ನಮಗೆ ನಾವೇ ಕೇಳುವಂತ ಪ್ರಶ್ನೆ!

 

 

ನಮಗೆ ನಾವೇ ಕೇಳುವಂತ ಪ್ರಶ್ನೆ!

ಈ ಆತ್ಮವೆಂಬ ಬತ್ತಿ ಕತ್ತಲೆಯ ತೊರೆದು ಹೊತ್ತಿ ಉರಿಯಬೇಕಿದೆ!

ಭಯವೆಂಬ ಬಾನು ಕತ್ತಲೆಯ ತೊರೆದು ಸೂರ್ಯನನ್ನು ಅರಸಿ ಹೊರಡಬೇಕಿದೆ..

ಕಣ್ಣೆದುರಲ್ಲೇ ಎಲ್ಲ ಉತ್ತರಗಳೂ ಅಂಗೈನ ಬೆಣ್ಣೆಯಂತಿದೆ ಆದರೂ

ತುಪ್ಪಕ್ಕಾಗಿ ಅಲೆವ ಬೆಪ್ಪನಂತೆ “ಇಲ್ಲಗಳ” ವ್ಯೂಹದಲ್ಲಿ ಸಿಲುಕಿದೆ ಈ ಮನ!.

 

ಈ ಅಭಯ ಭಾವನೆ ನನ್ನೊಳಗರಳುವುದಾದರೂ ಯಾವಾಗ ?,

ನಾ ಭಯವೆಂಬ ಗರ್ಭದಿಂದಾಚೆ ಬರುವುದ್ಯಾವಾಗ ??…

ಈ ಹೆಸರಿಗೊಂದು ಉಸಿರು ಬರುವುದ್ಯಾವಾಗ?,

ಈ ಮನವು ತನ್ನ ತಾನೇ ಪ್ರೀತಿಸದೇ ಹೋದಾಗ ಇನ್ನೆಲ್ಲಿಯಾ ಭರವಸೆ!

 

ಆದರೂ ಸಾಧನೆ ಬಿಸಿಲುಗೋಲು ಮನವೆಂಬ ಮನೆಯ ಕಿಟಕಿಯ ನುಸುಳಿ

ತನ್ನ ಬೆಳಕೊಗೆಯ ಬೇಕಿದೆ, ಆ ಬೆಳಕು ಈ ತನುವರಳಿದ ಕಾರಣವ ತೋರ ಬೇಕಿದೆ.

ಅರಳಿದ ತನುವು ಬಾಡುವ ಮೊದಲೇ ಸುಗಂಧಿಸಿ ಅದರ ಗಮ ಎಲ್ಲರ ನಾಸಿಕದಲ್ಲೇ ಚಿರಂಜೀವಿಯಾಗಬೇಕಿದೆ!, ಅರಿಯಬೇಕಿದೆ ಅರಿವು ಅರಳಬೇಕಿದೆ..

 

ನಾನೂ ನನ್ನ ಪ್ರಾಚಾರ್ಯರೊಂದಿಗೆ ನಿಂತು ಭಾವಚಿತ್ರವ ಪಡೆಯ ಬೇಕಿದೆ

ಆದರಾ ಭಾವಚಿತ್ರದೊಳಗೆ ನಾ ಮಾಡಿದ ಸಾಧನೆಯ ಭಾವಬೆಳಕು

ನನ್ನ ಪ್ರಾಚಾರ್ಯರ ಮೊಗದಲ್ಲಿ ಪ್ರತಿಫಲಿಸಿ ಪ್ರಜ್ವಲಿಸುತ್ತಿರ ಬೇಕಿದೆ..

ಸಾಧನೆಯ ಬಟ್ಟೆಯ ತೊಡಬೇಕಿದೆ,

 

ಹೊರಟ ಬಟ್ಟೆಯಲ್ಲೇ ಲಕ್ಷ್ಯವ ಇಟ್ಟು ಗುರಿಯ ಗರಿಯ ಸ್ಪರ್ಶಿಸಬೇಕಿದೆ.

“ಇಲ್ಲಗಳ” ಸೊಲ್ಲ ಹೇಳದೆ ಆತ್ಮ ವಿಶ್ವಾಸದ ದೀಪವ ಹಚ್ಚಿಕೊಂಡು ನಾ ಹೊರಡಲೇ ಬೇಕಿದೆ,

ನಾನೂ ಇರುವೆನೆಂಬ ಇರುವಿಕೆಯ ಅರವಳಿಕೆಯ ಮೂಡಿಸಬೇಕಿದೆ.

 

ನನ್ನಿಂದ ಅ’ಸಾಧ್ಯ’ ಎನ್ನುವ ಕಪ್ಪು ಅಂಧಕಾರದ ಪಟ್ಟಿಯ ಕಟ್ಟಿಕೊಂಡು

ತಿರುಗುತ್ತಿರುವ ಮನಸು ಪಟ್ಟಿಯ ಕಿತ್ತೊಗೆದು ತೇಜವ ಕಾಣಬೇಕಿದೆ.

ಒಟ್ಟಾರೆಯಾಗಿ ನನಗೆ ನಾನೇ ಕೇಳಿಕೊಳ್ಳುವ ಪ್ರಶ್ನೆ ಏನೆಂದರೆ..

 

ತನುವೆ ನೀನೇಕೆ ಅರಳಿರುವೆ?….”

ಕವನ ಕೆ. ,

ಪ್ರಥಮ ಬಿಎ, ವಿದ್ಯಾರ್ಥಿನಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಅಪ್ಪ ಐ ಲವ್ ಯೂ

ನೋವ ನುಂಗಿ ಮಕ್ಕಳಿಗೆ ಪ್ರೀತಿ ಧಾರೆ ಎರೆಯುವ ತಂದೆಗೆ ಮಕ್ಕಳ ಭವಿಷ್ಯವೇ ಮುಖ್ಯವಾಗಿರುತ್ತದೆ

ಅಪ್ಪ ಅಂದರೆ ಅದ್ಭುತ, ಅಮರ ಪ್ರತಿಪಾದಕ, ಅಮೋಘ, ಆನಂದ, ಆದರ್ಶ, ಅನಂತ, ನನ್ನ ಜಗತ್ತು, ಮೊದಲ ಸ್ನೇಹಿತ ಅಪ್ಪಾ… ಅಕಾಶದಷ್ಟು ಎತ್ತರವಿರುವ ಗೋಪುರ ಕೇಳಿದರು ಕೊಡಿಸುವ ಶಕ್ತಿ ಹೊಂದಿದವರು, ಕಿರು ಬೆರಳು ಹಿಡಿದು ನಿನ್ನೊಂದಿಗೆ ನಾನಿರುವೆ ಎಂದು ನಡೆದ ಹೆಜ್ಜೆ ಗುರುತು ಅಪ್ಪನದು, ತಾನು ನೋಡದ ಪ್ರಪಂಚವನ್ನು ಹೆಗಲ ಮೇಲೆ ಕೂರಿಸಿ ತೋರಿಸಿದ ಹೃದಯವಂತ, ಕಲಿತ ಪಾಠ, ಕಂಡ ಕಷ್ಟಗಳು, ಸದಾ ಕಾಲ ನಗು ಮುಖವ ತೋರು ಎಂದು ತಿಳಿಸಿದವರು, ಬದುಕಿನ ಉದ್ದಕ್ಕೂ ಭರವಸೆಯ ಬೆಳಕಲ್ಲೇ ಸಾಗುತ್ತಿದ್ದ ನನಗೆ ಜೀವನದ ಅರ್ಥ ತಿಳಿಸಿ, ಛಲದಿಂದ ಸಾಧನೆಯನ್ನು ಹುಡುಕಿ ಸಾಗು ಎಂದು ಹೇಳಿ ಹಿಂಬಾಲಿಸಿದವರು ನನ್ನಪ್ಪ…. ಸಾವಿರ ಸಾವಿರ ಕಷ್ಟ ಬಂದರು ಛಲ ಬಿಡದೆ ಹೆಜ್ಜೆ ಮುಂದಿಟ್ಟ ಸಾಹುಕಾರ, ಅಪ್ಪ ಬರೀ ಅಪ್ಪನಾಗಿಯೇ ಉಳಿಯದೇ ಸ್ನೇಹಿತನಾಗಿ, ಹಿತೈಷಿಯಾಗಿದ್ದಾನೆ. ತಪ್ಪು ಹೆಜ್ಜೆ ಇಟ್ಟಾಗ ತಿದ್ದಿ ತಿಳಿ ಹೇಳಿ ಸರಿದಾರಿ ತೋರಿಸಿದವ, ತಾನು ಶಿಕ್ಷಣ ಪಡೆದಿಲ್ಲ ಆದರೂ ಮಕ್ಕಳು ಪಾಠದಿಂದ ವಂಚಿತರಾಗದಿರಲಿ ಎನ್ನುವ ಗುಣ ಅಪ್ಪನದು, ನಾ ಕಂಡ ಪಾಡು ನನ್ನ ಮಕ್ಕಳು ಕಾಣದಿರಲಿ ಎಂದು ಹಗಲಿರುಳ್ಳೆನ್ನದೇ ದುಡಿಯುತ್ತಿದ್ದಾರೆ….

ನಾನು ನೋಡಿದ ಮೊದಲ ವೀರ

ಬಾಳು ಕಲಿಸಿದ ಸಲಹೆಗಾರ

ಬೆರಗು ಮೂಡಿಸೋ ಜಾದೂಗಾರ ಅಪ್ಪ✨❤

ತಂದೆ ಮಗಳ ಸಂಬಂಧ ಅನ್ನೋದೇ ಒಂಥರಾ ಚಂದ ಕರಗದಷ್ಟು ಪ್ರೀತಿ ಅನ್ನೋ ಆಸ್ತಿ ಕೊಡುವ ತಂದೆ, ಮಗಳ ಮೊದಲ ಹೀರೋ… ಅಪ್ಪನೆಂದರೆ ಹಬ್ಬುವ ಬಳ್ಳಿಗೆ ಆಸರೆ, ಗುರಿ ಮುಟ್ಟಿಸುವ ಹೊಣೆ, ಸದಾ ಜೊತೆಯಾಗಿರುವ ಬೆರಳು, ಬದುಕಿನ ಎಲ್ಲವೂ ಅಪ್ಪ…ಹೆಣ್ಣು ಮಕ್ಕಳು ತಾಯಿಗಿಂತ, ತಂದೆಯನ್ನ ಹಚ್ಕೊಳ್ಳೋದೇ ಜಾಸ್ತಿ…

