ್ನಿವೇಶದಲ್ಲಿ ಸಾಹಿತ್ಯ ಮತ್ತು ಅದರ ಪ್ರಾಮುಖ್ಯತೆಯ ಸಂಕ್ಷಿಪ್ತ ದೃಷ್ಟಿಕೋನವನ್ನು ವಿದ್ಯಾರ್ಥಿಗಳಿಗೆ ನೀಡಿದರು.

ಒಟ್ಟಿನಲ್ಲಿ ವಿಶ್ವ ಸಾಹಿತ್ಯದ ಪರಿಚಯ ಕಾರ್ಯಗಾರವನ್ನು ಬೇರೆ ಬೇರೆ ಕಾಲೇಜುಗಳ ಸಾಹಿತ್ಯದ ವಿದ್ಯಾರ್ಥಿಗಳನ್ನು ಸಹ ಒಳಗೂಡಿಸಿಕೊಂಡು ಹಲವು ಸಾಹಿತ್ಯದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ನೆರವೇರಿಸಿದ್ದು ಬಹಳ ಉಪಯುಕ್ತವಾಯಿತು. ಇದರಿಂದ ನಮ್ಮ ಮುಂದಿನ ಸಾಹಿತ್ಯದ ಓದಿಗೆ ಹೆಚ್ಚಿನ ಸಹಕಾರ ದೊರೆತಂತಾಯಿತು. ಹೀಗೆ ಶಿವಮೊಗ್ಗದ ಸಾಹಿತ್ಯ ವಿಭಾಗ ಹೊಂದಿರುವ ಎಲ್ಲಾ ಕಾಲೇಜುಗಳು ಇದೇ ರೀತಿ ಹಲವು ಸಾಹಿತ್ಯದ ಕಾರ್ಯಕ್ರಮಗಳನ್ನು ಮಾಡುತ್ತಿರಲಿ, ಮತ್ತೆ ಮತ್ತೆ ಸಾಹಿತ್ಯದ ಕಾರ್ಯಕ್ರಮಗಳನ್ನು ಆಸ್ವಾದಿಸಲು ನಾವೆಲ್ಲರೂ ಒಟ್ಟಿಗೆ ಸೇರೋಣ ಎಂದು ಆಶಿಸುತ್ತೇವೆ.

ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಇಂಗ್ಲೀಷ್ ವಿಭಾಗದಿಂದ ಆಯೋಜಿಸಲ್ಪಟ್ಟ ವಿಶ್ವಸಾಹಿತ್ಯದ ಪರಿಚಯ ಎಂಬ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ಬರೆದ ಲೇಖನ.

ಸಹನ & ವಿಸ್ಮಯ

ದ್ವಿತೀಯ ಬಿ ಎ (ಸಾಹಿತ್ಯದ ವಿದ್ಯಾರ್ಥಿನಿಯರು)

ಕಮಲ ನೆಹರು ರಾಷ್ಟ್ರೀಯ ಸ್ಮಾರಕ ಮಹಿಳಾ ಕಾಲೇಜು, ಶಿವಮೊಗ್ಗ.

 

