ಹೀಗೆಲ್ಲೋ ಕಲ್ಪನೆಯ ಸ್ವಪ್ನ!

Image Credit: Google.com

ನಿನ್ನೊಂದಿಗೆ ಕುಳಿತು
ನಿನ್ನೊಂದಿಗೆ ಕುಳಿತು

ಹುಣ್ಣಿಮೆಯ ಪೂರ್ಣ ಚಂದಿರನ ನೋಡಬೇಕು
ಅದ್ಯಾವುದೋ ಶೃಂಗರಿಸಿದ ಬೆಟ್ಟದ ತುದಿಯಲ್ಲೇ ಎಂಬ ಹಂಬಲವಿಲ್ಲ
ಮನೆಯ ತಾರಸಿಯಾದರೂ ಸಾಕು

ನೀ ತರುವ ಹೂ ಮುಡಿಯಬೇಕು
ಅದು ಮೈಸೂರು ಮಲ್ಲಿಗೆ ಆಗಬೇಕೆಂಬ ಆಸೆಯಿಲ್ಲ
ಹಿತ್ತಲಿನ ಬಿಳಿ ಜಾಜಿ ಮಲ್ಲಿಗೆ ಆದರೂ ಸರಿಯೇ

ನಾವಿಬ್ಬರೂ ಕೈ ಹಿಡಿದ ನಡೆಯಬೇಕು
ಅದ್ಯಾವುದೋ ಅರಮನೆಯ ಆವರಣವೇ ಆಗಬೇಕೆಂಬ ಆಸೆಯಿಲ್ಲ
ನಮ್ಮೂರ ಜಾತ್ರೆಯ ಕಿರಿದಾದ ಸಂಧಿಯಲ್ಲಾದರೂ ಸಾಕು.

ವೈಷ್ಣವಿ ಎಸ್ ಕೆ

ತೃತೀಯ ಬಿ ಎ, ವಿದ್ಯಾರ್ಥಿನಿ
ಕಟೀಲ್ ಆಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಡಿಜಿಟಲ್ ಸಂಪನ್ಮೂಲಗಳಿಂದ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳು -ಡಾ ಸಂತೋಷ್ ಕುಮಾರ್