ನೆನಪಿರಲಿ ಮಗಳೇ… ಈಗಲೇ ಹೇಳಿಬಿಡುತ್ತೇನೆ ನನಗೇನೂ ಬೇಡ ನಿನ್ನಿಂದ ಆದರೆ ನೀ ರಾಣಿಯಾಗು ನನ್ನ ಖುಷಿಯ ನೂರ್ಪಾಲು ನಿನಗಿರಲಿ ನಿನ್ನ ಕಣ್ಣೀರು ಬರೀ ಕನಸಾಗಲಿ. ಸಾಧಿಸು…ಧೈರ್ಯಗೆಡಬೇಡ ಬಿದ್ದರೆ ತುಳಿಯುವವರೇ ಇಲ್ಲಿ ಎದ್ದು ಗೆದ್ದು ಬಾ ಹಕ್ಕಿಯಂತೆ ಹಾರಾಡು…ಆದರೆ, ಮರೆಯಬೇಡ ಮಗಳೇ ನನ್ನ- ನನ್ನಾಕೆಯ ಮರೆಯಬೇಡ…

ಜನ್ಮ  ಕೊಡೋದು ತಾಯಿ,
ಜೀವನ ಕಲಿಸಿಕೊಡೋದು ತ೦ದೆ,

ತುತ್ತು ಕೊಡೋದು ತಾಯಿ
ತುತ್ತು ತ೦ದಾಕೋದು ತ೦ದೆ,

ಅತ್ತಾಗ ಮಡಿಲು   ಕೊಟ್ಟು ಕ೦ಬನಿ ಒರೆಸೋದು  ತಾಯಿ
ದ್ರುತಿಗೆಟ್ಟು ಕೂತಾಗ  ಹೆಗಲ ಕೊಟ್ಟು ಧೈರ್ಯ ತು೦ಬೋನು ತ೦ದೆ,,

ಮಗಳ ಮದುವೆಯಲ್ಲಿ ತನ್ನ ಕ೦ದನ ಅಗಲುವಿಕೆ
ನೆನೆದು ನೆನೆದು   ಕಣ್ಣೀರಿಡುವಳು ತಾಯಿ
ಮರೆಯಲಿ ನಿ೦ತು ಮಗಳೆದುರು ಕಣ್ಣೀರಿಡಲು
ಆಗದೇ ತಾಯಿ ಸ್ವರೂಪಿಣಿಯ೦ತಿದ್ದ  ಮಗಳು

ಜೀವ ಕೊಟ್ಟದ್ದು  ತಾಯಿಯೇ
ಜೀವವಿರುವ ವರೆಗೂ  ಜೀವನದ ಬಗ್ಗೆ ಪಾಠ ಕಲಿಸೋದು ತ೦ದೆ.. ❤❤

ತಂದೆ ನೀನು ತಂದೆ ನನ್ನ ಬಾಳ ತುಂಬಾ ಹರುಷ,
ಮರೆಯಲಾರೆ ನಿನ್ನ ನಾನು ಸಾವಿರ ವರುಷ,
ನೊಂದ ಗುರುತು ಬಹಳ ಕಂಡದ್ದು ನಗುವ ಮುಖ,
ಎಲ್ಲ ನಮಗೆ ಕೊಟ್ಟು ನೀ ಬಯಸಲಿಲ್ಲ ಸುಖ…

ನಮಗೆ ಎಲ್ಲ ಕೊಟ್ಟೆ ನೀ ಹರಿದ ಬಟ್ಟೆ ತೊಟ್ಟೆ,
ಕಷ್ಟ ನೋರಿದ್ದರು ನಿನ್ನೊಳಗೆ ಹುಧುಗಿ ಇಟ್ಟೆ,
ಸಂಸಾರ ಸಾಗಿಸಲು ಬಹಳ ಕಷ್ಟ ಪಟ್ಟೆ,
ಆದರೂ ನಿನ್ನ ನಾನು ಇಷ್ಟ ಪಟ್ಟೆ….

ನನ್ನ ನೋವ ಕಂಡ ನಿನ್ನ ಎರಡೂ ಕಣ್ಣಲ್ಲಿ,
ನೋವು ನಿನಗೆ ಹೆಚ್ಚು ಬಿದ್ದಾಗ ನಾನು ಮಣ್ಣಲ್ಲಿ,
ಆಡ ಬಯಸುವೆ ಆಟ ಮಗುವಾಗಿ ನಿನ್ನೊಂದಿಗೆ,
ಮರೆಯಲಾರೆ ನಿನ್ನ, ನಿನ್ನ ನೆನಪೇ ನನ್ನೊಂದಿಗೆ….

ಬಯದಿ ಅವಿತು ನೆನಪು ನಿನ್ನ ಬೆನ್ನಲ್ಲಿ,
ಮಗುವಾಗಿ ಆಡುವಾಸೆ ನಿನ್ನ ಬಳಿಯಲ್ಲಿ,
ಮಗುವಾಗಿ ಮಲಗುವಾಸೆ ನಿನ್ನ ತೋಳಲ್ಲಿ,
ಮಗುವಾಗಿ ನಲಿವ ಆಸೆ ನಿನ್ನ ಜೊತೆಯಲ್ಲಿ!❣….

ಅಪ್ಪ  ಐ  ಲವ್ ಯೂ….❤❤❣

 

ಸುಶ್ಮಿತಾ.  ಆರ್

ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಸ್ವಾಭಿಮಾನದ ಕಡಲು ನನ್ನಮ್ಮ ನೊಡಲು……..

Image Credit : Google / Merrill Weber

ಯಾಕೆ !? ತಾಯಂದಿರ ದಿನದಂದು ಮಾತ್ರ ತಾಯಿಯ ಬಗ್ಗೆ ಭಾವನಾತ್ಮಕವಾಗಿ ಸೋಶಿಯಲ್ ಮೀಡಿಯಾಗಳಲ್ಲಿ, ಪತ್ರಿಕೆಗಳಲ್ಲಿ ಬರೆಯಬೇಕೇ ? ತನ್ನ ಹೃದಯದ ಮಂದಿರದಲ್ಲೇ ನಮ್ಮನ್ನು ಇಟ್ಟುಕೊಂಡಿರುವ ತಾಯಿಯ ಬಗ್ಗೆ ಪ್ರತಿದಿನವೂ ನೆನೆಸಿಕೊಳ್ಳುತ್ತಾ ಮೈ ಮರೆಯಬಾರದೇಕೆ ? ಅದಕ್ಕಾಗಿಯೇ ಇವತ್ತೊಂದು ತಾಯಿಯ ಬಗೆಗಿನ ಭಾವನಾತ್ಮಕ ಲೇಖನವನ್ನು ಓದಿ ;

ಸ್ವಾಭಿಮಾನ, ಧೈರ್ಯ, ಆತ್ಮ ವಿಶ್ವಾಸ, ಆತ್ಮಗೌರವವನ್ನು ನಾನು ಕಲಿಯಲಾರಂಬಿಸಿದ್ದು ನನ್ನಮ್ಮನನ್ನು ನೋಡಿ. ಅವಳು ನಿರೂಪಮಾಧ್ಬುತ. ಅವಳನುಭವಿಸಿದ ಕಷ್ಟಗಳು, ನೋವು, ಅವಮಾನಗಳು, ಅನುಮಾನಗಳು ಒಂದೇ ಎರಡೆ !..? ಆಕೆಯೊಡಲಾಳದಲ್ಲಿ ಅದೆಷ್ಟು ನೋವುಗಳಿದೆಯೋ ಅದೆಷ್ಟು ಪ್ರಶ್ನೆಗಳಿವೆಯೋ..? ಬಲ್ಲವರಾರು !. “ಹುಟ್ಟಿನಿಂದ ಸಾಯವವರೆಗೂ ಇದೆ ಹಣೆ ಬರಹ”. ಇದು ಅವಳ ಸರ್ವೇ ಸಾಮಾನ್ಯ ಮಾತು. ತನ್ನ ನೋವಿನಡುಗೆಯನ್ನ ತಾನೊಬ್ಬಳೇ ಉಂಡು ಅರಗಿಸಿಕೊಳ್ಳಲೂ ಆಗದೆ ಹಾಗೆ ಬಸಿರಲ್ಲೇ ಇಟ್ಟುಕೊಳ್ಳಲೂ ಆಗದೇ ಮರುಗುತಿಹಳು ನನ್ನಮ್ಮ.

ಕೂಡು ಕುಟುಂಬವೆಂಬ ಸಂಪಿಗೆ ಮರದಲ್ಲಿ ಅರಳಿದ ಮೊದಲ ಹೂವು ನನ್ನಮ್ಮ. ಅವಳು ತನ್ನ ಹದಿಮೂರನೇ ವಯಸ್ಸಿಗೇ ತಂದೆಯನ್ನು ಕಳೆದುಕೊಂಡಳು, ತಂದೆ ಹೊರಟ ಹಲವು ದಿನಗಳಲ್ಲೇ ಕೂಡು ಕುಟುಂಬ ಬೇಸಿಗೆಯಲ್ಲಿ ಗದ್ದೆ ಬಿರಿದಂತೆ ಬಿರಿಯಿತು. ಆಗ ಆಕೆಯ ಮೇಲೆ ಮೂವರು ತಂಗಿಯರು ಹಾಗೂ ಓರ್ವ ತಮ್ಮನ ಜವಾಬ್ದಾರಿ ಬಿತ್ತು. ಏನೂ ಅರಿಯದ ಮುಗ್ಧ ಮನದ ಅಮ್ಮ ಒಂದೆಡೆಯಾದರೆ ಇನ್ನೊಂದೆಡೆ ಅರಿಯದ ವಯಸ್ಸಿನಲ್ಲಿ ತಂದೆಯಿಂದ ತೆಗೆದುಕೊಂಡ ಭಾಷೆ, ದುಡಿಯಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಊರಿನ ಬ್ರಾಹ್ಮಣರ ಮನೆಯಲ್ಲಿ ಕಾಯಕ ತೋರಿದಾಗ ಅವಳಿಗೆ ಬೆಲ್ಲ ತಿಂದಷ್ಟು ಖುಷಿ. ಯಾರದ್ದೋ ಮನೆಯ ಎಂಜಲ ಬಟ್ಟಲ ತೊಳೆದಳು. ಆದರೆ, ಒಂದು ದಿನವೂ ಕೂಡ ತನ್ನ ಕೆಲಸದ ಮೇಲೆ ಅಸೂಯೆ ಪಡಲಿಲ್ಲ ಆಕೆ.