ಪುಸ್ತಕ ವಿಮರ್ಶೆ

ಕಾಲೇಜಿನಲ್ಲಿ ಗ್ರಂಥಾಲಯ ಇದ್ದರೂ, ಹೊರಗಡೆ ಪುಸ್ತಕ ಕೊಂಡುಕೊಂಡು ಓದುವುದು ನನ್ನ ರೂಢಿ.. ಹಾಗಾಗಿ ಏನಾದರೂ ಕೆಲಸವಿದ್ದರೆ ಮಾತ್ರ ಕಾಲೇಜು ಗ್ರಂಥಾಲಯದ ಕಡೆಗೆ ಪಯಣ.. ಹೀಗೆ ಮೊನ್ನೆ ಕಾಲೇಜು ಲೈಬ್ರರಿಗೆ ಭೇಟಿ ನೀಡಿದ್ದೆ, ಗಣೇಶ್ ಸರ್ ಯಾವುದೋ ಪುಸ್ತಕ ಹುಡುಕುವುದರಲ್ಲಿ ನಿರತರಾಗಿದ್ದರು.. ಯಾಕೋ ಗಂಭೀರವಾಗಿರುವಂತೆ ಕಂಡರು.. ಹೇಗೆ ಕೇಳುವುದು ತಿಳಿಯದೇ ಅಳುಕುತ್ತಲೇ, ಸರ್, ಇಲ್ಲಿರುವ ಪುಸ್ತಕಗಳು ವಿದ್ಯಾರ್ಥಿಗಳಿಗೆ ಅಷ್ಟೇನಾ ಅಥವಾ ಉಪನ್ಯಾಸಕರೂ ಓದಬಹುದಾ ? ಎಂದು ಕೇಳಿದೆ.. ತಕ್ಷಣಕ್ಕೆ ಉತ್ತರಿಸಿದ ಅವರು ಗ್ರಂಥಾಲಯ ಇರುವುದೇ ಓದುವವರಿಗಾಗಿ ಮೇಡಂ ಎಂದರು…

ಹಾಗೆಯೇ, ಕನ್ನಡ ಪುಸ್ತಕಗಳಿರುವ ವಿಭಾಗದಲ್ಲಿ ಪುಸ್ತಕಗಳನ್ನ ಹುಡುಕುವಾಗ ನನ್ನ ಕೈ ಗೆ ಸಿಕ್ಕಿದ್ದು, ಧಾರವಾಡದ ಪಡ್ಡೆ ದಿನಗಳು ಪುಸ್ತಕ.. ಈ ಪುಸ್ತಕವನ್ನು ಬರೆದವರು ಖ್ಯಾತ ವಿಮರ್ಶಕರು, ಕಥೆಗಾರರು,ಲೇಖಕರಾಗಿರುವ ರಾಜೇಂದ್ರ ಚೆನ್ನಿ… ಅವರನ್ನು ಪ್ರತಿದಿನವೂ ಹತ್ತಿರದಿಂದ ನೋಡುವುದರಿಂದ ಅವರ ಪುಸ್ತಕವನ್ನು ಒಮ್ಮೆ ಓದಬೇಕೆನಿಸಿತು. ಆ ಪುಸ್ತಕವನ್ನು ತೆಗೆದುಕೊಂಡು ಲೈಬ್ರರಿಯಿಂದ ಹೊರನಡೆದೆ.

ಲೇಖಕರು ಈ ಪುಸ್ತಕದಲ್ಲಿ ಕಾಲೇಜು ದಿನಗಳಲ್ಲಿದ್ದಾಗ ಅನುಭವಿಸಿದ ಪಡ್ಡೆ ದಿನಗಳನ್ನು 11 ಅಧ್ಯಾಯಗಳಲ್ಲಿ ಬರೆದಿದ್ದಾರೆ. ಪುಸ್ತಕದ ಪ್ರತೀ ಅಧ್ಯಾಯವೂ ಕೂಡ ವಿಭಿನ್ನವಾಗಿದೆ. ನಟಿ ಹೇಮಾ ಮಾಲಿನಿಯವರು ಗಿರೀಶ್ ಕಾರ್ನಾಡ್ ಅವರನ್ನ ಮದುವೆ ಆಗ್ತಾರೆ. ಅವರು ಧಾರವಾಡದ ಸೊಸೆಯಾಗ್ತಾರೆ ಎನ್ನುವ ಸುದ್ದಿಯನ್ನ ಪೇಪರ್ ನಲ್ಲಿ ಓದಿ, ಕುತೂಹಲದಿಂದ ಆ ದಿನಕ್ಕಾಗಿ ಕಾಯುವ ಸ್ನೇಹಿತರ ಬಳಗದ ಕುರಿತು ಮೊದಲ ಅಧ್ಯಾಯದಲ್ಲಿ ಬರೆಯಲಾಗಿದೆ.