ಶಿವಮೊಗ್ಗದ ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಗ್ರಂಥಾಲಯಕ್ಕೆ ‘ಮನೋಲೋಕ’ ಎಂಬ ಹೆಸರನ್ನು ಜನವರಿ ೩೦ ರಂದು ಅನಾವರಣಗೊಳಿಸಿದ ಕುವೆಂಪು ವಿಶ್ವವಿದ್ಯಾಲಯದ ಲೈಬ್ರರಿ ಸೈನ್ಸ್ ವಿಭಾಗದ ಪ್ರಾಧ್ಯಾಪಕರಾದ ಡಾ ಸಂತೋಷ್ ಕುಮಾರ್‌ರವರು ಮಾತನಾಡುತ್ತಾ ಗ್ರಂಥಾಲಯಗಳು ಬೆಳೆದು ಬಂದ ದಾರಿಯನ್ನು ವಿವರಿಸಿದರು. ಪುಸ್ತಕಗಳನ್ನು ಸರಪಳಿಗಳಿಂದ ಭದ್ರ ಪಡಿಸಿ ಕಳುವಾಗದಂತೆ ನೋಡಿಕೊಳ್ಳುತ್ತಿದ್ದ ಉಲ್ಲೇಖಗಳಿವೆ ಎಂದು ಹೇಳುತ್ತಾ ಮಾಹಿತಿ ಹಾಗೂ ಜ್ಞಾನದ ಮುದ್ರಣವು ಒಂದು ಕ್ರಾಂತಿಯನ್ನೇ ಈ ಜಗತ್ತಿನಲ್ಲಿ ಮಾಡಿದೆ ಎಂದು ಹೇಳಿದರು. ಇಂದು ಗ್ರಂಥಾಲಯಗಳು ಪುಸ್ತಕಗಳನ್ನಷ್ಟೇ ಹೊಂದಿಲ್ಲ. ಸಾಕಷ್ಟು ಡಿಜಿಟಲ್ ಸಂಪನ್ಮೂಲಗಳನ್ನು ಕೂಡಾ ಹೊಂದಿವೆ. ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಗ್ರಂಥಾಲಯದಲ್ಲಿ ಡಿಜಿಟಲ್ ಲೈಬ್ರರಿಯನ್ನು ಪ್ರಾರಂಭಿಸಿರುವುದು ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳನ್ನು ಒದಗಿಸಿಲಿದೆ. ಇಂದು ಡಿಜಿಟಲ್ ಮಾಧ್ಯಮದ ಮೂಲಕ ವಿದ್ಯಾರ್ಥಿಗಳು ಹಲವಾರು ಕೋರ್ಸ್ಗಳನ್ನು ಮಾಡಬಹುದು. ದೇಶದ ಪ್ರತಿಷ್ಠಿತ ಯುನಿವರ್ಸಿಟಿಗಳು ಅತ್ಯುತ್ತಮ ಕೋರ್ಸ್ಗಳನ್ನು ನಡೆಸುತ್ತಿವೆ. ಇಂದು SWAYAM ಮೂಲಕ ದೊರೆಯುವ ಕೋರ್ಸ್ಗಳಿಗೆ ದಾಖಲಾದಲ್ಲಿ ಆ ವಿಷಯದಲ್ಲಿ ವಿಡಿಯೋ ಪಾಠ, ಪಠ್ಯಗಳು ಹಾಗೂ ಆಡಿಯೋ ಪಾಠವನ್ನು ಒದಗಿಸುತ್ತವೆ. ತಾನು ಓದುತ್ತಿರುವ ಪದವಿಯೊಂದಿಗೆ ಇನ್ನು ಹಲವು ಸರ್ಟಿಫಿಕೇಟ್ ಕೋರ್ಸ್ಗಳನ್ನು ಮಾಡಬಲ್ಲ ಅವಕಾಶ ವಿದ್ಯಾರ್ಥಿಗಳಿಗಿದೆ. ಅದಲ್ಲದೆ ಶೋಧಗಂಗಾ, ಶೋಧಗಂಗೋತ್ರಿಯAತಹ ಹಲವು ಪೋರ್ಟಲ್‌ಗಳು ಹಲವಾರು ಸಂಶೋಧಣಾ ಲೇಖನಗಳನ್ನು, ಪ್ರಕಟಪಡಿಸುತ್ತವೆ. ಇವುಗಳೆಲ್ಲ ಸಂಶೋಧನಾ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗೆ ಒಂದು ಬಹಳ ಮುಖ್ಯವಾದ ಆಕರಗಳಾಗಿವೆ ಎಂದು ತಿಳಿಸಿದರು. ವಿದ್ಯಾರ್ಥಿಗಳು ಇಂದಿನ ಈ ಡಿಜಿಟಲ್ ಯುಗದಲ್ಲಿ ಡಿಜಿಟಲ್ ಮಾಧ್ಯಮದ ಬಳಕೆ ಬಗ್ಗೆ ತಿಳಿದುಕೊಳ್ಳುವುದರೊಂದಿಗೆ, ಏನು ಮಾಡಬಾರದು ಎಂದು ತಿಳಿದುಕೊಳ್ಳುವುದು ಮುಖ್ಯ. ಕೃತಿಚೌರ್ಯಕ್ಕೆ ಎಷ್ಟು ಅವಕಾಶಗಳಿವೆಯೋ, ಅಷ್ಟೇ, ಅದನ್ನು ಗುರುತಿಸಲು ಹಾಗೂ ಕೃತಿಚೌರ್ಯ ಮಾಡಿದವರನ್ನು ಕಂಡುಹಿಡಿದು ಬ್ಲಾಕ್‌ಲಿಸ್ಟ್ನಲ್ಲಿ ಹಾಕಲೂ ಕೂಡಾ ಸಂಬಂಧ ಪಟ್ಟವರಿಗೆ ಅಧಿಕಾರವಿದೆ ಎಂದು ಮರೆಯಬೇಡಿರಿ. ನಿಮ್ಮ ಬೆರಳ ತುದಿಯಲ್ಲೇ ಮಾಹಿತಿ ಲಭ್ಯವಾಗುವ ಈ ಸಂದರ್ಭದಲ್ಲಿ ನಿಖರವಾದ ಹಾಗೂ ಸತ್ಯವಾದ ಮಾಹಿತಿಯನ್ನಷ್ಟೇ ಉಪಯೋಗಿಸುವುದು ಮುಖ್ಯ. ಆದುದರಿಂದ ನೈತಿಕವಾಗಿ ಗುರುತಿಸಲ್ಪಟ್ಟ ಪೋರ್ಟಲ್‌ಗಳನ್ನಷ್ಟೇ ಬಳಕೆ ಮಾಡಿರಿ ಹಾಗೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಕರು ಸಂಶೋಧನಾ ಲೇಖನಗಳನ್ನು ಪ್ರಕಟಿಸುವಾಗ UGC ಯಿಂದ ಗುರುತಿಸಲ್ಪಟ್ಟ ಜರ್ನಲ್‌ಗಳಲ್ಲಷ್ಟೇ ಪ್ರಕಟಿಸಬೇಕು ಎಂದು ತಿಳಿಸಿದರು. ಮೊಬೈಲ್‌ಗೆ ದಾಸರಾಗುವ ಬದಲು, ಲೈಬ್ರರಿಯ ಮೂಲಕ ನಿಖರವಾದ ಹಾಗೂ ವೈಜ್ಞಾನಿಕ ಮಾಹಿತಿಯನ್ನು ಪಡೆಯಬೇಕು ಎಂದು ತಿಳಿಸಿದರು.