“ಸ್ವಂತ ದುಡಿಮೆಯೇ ಜೀವನ” ಎಂಬುದೇ ಅಮ್ಮನ ಬಾಳ ಸೂಕ್ತಿ. ಕಷ್ಟಗಳ ಸಾಲು ಒಂದರಮೇಲೊಂದು ಬಂದರೂ ಎಂದಿಗೂ ಆತ್ಮ ವಿಶ್ವಾಸ ಕಳೆದುಕೊಳ್ಳದೇ ಗಟ್ಟಿ ಗೊಡೆಯಾಗಿ ನಿಂತಳು. ಮನೆಯನ್ನು ನಿಭಾಯಿಸಲು ಅಕ್ಕನಿಗೊಬ್ಬಳಿಗೆ ಕಷ್ಟ ಎಂದು ಸ್ವ – ಅರಿವು ಮೂಡಿಸಿಕೊಂಡ ತಂಗಿಯರು ಊರಲ್ಲಿದ್ದ ಶಾಲೆಯಲ್ಲಿ ಅಕ್ಷರ ಜ್ಞಾನವನ್ನು ಪಡೆದುಕೊಂಡರು. ಪ್ರೌಢ ಶಿಕ್ಷಣಕ್ಕಾಗಿ ದೂರದೂರಿಗೆ ನಡೆದೇ ಹೋಗಬೇಕಾದ್ದರಿಂದ ಮೊದಲು ಮತ್ತು ಕೊನೆಯ ತಂಗಿ – ತಮ್ಮಂದಿರು ವ್ಯಾಸಂಗವನ್ನು ಅಲ್ಲೇ ಅರ್ಧ ದಾರಿಗೇ ಮರೆತರು. ಆದರೆ ಕಲಿಕೆಯ ಹಸಿವು ಎರಡನೆ ತಂಗಿಯನ್ನು ಬಿಡಲೇ ಇಲ್ಲ, ಆಕೆ ಕೂಡ ತನಗೆ ಕೈಗೆಟಕಿದ ಕೆಲಸ ಮಾಡಿ ತನ್ನ ಓದನ್ನು ಮುಂದುವರಿಸಿದಳು. ಅದೆಷ್ಟೋ ದಿನದ ಉಪವಾಸ, ಅದೆಷ್ಟೋ ಗೋಳಾಟ, ಕಂಬನಿಗಳು, ಬಿಸಿಯುಸಿರು ನನ್ನಮ್ಮನ ದೇಹದ ಮಾಂಸ ಖಂಡಗಳಂತೆ….. ಇದರ ನಡುವೆಯೇ ಪುಟ್ಟ ತಮ್ಮನ ಆರೋಗ್ಯ ಕೈ ಮೀರಿದಾಗ ತಾನೊಬ್ಬಳೇ ಒಬ್ಬ ಪುರುಷನ ಸರಿ ಸಮನಾಗಿ ನಿಂತು ಯಮನೆದುರು ತಿಂಗಳುಗಟ್ಟಲೆ ಹೋರಾಡಿ ತಮ್ಮನನ್ನು ಉಳಿಸಿಕೊಂಡಳು ನನ್ನಮ್ಮ…. ತನ್ನ ಯವ್ವನ ಪೂರ್ತಿ ಬೇರೆಯವರಿಗಾಗಿಯೇ ತೆಯ್ದಳು ಅಮ್ಮ…..ಅವಳೇ ನನ್ನ ಅಮ್ಮ…..

ವಿವಾಹದ ವಯಸ್ಸಿಗೆ ಬಂದಾಗ ಆಕೆಯ ಬಾಳಿಗೇ ಇನ್ನೊಂದು ಅಚ್ಚರಿ ಕಾದಿತ್ತು. ಅದುವೇ ತಾಯಿ ಇಲ್ಲದ ಎರಡು ಮುಗ್ಧ ಮಕ್ಕಳ ಜವಾಬ್ದಾರಿ. ತಿರಸ್ಕರಿಸಲು ಅವಕಾಶವೇ ಇಲ್ಲದಂತಹ ಸಂದರ್ಭ ಒದಗಿದಾಗ ಆಕೆಯ ಇಷ್ಟ ಕಷ್ಟಗಳನ್ನು ಕೇಳಿದವರೇ ಇಲ್ಲ !. ನವ ಜೀವನದಲ್ಲೂ ನವ ತಿರುವುಗಳು, ಹೊಸ ಸಮಸ್ಯೆಗಳು. ಬೇರಾವುದೇ ದಾರಿ ಇಲ್ಲದೆ ಕಂಡಂತಹ ದಾರಿಯಲ್ಲಿ ನಡೆಯಬೇಕಾಯಿತು. ತವರು ಮನೆಯ ಸೊಬಗನ್ನು ತೊರೆಯಲೇಬೇಕಾದ ಆ ಕಷ್ಟದ ಅನುಭವವನ್ನು ಅನುಭವಿಸಿದವರಿಗೆ ಗೊತ್ತು. ಹೊಸ ಮನೆಯಲ್ಲಿ ನಾಲ್ಕು ಜನ ಕುಳಿತುಕೊಳ್ಳಲು ಕಷ್ಟವಾಗುವಂತಹ ಇಕ್ಕಟ್ಟಿನ ಜಾಗ….. ತರಕಾರಿ ಹೆಚ್ಚುವ ಕತ್ತಿಗೂ ಗತಿ ಇಲ್ಲದಂತಹ ಕ್ಲಿಷ್ಟ ಪರಿಸ್ಥಿತಿ, ಜೊತೆಗೆ ಅರಿಯದ ಎರಡು ಮುಗ್ಧ ಮಕ್ಕಳು ಬೇರೆ. ಇಂತಹ ವಿಷಮ ಪರಿಸ್ಥಿತಿಯಲ್ಲೂ ನನ್ನ ಅಮ್ಮನಿಗೆ ತಾನು ಸ್ವಂತ ಮನೆಯನ್ನ ಕಟ್ಟಲೇಬೇಕೆಂಬ ಛಲ, “ನನ್ನ ಕಣ್ಣೀರು, ನನ್ನ ನೋವುಗಳು ನನ್ನ ಮಕ್ಕಳಿಗೆ ಕಾಣಬಾರದು” ಎಂದು ಕೈಲಾದಷ್ಟು ದುಡಿದು ಸಂಪಾದಿಸಿದ ಹಣದಿಂದ ಮನೆಯ ಅಡಿಪಾಯವನ್ನಂತು ಮಾಡಿದಳು, ಆದ್ರೆ ಆ ಹೊತ್ತಿಗೆ ಗರ್ಭಿಣಿಯಾಗಿದ್ದ ನನ್ನಮ್ಮನಿಗೆ ಮತ್ತೊಂದು ಆಘಾತ ಕಾದಿತ್ತು.

ತುಂಬು ಗರ್ಭಿಣಿಯಾದ ಅವಳು ತಣ್ಣಗೆ ಬಾಗಿಲ ಬಳಿಯಲ್ಲಿ ದಣಿದು ಮಲಗಿದ್ದಾಗ ಆಡುವ ಮಕ್ಕಳೆರಡು ಬಂದು ಅರಿಯದೆ ಆಕೆಯ ಹೊಟ್ಟೆಯ ಮೇಲೆ ತಮ್ಮ ಕಾಲಿಟ್ಟು ಜಿಗಿದರು. ತೀವ್ರ ನೋವಲ್ಲಿ ಹೊಟ್ಟೆಯ ಒಳಗಡೆಯೇ ಒದ್ದಾಡಿ – ಒದ್ದಾಡಿ ಕಣ್ತೆರೆವ ಮೊದಲೇ ತನ್ನ ಕಣ್ಣನ್ನ ಗರ್ಭದಲ್ಲೇ ಮುಚ್ಚಿತು ಆ ಮಗು. ಒಂಭತ್ತು ತಿಂಗಳು ಹೊತ್ತ ಮಗು ಕೈಗೆ ಸಿಗದಂತಹ ಪರಿಸ್ಥಿತಿಯಲ್ಲೂ ಕುಗ್ಗದ ನನ್ನಮ್ಮ, ನಿಂದನೆಯ ಮಾತುಗಳನ್ನು ನುಂಗಿದ ನನ್ನಮ್ಮ ತನ್ನ ಮನೆಯ ಕೆಲಸಗಳನ್ನು ಮುಂದುವರಿಸಿದಳು. ಅಷ್ಟರಲ್ಲಿ ಮತ್ತೆ ಗರ್ಭಿಣಿಯಾದ ನನ್ನಮ್ಮ ನನ್ನನ್ನು ತನ್ನ ಗರ್ಭದಲ್ಲಿ ಹೊತ್ತಳು. ತಾಯಿ ಇಲ್ಲದ ಆ ಎರಡು ಮುಗ್ಧ ಮಕ್ಕಳನ್ನು ಎಂದಿಗೂ ಬೇರೆಯವರೆಂದು ಭಾವಿಸದೇ ತನ್ನ ಸ್ವಂತ ಮಕ್ಕಳಿಗಿಂತಲೂ ಹೆಚ್ಚು ಪ್ರೀತಿಯನ್ನು ಉಣಿಸಿ ಸಾಕಿದಳು. ನಾನು ಆಕೆಯ ಸ್ವಂತ ಮಗಳೇ ಆದರೂ ನನ್ನನ್ನು ಎಂದಿಗೂ ಕೂಡ ಅತಿಯಾಗಿ ಪ್ರೀತಿಸಲಿಲ್ಲ, ನನಗೆ ಕೆಲವೊಮ್ಮೆ ಅನುಮಾನವಾಗುತ್ತದೆ “ಈಕೆ ನಿಜವಾಗಿಯೂ ನನ್ನ ತಾಯಿಯೇ” ಎಂದು. ಇಂದಿಗೂ ಕೂಡ ನನಗೆಂದೇ ಪ್ರತ್ಯೇಕವಾಗಿ ಯಾವುದನ್ನೂ ಎತ್ತಿಟ್ಟವಳಲ್ಲ ನನ್ನಮ್ಮ, ಒಂದು ದಿನವೂ ನನ್ನನ್ನ ಮುದ್ದು ಮಾಡಿದವಳಲ್ಲ ನನ್ನಮ್ಮ, ಅಬ್ಬಾ….! ಅವಳಷ್ಟು ತಾಳ್ಮೆ ಯಾರಿಗೂ ಇಲ್ಲ. ನೋವಿನಲ್ಲಿ ತನ್ನ ಹೃದಯ ಜರ್ಜರಿತವಾಗಿದ್ದರು ಎಂದಿಗೂ ರಕ್ತದ ಕಲೆಯನ್ನು ತೋರಿದವಳಲ್ಲ ನನ್ನಮ್ಮ. ಅವಲಂಬನೆ ಎಂಬುದೊಂದು ಬಂಧನ ಎಂದು ಅರಿತ ಅವಳು ಮುಕ್ತ ಜೀವನವನ್ನೇ ನಡೆಸಿದಳು. ಆಕೆಯ ಪ್ರೀತಿಗೆ ಪಾಲುದಾರರಿದ್ದಾರಲ್ಲವೇ, ಅವರಿಗೂ ಕೂಡ ನ್ಯಾಯ ಒದಗಿಸಬೇಕಲ್ಲವೇ ?!. ಪುಣ್ಯ ಮಾಡಿರುವೆನು ಅವಳ ಮಡಿಲ ಮಗುವಾಗಿ ಬೆಳೆಯಲು, ಆಕೆಯ ಜೀವನವೇ ನನಗೆ ಕಲಿಸಿಕೊಟ್ಟ ಪಾಠವೆಂದರೆ ನಾವೆಂದಿಗೂ ಯಾವುದಕ್ಕೂ ಯಾರನ್ನೂ ಅವಲಂಬಿಸಬಾರದು ಅದು ಅನ್ನಕ್ಕೇ ಆಗಿರಲಿ, ಅರಿವಿಗೇ ಆಗಿರಲಿ ಅಥವಾ ಆಶ್ರಯಕ್ಕೇ ಆಗಿರಲಿ…….ಜಗತ್ತಿನ ಎಲ್ಲಾ ತಾಯಂದಿರಿಗೂ ಶತ ಶತ ನಮನಗಳು.