ಆಮೇಲಿನ ಅಧ್ಯಾಯಗಳಲ್ಲಿ ಅವರು ತಮ್ಮ ಕರ್ನಾಟಕ ಕಾಲೇಜನ್ನು ಹುಲಗೂರು ಸಂತಿ ಎಂದಿದ್ದಾರೆ. ಆಗೆಲ್ಲಾ ಕಾಲೇಜು ಚುನಾವಣೆಗಳಿಗೆ ಎಷ್ಟೊಂದು ಮಹತ್ವ ಇತ್ತು ಎನ್ನುವುದನ್ನು ಕೂಡ ವಿವರಿಸಿದ್ದಾರೆ.

ಒಮ್ಮೆ ಅವರ ಕಾಲೇಜಿಗೆ ಲಂಕೇಶರು ಬಂದಿರುತ್ತಾರೆ. ಆ ಕಾರ್ಯಕ್ರಮಕ್ಕೆ ಪಡ್ಡೆಹುಡುಗರು ಹೋಗಿರುವುದಿಲ್ಲ. ಆಮೇಲೆ ಲಂಕೇಶರ ಪ್ರಸ್ತಾಪವನ್ನು ಕೇಳಲಾಗಲಿಲ್ಲವೆಂದು ತಮ್ಮ ಅದೃಷ್ಟವನ್ನು ಶಪಿಸಿಕೊಳ್ಳುವ ಪ್ರಸಂಗವನ್ನು ಇಲ್ಲಿ ಕಾಣಬಹುದಾಗಿದೆ.

ಇನ್ನೊಂದು ಸನ್ನಿವೇಶದಲ್ಲಿ ಡಾ. ರಾಜಕುಮಾರ್ ಅವರ ಪ್ರತಿ ಸಿನಿಮಾಗಳಲ್ಲಿಯೂ ಇರುತ್ತಿದ್ದ, ಖ್ಯಾತ ನಟ ನರಸಿಂಹರಾಜು ಅವರು ಸದಾರಮೆ ನಾಟಕ ಮಾಡಲು ಧಾರವಾಡಕ್ಕೆ ಬಂದಾಗ ಏನೆಲ್ಲಾ ಘಟನೆಗಳು ನಡೆದವು ಎನ್ನುವುದನ್ನು ಮನಸ್ಸಿಗೆ ನಾಟುವಂತೆ ಪ್ರಸ್ತುತ ಪಡಿಸಿದ್ದಾರೆ.

ಧಾರಾವಾಡದಲ್ಲಿದ್ದ ಜರ್ಮನ್ ಆಸ್ಪತ್ರೆ ಮತ್ತು ಅಲ್ಲಿನ ಕನ್ನಡ ಮಾತನಾಡುವ ವಿದೇಶಿ ಡಾಕ್ಟರ್ ಹಾಗೂ ಇಂಗ್ಲಿಷ್ ತುಂಬಾ ಚೆನ್ನಾಗಿ ಮಾತನಾಡುವ ಸುಂದರ ಹುಡುಗಿಯೊಬ್ಬಳ ಪಪ್ಪಿ ಲವ್ವಲ್ಲಿ ಬಿದ್ದು, ಅವಳಿಗೆ ಪ್ರೇಮ ಪ್ರಸ್ತಾಪ ಮಾಡಿದ ಸನ್ನಿವೇಶವನ್ನು ಅಚ್ಚು ಕಟ್ಟಾಗಿ ಹಾಸ್ಯದೊಂದಿಗೆ ಬರೆಯಲಾಗಿದೆ.

“ಕಾಲನೆನ್ನುವ ಪಾಪಿ ಕಡೆಗೂ ನಮ್ಮ ಪಡ್ಡೆದಿನಗಳನ್ನು ಕದ್ದು ನಡದೇಬಿಟ್ಟನು” ಎಂಬ ಬೇಸರದೊಂದಿಗೆ ಈ ಪುಸ್ತಕ ಮುಗಿಯುತ್ತದೆ.  ಹಾಗೆ ನೋಡಿದರೆ, ರಾಜೇಂದ್ರ ಚೆನ್ನಿಯವರು ಗಂಭೀರ ಚಿಂತಕರು…. ಹೀಗಿರುವಾಗ ತಾವು ಕಾಲೇಜು ದಿನಗಳಲ್ಲಿದ್ದಾಗ ಪಡ್ಡೆ ಹುಡುಗರಾಗಿದ್ದರು ಎನ್ನುವುದರ ಕೈ ಗನ್ನಡಿಯಾಗಿ, ತೆರೆದ ಪುಸ್ತಕದಂತೆ ಎಳೆ ಎಳೆಯಾಗಿ ಈ ಪುಸ್ತಕದಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿರುವುದು ವಿಶೇಷ.