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿಗೆ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸಲು ಆಮೆರಿಕದಲ್ಲಿ ಉದ್ಯೋಗದಲ್ಲಿರುವ ಶ್ರೀ ಹೊಸಕೆರೆ ಶರತ್ ಕುಮಾರ್ ಹಾಗೂ ಶ್ರೀ ಹೊಸಕೆರೆ ಸುಮಂತ್ ಎಂಬ ಇಬ್ಬರು ಸಹೋದರರು, ತಮ್ಮ ತಂದೆಯಾದ ಶ್ರೀ ಹೊಸಕೆರೆ ರಾಮಸ್ವಾಮಿಯವರ ಹೆಸರಿನಲ್ಲಿ ದೇಣಿಗೆಯನ್ನು ಉದಾತ್ತವಾಗಿ ನೀಡಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ಕೆ ತಿಳಿಸಿದರು. ಕಾಲೇಜಿನ ಗ್ರಂಥಾಲಯಕ್ಕೆ ಮನೋಲೋಕ ಎಂದು ಹೆಸರಿಸಿದ್ದು ಅದು ದಿ|| ಡಾ ಅಶೋಕ್ ಪೈರವರು ಬರೆದ ಒಂದು ಪುಸ್ತಕದ ಶೀರ್ಷಿಕೆಯಾಗಿದೆ. ಅದೇ ರೀತಿ, ನೂತನವಾಗಿ ನಿರ್ಮಿಸಿದ ಡಿಜಿಟಲ್ ಲೈಬ್ರರಿಗೆ ‘ಹೊಸಕೆರೆ ರಾಮಸ್ವಾಮಿ ಮೆಮೋರಿಯಲ್ ಡಿಜಿಟಲ್ ಲೈಬ್ರರಿ’ ಎಂದು ಹೆಸರಿಡಲಾಗಿದೆ ಎಂದು ಗ್ರಂಥಪಾಲಕ ಶ್ರೀ ಗಣೇಶ್ ಹೆಚ್‌ರವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು. ಹೊಸಕೆರೆ ರಾಮಸ್ವಾಮಿ ಮೆಮೋರಿಯಲ್ ಡಿಜಿಟಲ್ ಲೈಬ್ರರಿಯನ್ನು ಶ್ರೀಮತಿ ಮೀನಾಕ್ಷಿ ರಾಮಸ್ವಾಮಿಯವರು ಉದ್ಘಾಟಿಸಿದರು. ಹೊಸಕೆರೆ ರಾಮಸ್ವಾಮಿಯವರು ಶಿವಮೊಗ್ಗದ ಅರಣ್ಯ ಇಲಾಖೆಯಲ್ಲಿ ಅತ್ಯಂತ ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮನ್ನಣೆಗೆ ಪಾತ್ರರಾಗಿದ್ದರು. ಅವರು ಕುಟುಂಬ ಹಾಗೂ ಉದ್ಯೋಗ ಎರಡರಲ್ಲೂ ಸತ್ಯ, ನಿಷ್ಠೆ, ಪ್ರೀತಿ ಹಾಗೂ ಸಹನೆಯಂತಹ ಮೌಲ್ಯಗಳನ್ನು ಅಳವಡಿಸಿ ಒಬ್ಬ ಮಾದರಿ ವ್ಯಕ್ತಿಯಾಗಿದ್ದರು. ಅವರ ಹೆಸರಿನಲ್ಲಿ ಅವರ ಮಕ್ಕಳು ಒಂದು ಉತ್ತಮ ಶಿಕ್ಷಣ ಸಂಸ್ಥೆಗೆ ದೇಣಿಗೆಯನ್ನು ನೀಡಿ, ಹಲವಾರು ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳವರೆಗೆ ಅನುಕೂಲವಾಗಬಲ್ಲ ಡಿಜಿಟಲ್ ಲೈಬ್ರರಿಯನ್ನು ಸ್ಥಾಪಿಸಿರುವುದು ಅಭಿನಂದನೀಯ ಎಂದು ಡಾ ಹೆಚ್ ಎಸ್ ನಾಗಭೂಷಣ್ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹೊಸಕೆರೆ ಕುಟುಂಬದವರು, ಕಾಲೇಜನ್ನು ಪ್ರಾರಂಭಿಸಿ ಉತ್ತಮ ಶಿಕ್ಷಣವನ್ನು ನೀಡುತ್ತಿರುವ ಮಾನಸ ಟ್ರಸ್ಟ್ನ ನಿರ್ದೇಶಕರಾದ ಡಾ ರಜನಿ ಎ ಪೈರವರನ್ನು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಡಾ ರಜನಿ ಎ ಪೈ, ಡಾ ರಾಜೇಂದ್ರ ಚೆನ್ನಿ, ಆಡಳಿತಾಧಿಕಾರಿಗಳಾದ ಪ್ರೋ. ರಾಮಚಂದ್ರ ಬಾಳಿಗಾ, ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ ಅರ್ಚನಾ ಭಟ್, ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ಕೆ, ಗ್ರಂಥಪಾಲಕರಾದ ಶ್ರೀ ಗಣೇಶ್ ಎಚ್, ಶ್ರೀ ಯೋಗರಾಜ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಕು. ಪ್ರತಿಭಾ ಕಾರ್ಯಕ್ರಮ ನಿರೂಪಿಸಿದರು. ಗ್ರಂಥಪಾಲಕ ಗಣೇಶ್ ಹೆಚ್ ಸ್ವಾಗತಿಸಿ, ಡಾ ಅರ್ಚನಾ ಭಟ್ ವಂದಿಸಿದರು. ಎಂ. ಎಸ್ಸಿ ವಿದ್ಯಾರ್ಥಿನಿಯರಾದ ಸುಜನ್ಯಾ ಮತ್ತು ತಂಡ ಪ್ರಾರ್ಥಿಸಿದರು. ಕು. ಅಂಕಿತಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು.