 

ಬರಹ : ಕವನ ಕೆ.,

ಪ್ರಥಮ ವರ್ಷದ ಬಿಎ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

 

Teachers Day:2023

‘ಸಂಧ್ಯಾ’ ಕಾಲದಲಿ ‘ಅನರ್ಘ್ಯ’ ‘ಶ್ರೀಕರ’ನ ‘ರೇಷ್ಮೆ’ಯ
‘ಕಿರಣ’ಗಳು
‘ಅನು’ದಿನವು ‘ಶ್ವೇತ’ಪತ್ರಗಳ ಮೇಲೆ ‘ಮಂಜಿ’ನ
‘ಹನಿ’ಯ ಸುರಿಸುತ ‘ನೆನೆಸಿ’
‘ಸುನೀಲಾ’ಕಾಶದಲಿ ‘ರಜತ’ ಮೇಘಗಳ ‘ಅಂಜಿ’ಸಿ
ಹುತ’ವಹಾಬ’ನ ಹಿಂದಿಕ್ಕಿ ಹರಿಸುತ ‘ವಿಭಾ’ವಳಿಯ
‘ಚೆನ್ನ-ವಿಶ್ವ’ದಲಿ ಮುರುಳಿ ‘ರಾಯ’ನ ‘ಶೃತಿ’ಯ ‘ಮೋಹಿಸುತ’
‘ಜೇನ”ಸುವರ್ಚಲ’ ‘ಪ್ರಶಾಂತ’ ಮನಸಿನಲಿ
‘ಹುಚ್ಚ’ನ ಗುರು-‘ಪ್ರೇಮ’ ಕವಿತೆಗಳ
‘ನವೀನ’ ‘ಕಾವ್ಯದಿಂಚರ’ಗಳು ಕಡೆದು
‘ಅಶ್ವಿನಿ’ಯ ‘ರೂಪ’ವಿಹ ‘ವಜ್ರಕಾಯ’ನ
‘ಕೀರ್ತಿ’ಯ ಮಿತ್ರ,
ಉರದಿ ‘ನಾಗ’ವ ಧರಿಸಿಹ ಗುರು-‘ಗಣೇಶ’ನ ‘ಪೂಜೆ’ಯ
‘ವಿನಯ’ದಿ ‘ಅರ್ಚಿಸಿ’
ಹೆಸರ ಅರಿಯದ ಗುರುವ ಕ್ಷಮಿಸೆಂದು ಬೇಡುತ
ಸಹಸ್ರ ‘ಮನುಷ್ಯ’ ಜನುಮದಲಿ ‘ಸಂತೋಷ’ಕೆ ‘ಮೇರೆ’ಗಳಿಲ್ಲದೆ ನೀವು ಬದುಕಿ , ನಾವು ನಿಮ್ಮ ಪಾದದ
ಧೂಳಾಗಿರಲೆಂದು ‘ಶ್ರೀದೇವಿಗೆ’
‘ಅಶೋಕ’ವನದಡಿಗಿರುವ ಇವರೆಲ್ಲರಿಗೂ ‘ಶಿಕ್ಷಕರ-ದಿನಾಚರಣೆ’ಯ ದಿನ ಆಶೀರ್ವಾದಗಳ ‘ಅಕ್ಷಯ-ಪ್ರಸಾದವನು’ ನೀಡೆನುತ ಕೇಳುತಲಿ…..

 

ರಕ್ಷಿತ್.  ಹೆಚ್. ಆರ್

ತೃತೀಯ ಬಿ ಎ ,  ವಿಧ್ಯಾರ್ಥಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

 

ಶಿಕ್ಷಕರ ದಿನಾಚರಣೆ ಪ್ರಯುಕ್ತ, ಕಾಲೇಜಿನ ಎಲ್ಲ ಅಧ್ಯಾಪಕರುಗಳ ಹೆಸರಿನಲ್ಲಿ ರಚಿಸಿರುವ ಕವನ,

ಸದ್ಯವಾದರೆ ! ಅವುಗಳನ್ನು ಗುರುತಿಸಿ ಕಮೆಂಟ್‌ ಮಾಡಿ. 

 

 

ಪುಸ್ತಕ ವಿಮರ್ಶೆ

ಕಾಲೇಜಿನಲ್ಲಿ ಗ್ರಂಥಾಲಯ ಇದ್ದರೂ, ಹೊರಗಡೆ ಪುಸ್ತಕ ಕೊಂಡುಕೊಂಡು ಓದುವುದು ನನ್ನ ರೂಢಿ.. ಹಾಗಾಗಿ ಏನಾದರೂ ಕೆಲಸವಿದ್ದರೆ ಮಾತ್ರ ಕಾಲೇಜು ಗ್ರಂಥಾಲಯದ ಕಡೆಗೆ ಪಯಣ.. ಹೀಗೆ ಮೊನ್ನೆ ಕಾಲೇಜು ಲೈಬ್ರರಿಗೆ ಭೇಟಿ ನೀಡಿದ್ದೆ, ಗಣೇಶ್ ಸರ್ ಯಾವುದೋ ಪುಸ್ತಕ ಹುಡುಕುವುದರಲ್ಲಿ ನಿರತರಾಗಿದ್ದರು.. ಯಾಕೋ ಗಂಭೀರವಾಗಿರುವಂತೆ ಕಂಡರು.. ಹೇಗೆ ಕೇಳುವುದು ತಿಳಿಯದೇ ಅಳುಕುತ್ತಲೇ, ಸರ್, ಇಲ್ಲಿರುವ ಪುಸ್ತಕಗಳು ವಿದ್ಯಾರ್ಥಿಗಳಿಗೆ ಅಷ್ಟೇನಾ ಅಥವಾ ಉಪನ್ಯಾಸಕರೂ ಓದಬಹುದಾ ? ಎಂದು ಕೇಳಿದೆ.. ತಕ್ಷಣಕ್ಕೆ ಉತ್ತರಿಸಿದ ಅವರು ಗ್ರಂಥಾಲಯ ಇರುವುದೇ ಓದುವವರಿಗಾಗಿ ಮೇಡಂ ಎಂದರು…

ಹಾಗೆಯೇ, ಕನ್ನಡ ಪುಸ್ತಕಗಳಿರುವ ವಿಭಾಗದಲ್ಲಿ ಪುಸ್ತಕಗಳನ್ನ ಹುಡುಕುವಾಗ ನನ್ನ ಕೈ ಗೆ ಸಿಕ್ಕಿದ್ದು, ಧಾರವಾಡದ ಪಡ್ಡೆ ದಿನಗಳು ಪುಸ್ತಕ.. ಈ ಪುಸ್ತಕವನ್ನು ಬರೆದವರು ಖ್ಯಾತ ವಿಮರ್ಶಕರು, ಕಥೆಗಾರರು,ಲೇಖಕರಾಗಿರುವ ರಾಜೇಂದ್ರ ಚೆನ್ನಿ… ಅವರನ್ನು ಪ್ರತಿದಿನವೂ ಹತ್ತಿರದಿಂದ ನೋಡುವುದರಿಂದ ಅವರ ಪುಸ್ತಕವನ್ನು ಒಮ್ಮೆ ಓದಬೇಕೆನಿಸಿತು. ಆ ಪುಸ್ತಕವನ್ನು ತೆಗೆದುಕೊಂಡು ಲೈಬ್ರರಿಯಿಂದ ಹೊರನಡೆದೆ.

ಲೇಖಕರು ಈ ಪುಸ್ತಕದಲ್ಲಿ ಕಾಲೇಜು ದಿನಗಳಲ್ಲಿದ್ದಾಗ ಅನುಭವಿಸಿದ ಪಡ್ಡೆ ದಿನಗಳನ್ನು 11 ಅಧ್ಯಾಯಗಳಲ್ಲಿ ಬರೆದಿದ್ದಾರೆ. ಪುಸ್ತಕದ ಪ್ರತೀ ಅಧ್ಯಾಯವೂ ಕೂಡ ವಿಭಿನ್ನವಾಗಿದೆ. ನಟಿ ಹೇಮಾ ಮಾಲಿನಿಯವರು ಗಿರೀಶ್ ಕಾರ್ನಾಡ್ ಅವರನ್ನ ಮದುವೆ ಆಗ್ತಾರೆ. ಅವರು ಧಾರವಾಡದ ಸೊಸೆಯಾಗ್ತಾರೆ ಎನ್ನುವ ಸುದ್ದಿಯನ್ನ ಪೇಪರ್ ನಲ್ಲಿ ಓದಿ, ಕುತೂಹಲದಿಂದ ಆ ದಿನಕ್ಕಾಗಿ ಕಾಯುವ ಸ್ನೇಹಿತರ ಬಳಗದ ಕುರಿತು ಮೊದಲ ಅಧ್ಯಾಯದಲ್ಲಿ ಬರೆಯಲಾಗಿದೆ.

ಆಮೇಲಿನ ಅಧ್ಯಾಯಗಳಲ್ಲಿ ಅವರು ತಮ್ಮ ಕರ್ನಾಟಕ ಕಾಲೇಜನ್ನು ಹುಲಗೂರು ಸಂತಿ ಎಂದಿದ್ದಾರೆ. ಆಗೆಲ್ಲಾ ಕಾಲೇಜು ಚುನಾವಣೆಗಳಿಗೆ ಎಷ್ಟೊಂದು ಮಹತ್ವ ಇತ್ತು ಎನ್ನುವುದನ್ನು ಕೂಡ ವಿವರಿಸಿದ್ದಾರೆ.

ಒಮ್ಮೆ ಅವರ ಕಾಲೇಜಿಗೆ ಲಂಕೇಶರು ಬಂದಿರುತ್ತಾರೆ. ಆ ಕಾರ್ಯಕ್ರಮಕ್ಕೆ ಪಡ್ಡೆಹುಡುಗರು ಹೋಗಿರುವುದಿಲ್ಲ. ಆಮೇಲೆ ಲಂಕೇಶರ ಪ್ರಸ್ತಾಪವನ್ನು ಕೇಳಲಾಗಲಿಲ್ಲವೆಂದು ತಮ್ಮ ಅದೃಷ್ಟವನ್ನು ಶಪಿಸಿಕೊಳ್ಳುವ ಪ್ರಸಂಗವನ್ನು ಇಲ್ಲಿ ಕಾಣಬಹುದಾಗಿದೆ.