ಎಲ್ಲರ ಕಾಲೇಜಿನ ಪಡ್ಡೆ ದಿನಗಳನ್ನೂ ನೆನಪಿಸುವಂತಹ ಪುಸ್ತಕ ಇದಾಗಿದೆ. ಹೆಚ್ಚು ಗಾಂಭೀರ್ಯತೆಯನ್ನು ಹೊಂದದ, ಲಘು ಹಾಸ್ಯ, ಹಾಗೂ ಸರಾಗವಾಗಿ ಓದಿಸಿಕೊಳ್ಳುವ ಒಳ್ಳೆಯ ಪುಟ್ಟ ಪುಸ್ತಕ ಇದಾಗಿದೆ.. ಸಾಧ್ಯವಾದರೆ ಒಮ್ಮೆ ಈ ಪುಸ್ತಕ ಓದಿ…

ಅಂಜುಮ್ ಬಿ.ಎಸ್.

ಉಪನ್ಯಾಸಕರು, ಪತ್ರಿಕೋದ್ಯಮ ವಿಭಾಗ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಪ್ರಜೆಗಳ ಹಬ್ಬ ಚುನಾವಣೆಯ ಹಬ್ಬ

“ನಾ ಭಾರತ, ನನ್ನಲ್ಲಿದೆ ಭಾರತ, ನಾನು ಶಕ್ತಿ, ನನ್ನಲ್ಲಡಗಿದೆ ಶಕ್ತಿ” ಎಂದು ಭಾರತದ ಪ್ರಜೆಗಳನ್ನು ಮತ ಚಲಾಯಿಸಲು ಹುರಿದುಂಬಿಸಿದ ಭಾರತದ ಚುನಾವಣಾ ಆಯೋಗದ ಹಾಡನ್ನು ಮೆಲುಕು ಹಾಕುತ್ತಾ ನಮ್ಮ ಮತದಾನದ ಹಕ್ಕನ್ನು ಚಲಾಯಿಸೋಣ,

ಚುನಾವಣೆ ಎನ್ನುವುದೇ ಒಂದು ಅಸ್ತ್ರ, ಪಕ್ಷ ಪಕ್ಷಗಳ ನಡುವೆ ಜನಪ್ರತಿನಿಧಿಗಳ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ಹಾಗೂ ಪೈಪೋಟಿ ನಡೆಯುವಾಗ ಪರಿಹಾರವಾಗಿ ಬರುವುದೇ ಚುನಾವಣೆಯಾಗಿದೆ, ಚುನಾವಣೆ ಹಾಗೂ ಮತದಾನದ ನಡುವೆ ಅಪಾರವಾದ ಸಂಬಂಧವಿದೆ, ಚುನಾವಣೆ ಹಾಗೂ ಮತದಾನ ಒಂದು ನಾಣ್ಯದ ಎರಡು  ಮುಖಗಳಿದ್ದ ಹಾಗೆ, ಚುನಾವಣೆಯ ಪ್ರಕ್ರಿಯೆಯಲ್ಲಿ ಮತದಾನವೇ ಮುಖ್ಯವಾದ ಭಾಗ,