ಇನ್ನೊಂದು ಸನ್ನಿವೇಶದಲ್ಲಿ ಡಾ. ರಾಜಕುಮಾರ್ ಅವರ ಪ್ರತಿ ಸಿನಿಮಾಗಳಲ್ಲಿಯೂ ಇರುತ್ತಿದ್ದ, ಖ್ಯಾತ ನಟ ನರಸಿಂಹರಾಜು ಅವರು ಸದಾರಮೆ ನಾಟಕ ಮಾಡಲು ಧಾರವಾಡಕ್ಕೆ ಬಂದಾಗ ಏನೆಲ್ಲಾ ಘಟನೆಗಳು ನಡೆದವು ಎನ್ನುವುದನ್ನು ಮನಸ್ಸಿಗೆ ನಾಟುವಂತೆ ಪ್ರಸ್ತುತ ಪಡಿಸಿದ್ದಾರೆ.

ಧಾರಾವಾಡದಲ್ಲಿದ್ದ ಜರ್ಮನ್ ಆಸ್ಪತ್ರೆ ಮತ್ತು ಅಲ್ಲಿನ ಕನ್ನಡ ಮಾತನಾಡುವ ವಿದೇಶಿ ಡಾಕ್ಟರ್ ಹಾಗೂ ಇಂಗ್ಲಿಷ್ ತುಂಬಾ ಚೆನ್ನಾಗಿ ಮಾತನಾಡುವ ಸುಂದರ ಹುಡುಗಿಯೊಬ್ಬಳ ಪಪ್ಪಿ ಲವ್ವಲ್ಲಿ ಬಿದ್ದು, ಅವಳಿಗೆ ಪ್ರೇಮ ಪ್ರಸ್ತಾಪ ಮಾಡಿದ ಸನ್ನಿವೇಶವನ್ನು ಅಚ್ಚು ಕಟ್ಟಾಗಿ ಹಾಸ್ಯದೊಂದಿಗೆ ಬರೆಯಲಾಗಿದೆ.

“ಕಾಲನೆನ್ನುವ ಪಾಪಿ ಕಡೆಗೂ ನಮ್ಮ ಪಡ್ಡೆದಿನಗಳನ್ನು ಕದ್ದು ನಡದೇಬಿಟ್ಟನು” ಎಂಬ ಬೇಸರದೊಂದಿಗೆ ಈ ಪುಸ್ತಕ ಮುಗಿಯುತ್ತದೆ.  ಹಾಗೆ ನೋಡಿದರೆ, ರಾಜೇಂದ್ರ ಚೆನ್ನಿಯವರು ಗಂಭೀರ ಚಿಂತಕರು…. ಹೀಗಿರುವಾಗ ತಾವು ಕಾಲೇಜು ದಿನಗಳಲ್ಲಿದ್ದಾಗ ಪಡ್ಡೆ ಹುಡುಗರಾಗಿದ್ದರು ಎನ್ನುವುದರ ಕೈ ಗನ್ನಡಿಯಾಗಿ, ತೆರೆದ ಪುಸ್ತಕದಂತೆ ಎಳೆ ಎಳೆಯಾಗಿ ಈ ಪುಸ್ತಕದಲ್ಲಿ ತಮ್ಮ ಅನುಭವಗಳನ್ನು ತೆರೆದಿಟ್ಟಿರುವುದು ವಿಶೇಷ.

ಎಲ್ಲರ ಕಾಲೇಜಿನ ಪಡ್ಡೆ ದಿನಗಳನ್ನೂ ನೆನಪಿಸುವಂತಹ ಪುಸ್ತಕ ಇದಾಗಿದೆ. ಹೆಚ್ಚು ಗಾಂಭೀರ್ಯತೆಯನ್ನು ಹೊಂದದ, ಲಘು ಹಾಸ್ಯ, ಹಾಗೂ ಸರಾಗವಾಗಿ ಓದಿಸಿಕೊಳ್ಳುವ ಒಳ್ಳೆಯ ಪುಟ್ಟ ಪುಸ್ತಕ ಇದಾಗಿದೆ.. ಸಾಧ್ಯವಾದರೆ ಒಮ್ಮೆ ಈ ಪುಸ್ತಕ ಓದಿ…

ಅಂಜುಮ್ ಬಿ.ಎಸ್.

ಉಪನ್ಯಾಸಕರು, ಪತ್ರಿಕೋದ್ಯಮ ವಿಭಾಗ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ನನ್ನ ಕಾಲೇಜು ನನ್ನ ಹೆಮ್ಮೆ- 2

ಆ ದಿನ ಸಂಜೆ ಹೊಸನಗರದಿಂದ ಶಿವಮೊಗ್ಗಕ್ಕೆ ಬಂದು ಕಾಲಿಟ್ಟ ಆ ದಿನ ಕಳೆದು ಬಹಳ ಕಾಲವಾಯಿತು ಎಂದು ಅನಿಸುತ್ತಿಲ್ಲ..

ನೋಡು ನೋಡುತ್ತಲೇ ಎರಡು ವರ್ಷ ಅಲ್ಲ ಎರಡುವರೆ ವರ್ಷಗಳು ಕಳೆದು ಹೋಯಿತು.. ಯಾರೂ ಪರಿಚಯ ಇರದ ತರಗತಿ, ಬೆರಳೆಣಿಕೆ ದಿನಗಳಲ್ಲಿ ಪರಿಚಯವಾಗಿ ಕಳೆದು ಹೋದ ಆ ದಿನಗಳನ್ನು ನೆನೆಯುವುದು ಅನಿವಾರ್ಯ.

ಕ್ಲಾಸ್ ಇಲ್ಲದೆ ಇದ್ದಾಗ ಸ್ನೇಹಿತರೊಂದಿಗೆ ಹರಟೆ ಹೊಡೆದ  ಆ ಕ್ಷಣಗಳು, ಮಾಡಿದ ಮೋಜು ಮಸ್ತಿ, ನಮಗೆ ಫ್ರೆಷರ್ಸ್ ಪಾರ್ಟಿ ಕೊಟ್ಟ ಆ ಸೀನಿಯರ್ಸ್ ಗಳಿಗೆ ಬೀಳ್ಕೊಡುಗೆ ಸಮಾರಂಭ ಮಾಡಿದ ಆ ಕ್ಷಣಗಳು, ಕನ್ನಡ ತರಗತಿಯಲ್ಲಿ ಮಾಡಿದ ತರ್ಲೆಗಳು, ಇಂಗ್ಲಿಷ್ ತರಗತಿಯಲ್ಲಿ ಮಾಡಿದ ಕೀಟಲೆಗಳು,

ಆಪ್ಷನಲ್ ಇಂಗ್ಲಿಷ್ ತರಗತಿಯಲ್ಲಿ ನಿದ್ರೆ 😴 ಹೋದ ಆ ಕ್ಷಣಗಳು, ಸೈಕಾಲಜಿ ತರಗತಿಯಲ್ಲಿ ತಮಾಷೆ ಮಾಡಲು ಹೋಗಿ ಅಮಾವಾಸ್ಯೆಯಾದ ಆ ದಿನಗಳು😂🙌, ಆಕ್ಟಿವಿಟಿ ಗಾಗಿ ಕೂರುತ್ತಿದ್ದ  ಜರ್ನಲಿಸಂ ಕ್ಲಾಸ್ ಗಳು,🥳, ಅಟೆಂಡೆನ್ಸ್ ಬೇಕಲ್ಲ ಎಂದು ಕೂರುತಿದ್ದ ಐಸಿ ಮತ್ತು ಇವಿಎಸ್ ತರಗತಿಗಳು😁.

ಬೇಡ ಬೇಡವೆಂದರೂ ಬರುತ್ತಿದ್ದ ಎರಡು ಇಂಟರ್ನಲ್ಸ್ ಗಳು🥺🤦🏻‍♀️, ನಾನ್ ಏನ್ ಕಮ್ಮಿ ಇಲ್ಲ ಅಂತ ಅಪರೂಪಕ್ಕೊಮ್ಮೆ ಬರುತ್ತಿದ್ದ ಮಾಕ್ ಪ್ರಾಕ್ಟಿಕಲ್ಸ್ ಗಳು 🤦🏻‍♀️ಕ್ಲಾಸ್ ಟೆಸ್ಟ್ ಗಳು, ಇವೆಲ್ಲವೂ ಕೂಡ ಮೊನ್ನೆ ಮೊನ್ನೆ  ಅಷ್ಟೇ ನಡೆದಂತೆ ಅನಿಸುತ್ತಿದೆ..

ಕ್ಲಾಸ್ ಮುಗಿದ ಕೂಡಲೇ ಪಕ್ಕದಲ್ಲಿರುವ ಟೀ ಅಂಗಡಿಗೆ ಹೋಗಿ ಕುಡಿಯುತ್ತಿದ್ದ ಬಿಸಿ ಬಿಸಿ ಟೀ ☕ ಗಳು ಮತ್ತು 12 ರೂಪಾಯಿಯ ಪೇಪರ್ ಬೋಟ್ಗಳು 🧃, ಹೊರಗಡೆ ಊಟಕ್ಕೆ ಕಾಸಿಲ್ಲ💰 ಎಂದಾಗ ಕಾಲೇಜ್ ಕ್ಯಾಂಟೀನ್ ನಲ್ಲೇ ಅನ್ನ ಮತ್ತು ಸೊಪ್ಪಿನ ಹುಳಿ 🍚 ತಿನ್ನುತ್ತಿದ್ದ ಆ ದಿನಗಳು, ಕೆಲವರಿಗಂತು ಉಪ್ಪಿನಕಾಯಿಯೇ ಅನ್ನ 😂 ಹೋಗಿಬಂದು ಕುಡಿಯುತ್ತಿದ್ದ ಆ ಮಜ್ಜಿಗೆ ಮತ್ತು ತಿನ್ನುತ್ತಿದ್ದ 🍋 ನಿಂಬೆಕಾಯಿ ಉಪ್ಪಿನಕಾಯಿ.

ಕಾಲೇಜ್ ಕ್ಯಾಂಟೀನ್ ನಲ್ಲಿ ತಿಂದು ತಿಂದು ಬೇಸರವಾದಾಗ, ಸಾಲ ಮಾಡಿ ಹೋಗುತ್ತಿದ್ದ ಆ ತಿನಿಸು ಅಂಗಳ (ಫುಡ್ ಕೋರ್ಟ್) ದಲ್ಲಿ ತಿನ್ನುತ್ತಿದ್ದ ಆ ಪಲಾವ್, ಗೋಬಿ, ಮೊಸರನ್ನ, ದಿನ ಕಳೆದಂತೆ ಬದಲಾದ ಆ ಪಯಣದ ದಾರಿ ವೆಜ್ ಫುಡ್ ಕೋರ್ಟ್ ನಿಂದ ನಾನ್ ವೆಜ್ ಫುಡ್ ಕೋರ್ಟ್ ಕಡೆಗೆ.