ಭಾರತ ಒಂದು ಪ್ರಜಾಪ್ರಭುತ್ವ ರಾಷ್ಟ್ರ, ನಮ್ಮದು ಸಂವಿಧಾನಾತ್ಮಕ ಸರ್ಕಾರ, ಎಲ್ಲಾ ಪ್ರಜಾಪ್ರಭುತ್ವ ರಾಷ್ಟ್ರಗಳು ಪ್ರಜೆಗಳು ಆರಿಸುವ ಪ್ರಜಾ ಪ್ರತಿನಿಧಿಗೆ ರಾಜಕೀಯ ಹಕ್ಕನ್ನು ನೀಡಲು ಚುನಾವಣೆ ಎಂಬ ಕಾರ್ಯತಂತ್ರವನ್ನು ರೂಪಿಸಿದೆ, ಮತದಾನದ ಹಕ್ಕು ಇತರ ಹಕ್ಕುಗಳೊಡನೆ ನಾಗರಿಕರಿಗೆ ಸಂವಿಧಾನಾತ್ಮಕವಾಗಿ ನೀಡಿರುವ ಹಕ್ಕಾಗಿದೆ, ಆದ್ದರಿಂದ ಬನ್ನಿ ಎಲ್ಲಾ ಸೇರಿ ಯೋಗ್ಯವಾದ ಪ್ರಜಾ ಪ್ರತಿನಿಧಿಗೆ ಮತದಾನ ಮಾಡೋಣ, ನಮ್ಮ ಹಕ್ಕನ್ನು ಸರಿಯಾಗಿ ಉಪಯೋಗಿಸಕೊಳ್ಳೋಣ,

ಇತ್ತೀಚಿನ ವಿದ್ಯಮಾನಗಳಲ್ಲಿ ಒಂದು ಸಮೀಕ್ಷೆಯ ಪ್ರಕಾರ ಬಹುತೇಕ ಸುಶಿಕ್ಷಿತರು ಮತಗಟ್ಟೆಗೆ ಬರದೇ ತಮ್ಮ ಮತದಾನದ ಹಕ್ಕನ್ನು ಬಳಸಿಕೊಳ್ಳದೆ ಇರುವುದು ವಿಪರ್ಯಾಸದ ಸಂಗತಿ, 5 ನೇ ಕ್ಲಾಸಿಂದ 18 ವರ್ಷ ತುಂಬಿದವರೆಲ್ಲ ಮತದಾನ ಮಾಡಲೇಬೇಕು ಎಂದು ಪಾಠ ಮಾಡುತ್ತಾ ಬರುತ್ತಿದ್ದರೂ ಸಹ ಎಲ್ಲವನ್ನೂ ಓದಿಕೊಂಡಂತಹ ವಿದ್ಯಾವಂತರು ಚುನಾವಣೆಯ ದಿನ ಮತ ಚಲಾವಣೆ ಮಾಡುವುದನ್ನೇ ಮೈ ಮರೆತು ಮನೆಯಿಂದ ಹೊರಬರದೆ ಟಿವಿ ಮುಂದೆ ಕುಳಿತು ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತ ಕಾಲ ಕಳೆಯುವುದು. ಇನ್ನು ಕೆಲವರು ಮಕ್ಕಳ ಬೇಸಿಗೆ ರಜೆ ಇದೆ ಎಂದು ಪ್ರವಾಸ ಕೈಗೊಳ್ಳುವುದು, ಒಂದು (ದೂರದ) ಊರಿನಿಂದ ಇನ್ನೊಂದು ಊರಿಗೆ ಹೊಟ್ಟೆಪಾಡಿಗಾಗಿ ಅಥವಾ ಕೆಲಸದ ನಿಮಿತ್ತ ಬಂದ ಕೆಲಸಗಾರರು ಮತದಾನ ಮಾಡಲು ಒಂದು ದಿನಕೊಸ್ಕರ ತಮ್ಮ ಊರಿಗೆ ಹೋಗಲಾರದೆ ಇರುವ ಪರಿಸ್ಥಿಯಲ್ಲಿ ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ, ಇಂದು ಭಾರತದ ಯಾವುದೇ ಭಾಗದಲ್ಲಿ ಮತದಾನವಾದರೂ  ಶೇಕಡಾ 100 ರಷ್ಟು ಮತದಾನ ನಡೆಯುತ್ತಿಲ್ಲ, ಇದಕ್ಕೆಲ್ಲ ಪ್ರಮುಖ ಕಾರಣ ನಾಗರಿಕರಲ್ಲಿ ಮತದಾನದ ಬಗ್ಗೆ ಇರುವ  ಅಲಕ್ಷ್ಯ ಮತ್ತು ಅವರಿಗೆ ತಮ್ಮ ಮತದಾನದ ಹಕ್ಕು ಹಾಗೂ ಜವಾಬ್ದಾರಿಯ ಬಗ್ಗೆ ಸರಿಯಾದ ಜ್ಞಾನ ಇಲ್ಲದೆ ಇರುವುದೇ ಆಗಿದೆ, ಹಾಗಾಗಿ ಮತದಾರರು ಪ್ರಜ್ಞಾವಂತರಾಗಿ ಸರಿಯಾದ ಪ್ರಜಾ ಪ್ರತಿನಿಧಿಗೆ ಮತದಾನ ಮಾಡಬೇಕು, ದೇಶದ ಭವಿಷ್ಯದ ಹಿತದೃಷ್ಟಿಯಿಂದ ನಾವು ಮಾಡುತ್ತಿರುವ ಕರ್ತವ್ಯ ಇದು ಎಂದು ಭಾವಿಸಿ ಮತದಾನದಲ್ಲಿ ತಮ್ಮ ಅಮೂಲ್ಯವಾದ ಮತವನ್ನು ಚಲಾಯಿಸಿ ಉತ್ತಮ ಪ್ರಜಾ ಪ್ರತಿನಿಧಿಗಳನ್ನು ಆರಿಸುವಲ್ಲಿ ತಮ್ಮ ಹಕ್ಕನ್ನು ಚಲಾಯಿಸಬೇಕು,