ತರಗತಿ ಇದ್ದರೂ ಬಂಕ್ ಮಾಡಿ ಲೈಬ್ರರಿಯಲ್ಲಿ ಕೂತು ಕಂಪ್ಲೀಟ್ ಮಾಡಿದ ಅಸೈನ್ಮೆಂಟ್  ಮತ್ತು ರೆಕಾರ್ಡ ಗಳು  ಗಳು, ಮನಸ್ಸಿಲ್ಲದ ಮನಸ್ಸಿನಲ್ಲಿ ಮಾಡಿದ ಆ ಪಿಪಿಟಿ ಮತ್ತು  ಸೆಮಿನಾರ್ ಗಳು,  ಮಧ್ಯಾಹ್ನ ಕ್ಲಾಸ್ ಇಲ್ಲದೆ ಇದ್ದಾಗ ಮಾಡಿದ ಆ ಗಲಾಟೆಗಳು, ಅದಕ್ಕೆ ಪ್ರತಿಫಲವಾಗಿ ಸರಾಸರಿಯಾಗಿ ಪ್ರತಿಯೊಬ್ಬ ಶಿಕ್ಷಕರಿಂದ ಉಗಿಸಿಕೊಂಡ   ಆ ಮಧುರವಾದ ಕ್ಷಣಗಳು. 😁⭐

ಕಡೆ ಕಡೆಗೆ ಪರಿಚಯ ಆದ  ಜೂನಿಯರ್ಸ್ ಗಳು🦧 ಸೀನಿಯರ್ಸ್ ಅಂತ ಬಹಳ ಮರ್ಯಾದೆ  ಮರ್ಯಾದೆ ನೀಡುತ್ತಾ ನಮಗೆ ಹೆದರದೆ ಸಹೋದರ ಸಹೋದರಿಯರಂತೆ ಕೀಟಲೆ ಮಾಡಿ, ಕಾಳಜಿ ತೋರಿಸುತ್ತಿದ್ದ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಕಲಿಯುತ್ತಿರುವ ಗೆಳೆಯರು.

ಇಂಟರ್ನಲ್ ಇದ್ದಾಗ ಮಾತ್ರ ಯೂಸ್ ಮಾಡಿಕೊಳ್ಳುತ್ತಿದ್ದ ಲೈಬ್ರರಿ ಕಾರ್ಡುಗಳು , ಲೈಬ್ರರಿಗೆ ಓದಲು 📖 ಎಂದು ಹೋಗಿ ಅಲ್ಲೇ ಮಲಗಿ ಬಿಡುತ್ತಿದ್ದ ಸಾಧಕರದ ನನ್ನ ಮಿತ್ರರು, ಸದಾಕಾಲ ಓದುತ್ತಲೇ ಇದ್ದು ಟಾಪರ್ ಟಾಪರ್ ಎಂದು ಕರೆಸಿ ಕೊಳ್ಳುತ್ತಿದ್ದಂತ ಮಹಾನ್ ಮೇಧಾವಿಗಳು, ಏನು ಓದದೆ ಪರೀಕ್ಷೆಯಲ್ಲಿ ಓದಿದವರಿಗಿಂತ ಹೆಚ್ಚು ಅಂಕಗಳನ್ನು ಗಳಿಸುತ್ತಿದ್ದ ಬುದ್ಧಿವಂತರು, ಏನನ್ನು ಓದಿಯೇ ಇಲ್ಲ ಓದಿಯೇ ಇಲ್ಲ ಎಂದು ಕಾಗೆ ಹಾರಿಸಿ ಪ್ರತಿ ಪರೀಕ್ಷೆಯಲ್ಲೂ  ಅತ್ಯುತ್ತಮ ಅಂಕಗಳನ್ನು ಗಳಿಸಿ ಉತ್ತೀರ್ಣರಾಗುತ್ತಿದ್ದ   ಆ ಮಿತ್ರದ್ರೋಹಿಗಳು.

ಸದಾಕಾಲ ಹೊಗಳಿಸಿಕೊಳ್ಳುವವರ ಮಧ್ಯೆ ಇಲ್ಲದ ಕೀಟಲೆಗಳನ್ನು ಮಾಡಿ ಬೈಸಿಕೊಳ್ಳುತ್ತಿದ್ದ ವೀರರು, ಪ್ರಾರಂಭದಲ್ಲಿ ಉಂಟಾದ ಅದೆಷ್ಟೋ ಗ್ಯಾಂಗ್ಗಳು,  ಕಾಲಾ ನಂತರ ಮುರಿದು ಬಿದ್ದ ಅದೇ ಗ್ಯಾಂಗಳು, ಉಂಟಾದ ಅದೆಷ್ಟೋ ಮನಸ್ತಾಪಗಳು , ಬಿಡು ಮಚ ಇದೆಲ್ಲ ಕಾಮನ್ ಅನ್ನುತ್ತಾ..

ಫ್ರೆಂಡ್ಶಿಪ್ ಅಲ್ಲಿ ಒಂದಿಷ್ಟು ಜಗಳ ಕಾಮನ್ ಅಲ್ಲವೇ,
ಕಂಪ್ರೋ ಮಾಡಿ  ಮತ್ತರಿತುಕೊ ಒಗಟ್ಟಲಿ ಬಲವಿದೆ..

ಎಂದು ಕಿರಿಕ್ ಪಾರ್ಟಿ ಸಿನೆಮಾದ ಹಾಡನ್ನು ನೆನೆಸುತ್ತ ಕೊನೆಗೂ ಒಂದಾದ ಅದೆಷ್ಟೋ ಸ್ನೇಹ ಸಂಬಂಧಗಳು.

ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಎಲ್ಲಾ ಕಾರ್ಯಕ್ರಮಗಳನ್ನು ಭಾಗವಹಿಸುತ್ತಿದ್ದ ಪ್ರತಿಭೆಗಳು⭐, ಪ್ರತಿಯೊಬ್ಬರೂ ಭಾಗವಹಿಸಲೇಬೇಕೆಂದು ಎಲ್ಲರಿಗೂ ಅವಕಾಶಗಳನ್ನು ಕೊಡುತ್ತಿದ್ದ ಕಟೀಲ್ ಅಶೋಕ್ ಪೈ ಕಾಲೇಜಿನ ಶಿಕ್ಷಕ ವೃಂದ, ಯಾವ ವಿದ್ಯಾರ್ಥಿಗಳನ್ನು ಅನಗತ್ಯವಾಗಿ ಹೊರಗಡೆ ಹೋಗದಂತೆ ಕಾವಲು ಕಾಯುತ್ತಿದ್ದ ಅಬ್ದುಲ್ ಅಣ್ಣ, 

ಇದೇ ನಮ್ಮೆಲ್ಲರ ಕಾಲೇಜ್ ,

ಇಷ್ಟೇ ಅಲ್ಲ ಹೇಳಕ್ ಹೋದ್ರೆ ಬೇಜಾನ್ ಇದೆ ಆದ್ರೆ ಓದೊರಿಲ್ಲ.. Anyway ಇನ್ನೇನ್ ಕಾಲೇಜ್ ಮುಗೀತಾ ಬಂತು … ನಗ್ತಾ ಇರೋಣ ನಾಗ್ಸ್ತಾ ಇರೋಣ..

ಇಷ್ಟು ಹೇಳಕ್ಕೆ ಇಷ್ಟಪಡ್ತೀನಿ ಓಕೆ ಫ್ರೆಂಡ್ಸ್ ಬಾಯ್.

ಮಧುಶ್ರೀ,

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

ಬದುಕು

ಬದುಕು,
ಬದುಕೊಂದು ಮರ,
ಹುಟ್ಟಿನಿಂದ ಸಾಯುವವರೆಗೂ,
ಸತತವಾಗಿ ಬೆಳೆಯುವ ಹೆಮ್ಮರ.

ಬೆಳೆಸಬೇಕಾಗಿದೆ ಈ ಮರವನ್ನು ಜಾಗ್ರತೆಯಿಂದ,
ಎರೆಯಬೇಕಾಗಿದೆ ಪ್ರೀತಿ, ಮಮತೆ ತುಂಬಿದ ನೀರನ್ನು,
ಹಾಕಬೇಕಾಗಿದೆ ಕರುಣೆ, ವಾತ್ಸಲ್ಯವೆಂಬ ಗೊಬ್ಬರವನ್ನು,
ಸೇರಿಸಬೇಕಾಗಿದೆ ಭಾಂದವ್ಯ, ಭ್ರಾತೃತ್ವವೆಂಬ ಎರೆಹುಳುವನ್ನು,
ಆಗಲೇ ಮರ ಬಿಡುವುದು ಇದೆಲ್ಲದರ ಮಿಶ್ರಿತ ಫಲ-ಪುಷ್ಪಗಳನ್ನು,

ಬದುಕು, ಬದುಕೊಂದು ಮರ.

ಬದುಕಬೇಕು ಹೆಮ್ಮರವಾಗುವ ತನಕ,
ಹೆಮ್ಮರವಾಗಬೇಕು ನೆರಳು ನೀಡುವ ತನಕ,
ನೆರಳು ನೀಡುತಿರಬೇಕು ಸಾಧ್ಯವಾಗುವ ತನಕ,
ಕೊನೆಯ ತನಕ, ಸಾಯುವ ತನಕ………………

ಸಾಗಿಸಲೇ ಬೇಕು, ತೂಗಿಸಲೇ ಬೇಕು,
ಎಷ್ಟಾದರೂ ಖರ್ಚಿರಲಿ ನಡೆಸಲೇಬೇಕು,
ಭಾಗಬೇಕು, ಬೀಗಬೇಕು,
ಏಳಬೇಕು, ಬೀಳಬೇಕು,
ನಗಬೇಕು, ಅಳಬೇಕು,
ಬಂದವರಿಗೆ “ಬಾ” ಎನ್ನಬೇಕು,
ಹೋಗುವವರಿಗೆ “ದಾರಿ” ಬಿಡಬೇಕು,

ಬದುಕು,ಬದುಕೊಂದು ಮರ.