ಚುನಾವಣೆ ಹಾಗೂ ಮತದಾನ ಒಂದು ನಾಣ್ಯದ ಎರಡು ಮುಖಗಳಾಗಿದೆ, ಚುನಾವಣಾ ಪ್ರಕ್ರಿಯೆಯಲ್ಲಿ ಮತದಾನವೇ ಅತ್ಯಂತ ಮುಖ್ಯವಾದ ಘಟ್ಟ, ಮತ ಚಲಾಯಿಸುವವನೇ ಮತದಾರ, ಜಾತಿ, ಮತ, ಪಂಥ, ಧರ್ಮ, ಉನ್ನತ, ಕನಿಷ್ಠ, ಸ್ಥಾನಮಾನ ಮುಂತಾದವುಗಳ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡದೆ ಒಂದು ರಾಷ್ಟ್ರದ 18 ವರ್ಷ ತುಂಬಿದ ಪ್ರಜೆಯು ಮತ ಚಲಾಯಿಸುವ ಹಕ್ಕನ್ನು ಭಾರತೀಯ ಸಂವಿಧಾನವು ನಮಗೆ ನೀಡಿದೆ,

ಬನ್ನಿ ಎಲ್ಲಾ ಸೇರಿ ರಾಷ್ಟ್ರೀಯ ಹಬ್ಬದಂತೆ ಈ ಬಾರಿಯ ಚುನಾವಣೆಯ ಹಬ್ಬವನ್ನು ಆಚರಿಸೋಣ 10ನೇ ಮೇ 2023 ರಂದು ಯೋಗ್ಯವಾದ ಪ್ರಜಾಪ್ರತಿನಿಧಿಗೆ ನಮ್ಮ ಅಮೂಲ್ಯವಾದ ಮತವನ್ನು ಹಾಕುವುದರ ಮೂಲಕ ಕರ್ನಾಟಕದ ರಾಜ್ಯದ ಮುಂದಿನ 5 ವರ್ಷದ ಭವಿಷ್ಯಕ್ಕೆ ಮುನ್ನುಡಿ ಬರೆಯೋಣ, ರಾಜ್ಯದ ಮುಂದಿನ 5 ವರ್ಷದ ಭವಿಷ್ಯದ ಜೊತೆಗೆ ನಮ್ಮಂತಹ ಕೋಟ್ಯಂತರ ಪ್ರಜೆಗಳ 5 ವರ್ಷದ ಭವಿಷ್ಯವೂ ನಮ್ಮ ಕೈಯಲ್ಲೇ ಇದೆ, ಯೋಚಿಸಿ ಯೋಗ್ಯರಿಗೆ ಮತ ಚಲಾಯಿಸಿ……!