ಮಳೆಯಿರಲಿ-ಬಿಸಿಲಿರಲಿ ಧೃಢವಾಗಿ ನಿಲ್ಲಬೇಕು,
ಕಷ್ಟವಿರಲಿ-ಇಷ್ಟವಿರಲಿ ನಿರಂತರವಾಗಿ ಸಲುಹಬೇಕು,
ಏನಾದರೂ ಸರಿ, ಮುಂದೆಸಾಗುವೇ ಎಂಬ ಛಲವಿರಬೇಕು,
ಸಾಗಬೇಕು, ಸಾಗುತಲಿರಬೇಕು, ಸಾಗಿಸುತಲಿರಬೇಕು,
ನಿನ್ನದೇ ಈ ಬದುಕು, ನೀ ಬದುಕಲೇಬೇಕು,
ಬದುಕು,ಬದುಕೊಂದು ಮರ,

ಬದುಕೊಂದು ಅವಕಾಶ ದೇವರು ಕೊಡುವ ತನಕ,
ಬಳಸಿಕೋ ಮನುಷ್ಯ ನೀ ಇರುವ ತನಕ,
ಬೆಳೆಸಿಕೊ ನಿನ್ನ ತನುವನ್ನು ಎಲ್ಲರೂ ನೆನೆಸುವ ತನಕ,
ಬದುಕು ಮತ್ತೆ ಆ ದೇವರು ಕರೆಯುವ ತನಕ…………

ಬದುಕು,ಬದುಕೊಂದು ಮರ,ಬದುಕೊಂದು ಹೆಮ್ಮರ,
ಬದುಕೊಂದು ವೃಕ್ಷ, ಬದುಕೊಂದು ಕಲ್ಪವೃಕ್ಷ..!!

ಖುಷಿ. ವಿ. ಹಿರೇಮಠ.
ದ್ವಿತೀಯ ಬಿ. ಎ. ವಿದ್ಯಾರ್ಥಿನಿ
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.

ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..?

ಏನೆಂದು ಹೇಳುವುದು, ಹೇಗೆ ವರ್ಣಿಸುವುದು, ಯಾವ ರೀತಿಯಲ್ಲಿ ಚಿತ್ರಿಸುವುದು? ಪ್ರತಿಯೊಬ್ಬರ ಬದುಕಿನಲ್ಲೂ ‘ಅವಳು’ ಇಲ್ಲದೆ ಪರಿಪೂರ್ಣವೇ ಅಲ್ಲ.

ನವಮಾಸ ಹೊತ್ತು ಜಗಕ್ಕೆ ಪರಿಚಯಿಸಿದ ತಾಯಿ. ಮೊದಲ ಬಾರಿಗೆ ಮಗುವ ಮುಖವ ಕಂಡು ಆರೈಕೆ ಮಾಡಿ, ತಾಯಿಯ ಮಡಿಲಲ್ಲಿ ಮಲಗಿಸಿದ ದಾದಿ. ಅಕ್ಕರೆಯಿಂದ ನೋಡಿಕೊಂಡ ವೈದ್ಯಕೀಯ ಸಿಬ್ಬಂದಿಗಳು. ನೀರುನಿಡಿ ಹೊಯ್ದು, ಚೆಂದದಿ ದೃಷ್ಟಿಬೊಟ್ಟು ಇಟ್ಟು, ಸಾಮ್ರಾಣಿಯ ಹೊಗೆಹಾಕಿ, ಜೋಲಿಯಲ್ಲಿಟ್ಟು ಜೋಗುಳವ ಹಾಡಿ ಮಲಗಿಸಿದ ಅಜ್ಜಿ. ಎತ್ತಿಕೊಳ್ಳಲು ಹಾತೊರೆಯುತ್ತಿದ್ದ ಅಕ್ಕಂದಿರು. ಹಗಲು-ಇರುಳು ನಿದ್ದೆ-ಎಚ್ಚರಗಳಲ್ಲಿ ಪಕ್ಕದಲ್ಲಿದ್ದು ಜೋಪಾನವಾಗಿ ಕಾಪಾಡಿದ, ಹೊತ್ತುಹೊತ್ತಿಗೂ ಅಮೃತ ಉಣಬಡಿಸಿದ ತಾಯಿಯ ಪ್ರೀತಿ. ಬೆಳೆಯುವಾಗ ಲಾಲನೆ-ಪಾಲನೆ ಮಾಡಿದ ಹಿರಿಯರು. ಕೈಯಬೆರಳು ಹಿಡಿದು ಅಕ್ಷರ ತಿದ್ದಿಸಿದ ಶಿಕ್ಷಕಿಯರು. ಮೊದಲ ಶಾಲಾದಿನಗಳಲ್ಲಿ ಸಿಕ್ಕ ಮುಗ್ದಮನಸ್ಸಿನ ಗೆಳತಿ, ಜೋಡಿಯಾಗಿ ನಿಂತು ಕುಣಿದು ಕುಪ್ಪಳಿಸಿದ ಬಾಲ್ಯದ ದಿನಗಳು, ‘ರಾಖಿ ಹಬ್ಬ’ಕ್ಕೆ ತಪ್ಪದೇ ಕಾದು ರಾಖಿಕಟ್ಟಿ, ಸಿಹಿ ತಿನ್ನಿಸಿ, ಒಂದಿಷ್ಟು ಹಣ ಬಿಡದೇ ಇಸ್ಕೊಂಡ ಸಹೋದರಿಯರು.

ಪರೀಕ್ಷೆಯ ಸಮಯದಲ್ಲಿ ಅಲ್ಪ-ಸ್ವಲ್ಪ ಉತ್ತರ ಹೇಳಿಕೊಟ್ಟ ಗೆಳತಿಯರು, ಕೇಳಿದರೂ ಹೇಳಿಕೊಡದ, ತಿರುಗಿಯೂ ನೋಡದ ಹುಡುಗಿಯರು. ಆಪ್ತವಾಗಿ ಹರಟಿದ ದಿನಗಳು, ಗೆಳೆಯ-ಗೆಳತಿಯರು ಸೇರಿ ಹೋದ ಕಿರುಪ್ರವಾಸಗಳು. ಮನಸ್ಸ ಕದ್ದ ಮನದನ್ನೆಯು, ಹೇಳಲಾಗದ ಭಾವನೆಗಳು, ಕೈಕೊಟ್ಟ ಪ್ರೇಯಸಿಯು, ಕಛೇರಿಯ ಕೆಲಸದಲ್ಲಿ ಜೊತೆಯಾದ ಸಹೋದ್ಯೋಗಿ, ಕೈಹಿಡಿದ ಸಹಧರ್ಮಿಣಿಯು, ಎಲ್ಲಾ ಕ್ಷಣಗಳಲ್ಲೂ ಜೊತೆಯಾಗುವ, ಸದಾ ಬೆನ್ನೆಲುಬಾಗಿ ಒಳಿತು-ಕೆಡಕಿನಲೂ ಕೈಬಿಡದೆ ಕೈಹಿಡಿದ ಹೆಂಡತಿಯು, ‘ಕೇಳಿದ್ದನ್ನೆಲ್ಲ ಮಾಡಿಕೊಡಲು ಸಮಯವಿಲ್ಲ’ವೆಂದು ಪ್ರೀತಿಯ ಬೆರೆಸಿ ಆಡುಗೆ ಮಾಡಿ ಉಣಬಡಿಸಿದ ಮಡದಿಯು, ಅಪ್ಪನೆಂಬ ಹೆಸರ ತಂದುಕೊಟ್ಟ ಮಗಳು. ಅಮ್ಮನ ಪ್ರತಿರೂಪದಂತೆ ಆಕೆ ನಗುವಳು, ನಮ್ಮೆಲ್ಲ ಕಷ್ಟಗಳ ಇಲ್ಲವಾಗಿಸುವಳು. ಕಠೋರತೆಯ ಮನಸ್ಸನ್ನು ಕ್ಷಣಮಾತ್ರದಲ್ಲೇ ನಗಿಸಿ ಎಲ್ಲ ನೋವುಗಳ ಮರೆಸುವವಳು. ಜವಾಬ್ದಾರಿಯನ್ನು ಕಲಿಸಿದವಳು, ಏನನ್ನೂ ಹೇಳದೇ ಎಲ್ಲವ ಕಲಿಸುವವಳು.

ಬೆಳೆದ ಮಗಳು ಉನ್ನತ ಶಿಕ್ಷಣಕ್ಕೆಂದು ಬೇರೆ ಊರಿಗೆ ತೆರಳುವಾಗ ಯಾರಿಗೂ ತಿಳಿಯದಂತೆ ಮಗುವಿನಂತೆ ಅತ್ತದ್ದು. ಅವಳಿಗೆ ಸನ್ಮಾನ ನಡೆದಾಗ ಖುಷಿಯಿಂದ ಚಪ್ಪಾಳೆ ತಟ್ಟಿದ್ದು, ಮದುವೆ ಮಾಡಿಕೊಡುವಾಗ ಏನೋ ಕಳೆದುಕೊಂಡಂತೆ ಅನಿಸಿದರೂ ಒಳ್ಳೆಯ ಮನೆಗೆ ಸೇರಿಸಿದೆವು ಎನ್ನುವ ಸಮಾಧಾನ. ಅವಳನ್ನು ಕಳಿಸಿಕೊಡುವಾಗ ಕಣ್ಣಂಚಲ್ಲಿ ತಿಳಿಯದೇ ಹನಿಗಳು ಮೂಡಿದ್ದು, ವಯಸ್ಸಾಗುತ್ತಾ ಹೋದಂತೆ ಅನಾರೋಗ್ಯಕ್ಕೆ ಸರಿಯಾದ ಸಮಯಕ್ಕೆ ಔಷಧಗಳನ್ನು ನೀಡಿ, ಪಥ್ಯವನ್ನು ತಾನೂ ಮಾಡಿ, ನನಗೂ ಮಾಡಿಸಲು ಹುರಿದುಂಬಿಸಿದ ಮಡದಿಯೇ ಮಮತೆ ತುಂಬಿದ ತಾಯಿಯಾಗಿದ್ದು. ಇಬ್ಬರೇ ಇದ್ದಾಗ ಕಿಚಾಯಿಸಿಕೊಂಡದ್ದು, ಹಾಸ್ಯಮಾಡಿದ್ದು, ಮಾತಿನ ಮೂಲಕ ಕಾಲು ಎಳೆದು ಮನಸಾರೆ ನಕ್ಕಿದ್ದು, ಏನೋ ನೆನಪಾಗಿ ಬಿಕ್ಕಿದ್ದು, ಒಲುವೆಯ ಕೈಗಳು ಕಣ್ಣೀರ ಒರೆಸಿ ಸಂತೈಸಿದ್ದು. ಕಣ್ಣಮುಂದೆ ಬೆಳೆದು ಮದುವೆಯಾಗಿ ಹೋದ ಮಗಳಿಗೆ ಪುಟ್ಟಮಗಳೊಬ್ಬಳು ಜನಿಸಿದ್ದು, ಅದರ ಲಾಲನೆ-ಪಾಲನೆಯಲ್ಲಿ ತೊಡಗಿಸಿಕೊಂಡದ್ದು, ಎತ್ತಿ ಆಡಿಸಿ ಬೆಳೆಸಿದ್ದು, ಬೆನ್ನಮೇಲೆ ಹೊತ್ತು ಆಟವಾಡಿಸಿ, ತಿರುಗಿಸಿ, ತಿನಿಸಿದ್ದು, ವಯಸ್ಸಾದವನು ಎಂಬುದನ್ನೇ ಮರೆಸಿದ್ದು. ಆಸ್ಪತ್ರೆಯಲ್ಲಿ ಮಲಗಿದಾಗ ‘ಎನೂ ಆಗಲ್ಲ ಭಯಪಡಬೇಡಿ ಸರ್’ ಎಂದ ಆ ಶುಶ್ರೂಷಕಿಯ ಭರವಸೆ ನೀಡುವ ಮಾತುಗಳು…