ಗೌಸ್ ಪೀರ್,
ಪ್ರಥಮ ವರ್ಷದ ಬಿಎ ವಿದ್ಯಾರ್ಥಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು,ಶಿವಮೊಗ್ಗ,

Manospandana : Suicide

Mr. Ganesh Nadiger
Senior Counsellor
Manasa Nursing Home, Shivamogga, is talking about Suicide.

Suicide is the act of intentionally causing one’s own death. Mental disorders (including depression, bipolar disorder, schizophrenia, personality disorders, anxiety disorders), physical disorders (such as chronic fatigue syndrome), and substance abuse (including alcoholism and the use of and withdrawal from benzodiazepines) are risk factors

many suicides happen impulsively in moments of crisis with a breakdown in the ability to deal with life stresses, such as financial problems, relationship break-up or chronic pain and illness. experiencing conflict, disaster, violence, abuse, or loss and a sense of isolation are strongly associated with suicidal behavior.

ಆತ್ಮಹತ್ಯೆಯು ಒಬ್ಬರು ಸ್ವಂತ ಸಾವನ್ನು ಉದ್ದೇಶಪೂರ್ವಕವಾಗಿ ಉಂಟುಮಾಡುವ ಕ್ರಿಯೆಯಾಗಿದೆ. ಮಾನಸಿಕ ಅಸ್ವಸ್ಥತೆಗಳು (ಖಿನ್ನತೆ, ಬೈಪೋಲಾರ್ ಡಿಸಾರ್ಡರ್, ಸ್ಕಿಜೋಫ್ರೇನಿಯಾ, ವ್ಯಕ್ತಿತ್ವ ಅಸ್ವಸ್ಥತೆಗಳು, ಆತಂಕದ ಅಸ್ವಸ್ಥತೆಗಳು ಸೇರಿದಂತೆ), ದೈಹಿಕ ಅಸ್ವಸ್ಥತೆಗಳು (ಉದಾಹರಣೆಗೆ ದೀರ್ಘಕಾಲದ ಆಯಾಸ ಸಿಂಡ್ರೋಮ್) ಮತ್ತು ಮಾದಕ ವ್ಯಸನ (ಮದ್ಯಪಾನ ಮತ್ತು ಮಾದಕ ದ್ರವ್ಯ ಬಳಕೆ ಸೇರಿದಂತೆ ಮತ್ತು ಬೆಂಜೊಡಿಯಜೆಪೈನ್ಗಳಿಂದ ಹಿಂತೆಗೆದುಕೊಳ್ಳುವಿಕೆ) ಅಪಾಯಕಾರಿ ಅಂಶಗಳಾಗಿವೆ.

ಆರ್ಥಿಕ ಸಮಸ್ಯೆಗಳು, ಸಂಬಂಧದ ವಿಘಟನೆ ಅಥವಾ ದೀರ್ಘಕಾಲದ ನೋವು ಮತ್ತು ಅನಾರೋಗ್ಯದಂತಹ ಜೀವನದ ಒತ್ತಡಗಳನ್ನು ನಿಭಾಯಿಸುವ ಸಾಮರ್ಥ್ಯದ ಕುಸಿತದೊಂದಿಗೆ ಬಿಕ್ಕಟ್ಟಿನ ಕ್ಷಣಗಳಲ್ಲಿ ಅನೇಕ ಆತ್ಮಹತ್ಯೆಗಳು ಹಠಾತ್ ಆಗಿ ಸಂಭವಿಸುತ್ತವೆ.ಸಂಘರ್ಷ, ವಿಪತ್ತು, ಹಿಂಸೆ, ನಿಂದನೆ, ಅಥವಾ ನಷ್ಟವನ್ನು ಅನುಭವಿಸುವುದು ಮತ್ತು ಪ್ರತ್ಯೇಕತೆಯ ಪ್ರಜ್ಞೆಯು ಆತ್ಮಹತ್ಯಾ ನಡವಳಿಕೆಯೊಂದಿಗೆ ಬಲವಾಗಿ ಸಂಬಂಧಿಸಿದೆ.