ಹೀಗೆ ಅದೆಷ್ಟು ನೆನಪಿನ ಬುತ್ತಿಗಳಲ್ಲಿ ವಿವಿಧ ರೂಪಗಳಲ್ಲಿ ‘ಅವಳು’ ತುಂಬಿರುವಳು. ಅವಳು ಪುರುಷನಿಗೆ ಸರಿಸಮಾನಳಲ್ಲ, ಅವನಿಗಿಂತಲೂ ಮಿಗಿಲಾದವಳು. ಆದರೆ ಆ ರೀತಿಯಲ್ಲಿ ಗೌರವ ಕೊಡುವ ನಮ್ಮ ಕರ್ತವ್ಯವನ್ನು ಮರೆತಿದ್ದೇವೆ. ಆಕೆಯೇ ಪ್ರಕೃತಿ, ಆಕೆಯೇ ಸೃಷ್ಠಿ, ಸಮಷ್ಠಿ ಎಲ್ಲವನ್ನೂ ಸರಿಯಾಗಿ ಅರಿತು ನಡೆದರೆ ಮಾತ್ರ ಬದುಕು ಸುಂದರ ನಮ್ಮಿಬ್ಬರಲ್ಲಿ ಯಾರು ಮೇಲು? ಎಂದು ತಿಳಿಯಹೊರಟರೆ ಯಾರಾದರೂ ಗೆಲ್ಲಬಹುದು, ಗೆಲುವಿನ ಭರದಲ್ಲಿ ಮೌಲ್ಯಗಳನ್ನೇ ಮರೆಯುತ್ತೇವೆ. ಗೆದ್ದರೂ ಸಂಭ್ರಮಿಸಲು ಜೊತೆಗಿರುವವರನ್ನೇ ಕಳೆದುಕೊಳ್ಳುತ್ತೇವೆ.

ಪ್ರತಿಯೊಬ್ಬರ  ಕೆಲಸ, ಸಾಧನೆ, ಸಂಶೋಧನೆ ಎಲ್ಲದರಲ್ಲೂ ಅವಳ ಪ್ರಭಾವವೋ, ಬೆಂಬಲವೋ ಇದ್ದೇ ಇರುತ್ತದೆ. ಮಹಿಳಾ ದಿನಾಚರಣೆ ಒಂದು ದಿನಕ್ಕೆ ಸೀಮಿತವಲ್ಲ, ದಿನನಿತ್ಯದಲ್ಲೂ ಅವರ ಮೇಲಿರುವ ಗೌರವ ಇಮ್ಮಡಿಯಾಗಲಿ, ಸದಾ ಕಾಲವೂ ಅದು ಹಾಗೆಯೇ ಇರಲಿ. ಎಲ್ಲಾ ರೀತಿಯ ಪಾತ್ರಗಳ ಮೂಲಕ ಎಲ್ಲಾ ರೀತಿಯ ಪ್ರೀತಿಯ ನೀಡಿದ ಅವಳಿಗೆ ಏನೆಂದು ಕರೆಯೋಣ? ಕವಿವಾಣಿಯಂತೆ ‘ಸ್ತ್ರೀ’ ಅಂದರೆ ಅಷ್ಟೇ ಸಾಕೇ..? ಬೇರೇನಾದರೂ ಹೇಳಬೇಕೆ..? ಹೇಳಿದರೂ ಆ ಪದಗಳು ಅವಳ ಮುಂದೆ ಗೌಣವೇ ಅಲ್ಲವೇ..?

ಮಹಿಳಾ ದಿನಾಚರಣೆಯ ಶುಭಾಶಯಗಳು🌱💐

 

ಚೇತನ್  ಸಿ ರಾಯನಹಳ್ಳಿ.

ಕನ್ನಡ ಶಿಕ್ಷಕರು ಮತ್ತು ರಂಗಕರ್ಮಿ. ಶಿವಮೊಗ್ಗ

 

ಭೂತಾಯಿಯ ಅಳಲು

Image Credit : Google / Share Chat

ಉಳಿಸಿರೋ ನನ್ನನ್ನು ನನಗಾಗಿ ಅಲ್ಲ ನಿಮಗಾಗಿ.
ಜೀವ ಸಂಕುಲದ ಒಳಿತಿಗಾಗಿ…

ಇಲ್ಲಿ ಹಾಳು ಮಾಡಿ ಭೂಮಿಯನ್ನು !
ಅನ್ಯ ಗ್ರಹ (ಮಂಗಳ ಮತ್ತು ಚಂದ್ರ)  ನೋಡುವಿರೇಕೊ??
ಇಲ್ಲಿ ಸಲ್ಲದ ನೀವು, ಅಲ್ಲಿ  ಸಲ್ಲುವೀರೇನೋ ಮೂರ್ಖರ?

ತಾಯಿಯನೆ  ಕೊಲ್ಲುತ ಹೊರಟ ನಿಮಗೆ ಬದುಕೆಲ್ಲಿ💔?
ಹಸಿರು ಕೊಂದ ಮೇಲೆ ಉಸಿರಾಡಲು ನಿಮಗೆ ಉಸಿರೆಲ್ಲಿ?!

ನನ್ನೊಡಲ ಬಗೆದರು  ನಾ ನಗುತ  ಸ್ವಾಗತಿಸುತಿದ್ದೆ.😊
ನನ್ನ ಮಾರಿದರು ಕೊಂಡವರ ಬಳಿ ನಗುತಲಿದ್ದೆ..🥺😁

ಹೆತ್ತ ತಾಯಿ ನಿಮ್ಮನ್ನು ಹಡೆದವಳು ನಿಜ  💯…
ಸತ್ತಾಗ ಹೆಣದ ವಾಸನೆ ಅವಳು ಸಹಿಸಿಕೊಳ್ಳದೆ ಮೂಗು ಮುಚ್ಚಿಕೊಳ್ಳುವ ಸಮಯದಲ್ಲಿ!
ನಿಮ್ಮ ಹೆಣವನ್ನು ಒಡಲಲ್ಲಿ ಬಚ್ಚಿಟ್ಟುಕೊಳ್ಳುವ
ಭೂತಾಯಿ ನಾ ಮನುಜ..

ಉಳಿಸಿರೋ ನನ್ನ ನನಗಾಗಿ ಅಲ್ಲ..
ನಿಮ್ಮ ಉಳಿವಿಗಾಗಿ 🥺💔
ನಾಳಿನ ಒಳಿತಿಗಾಗಿ…!!!!

ಮಧುಶ್ರೀ,

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

 

“ಕುವೆಂಪು” ಸಾಹಿತ್ಯ ನಮನ

Image Credit: Google-Star of Mysore

‘ಕಾನೂರು’ ಕಥೆಗೊಬ್ಬ ಹೂವಯ್ಯನ ಹುಟ್ಟು ಹಾಕಿ,

‘ಮದುಮಗಳು’ ಚಿನ್ನಮ್ಮನ

‘ಮಲೆಗಳಲ್ಲಿ’ ಕಟ್ಟಿಹಾಕಿ,

‘ಕಲಾ ಸುಂದರಿ’ ‘ದ್ರೌಪದಿ’ಯರ

‘ಶ್ರೀ ಮುಡಿಯ’ ಸೋಕಿ,

ಕುಪ್ಪಳ್ಳಿಯ ಕಂದ ನೀ

ರಸಿಕರೆಲ್ಲರೆದಯ ತಾಕಿ,

ಕಳೆದವಲ್ಲ ನೂರು ವಸಂತ

ಮತ್ತೆ ಹುಟ್ಟಿ ಬಾರೋ ಸಂತ….

 

ಪ್ರಕೃತಿ ಹೆಣ್ಣ ಬೆರಳುಗಳಿಂದ ಭಾವಗೀತೆಗಳ ಮಿಡಿಸಿ

ಮಲೆನಾಡ ಮಣ್ಣ ಗಂಧ ಸಾಲು ಸಾಲಿನಲ್ಲೂ ಸ್ಪರ್ಶಿಸಿ

ಮಾಧ್ಯಮ ಕನ್ನಡ ‘ಪಾಂಚಜನ್ಯ’ ಮೊಳಗಿಸಿ

‘ರಾಮಾಯಣದಿ’ ಕೈಕೆ, ಮಂಥರೆ, ಊರ್ಮಿಳೆಯಂ ಅಂತರಂಗ ‘ದರ್ಶಿಸಿ’

ನೀನಾದೆ ವಿಶ್ವಮಾನ್ಯ

ಹೇ ರಸ ಋಷಿ ನಿನ್ನ ಪ್ರತಿಭೆ ಅನನ್ಯ….

 

ನವೋದಯದ ನವಧಿ ‘ಚಂದ್ರಹಾಸ’ ಬೀರಿ

ಬೆಳಗಿ ಬೆಳೆದ ಭರದಿ ಭಾಷೆ ಬದುಕಮೀರಿ

ರಾಷ್ಟ್ರಕವಿಯಾಗಿ, ಪಂಪ, ಪದ್ಮ, ಜ್ಞಾನಪೀಠಗಳೆಲ್ಲ ನಿನ್ನಡಿಗೆರಗಿ

ಸಾಗಿ ಹೋದವೆಲ್ಲ ಧನ್ಯವಾದೆವೆಂದು ಬೀಗಿ

‘ಕರ್ನಾಟಕ ರತ್ನ’ ನಿನಗೆನ್ನ ಮನ

ಸಲ್ಲಿಸುತ್ತಿದೆ ಕೋಟಿ ಕೋಟಿ ನಮನ…..

 

ಮಹಾ ಛಂದಸ್ಸಿನ ಚಂದದ ಹರಹನೆಲ್ಲ ಬಳಸಿ

‘ಮಹಾರಾತ್ರಿ’, ‘ಸ್ಮಶಾನ ಕುರುಕ್ಷೇತ್ರದಲ್ಲಿ’ ಯಮನ ಸೋಲಿಸಿ

‘ಕೊಳಲನೂದುತ’  ‘ಅಗ್ನಿ ಹಂಸವೇರಿ’ ‘ಕಾವ್ಯ ವಿಹಾರ’ ನೆಡೆಸಿ

‘’ಚಕೋರಿ’ ವಾಗ್ದೇವಿಯ ಹೃದಯ ‘ಚಂದ್ರ ಮಂಚಕಿಳಿಸಿ’

 

ಕಳೆದವಲ್ಲ ನೂರು ವಸಂತ

ಮತ್ತೆ ಹುಟ್ಟಿ ಬಾರೋ ಸಂತ………

ಮಧುಶ್ರಿ,

ತೃತೀಯ  ಬಿ. ಎ, ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