ಶೈಕ್ಷಣಿಕ ಪ್ರವಾಸದ ನೆನಪುಗಳು

ನೈಜ ಪ್ರಕೃತಿಯ ಪಾಠಗಳನ್ನು ಕಲಿಯಲು ಶೈಕ್ಷಣಿಕ ಪ್ರವಾಸವು ಒಂದು ಸದಾವಕಾಶ. ಇಂತಹ ಒಂದು ಅವಕಾಶ ಒದಗಿಸಿಕೊಟ್ಟದ್ದು ನಮ್ಮ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು.

ಅಂತಿಮ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿಗಳಾದ ನಾವು ಗೋಕರ್ಣ-ಕಾರವಾರದ ಈ ಪ್ರವಾಸದಲ್ಲಿ ಭಾಗಿಯಾದೆವು. ಇಲ್ಲಿ ನಾವು ಆಹಾರ ತಯಾರಿಕಾ ಕಾರ್ಖಾನೆ ಹಾಗೂ ಸೆಂಟ್ರಲ್ ಮರೈನ್ ಫೀಶರೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (CMFRI) ಗೆ ಭೇಟಿ ನೀಡಿದೆವು. ಈ ಪ್ರವಾಸವು ಪ್ರಾಣಿಶಾಸ್ತ್ರ ಹಾಗೂ ರಾಸಾಯನಿಕಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಾದ ನಮಗೆ ಬಹು ಉಪಕಾರಿಯಾಗಿದ್ದು ಸುಳ್ಳಲ್ಲ. ಹಾಗೆಯೇ ಪ್ರಾಯೋಗಿಕ ಅನುಭವ ಪಡೆಯುವಲ್ಲಿ ಸಹಕಾರಿಯಾಗಿತ್ತು.

ನಮ್ಮ ಪ್ರವಾಸವು ನವೆಂಬರ್ ತಿಂಗಳಿನ 18ನೇಯ ತಾರೀಖಿನಂದು ಬೆಳಗಿನ ಜಾವ ಪ್ರಾರಂಭವಾಯಿತು. ಶಿವಮೊಗ್ಗದಿಂದ 6.30ಕ್ಕೆ ಉತ್ಸಾಹದಿಂದ ಹೊರಟೆವು. 10.30ರ ಸುಮಾರಿಗೆ ಬಂದಿತು ನಮ್ಮ ಮೊದಲ ನಿಲ್ದಾಣ- ಭೀಮೇಶ್ವರ ದೇವಸ್ಥಾನ. ಅಲ್ಲಿಯ ಆಧ್ಯಾತ್ಮಿಕತೆ ಮತ್ತು ಪ್ರಕೃತಿಯ ಸೌಂದರ್ಯ ಕಣ್ಮನ ಸೆಳೆಯುವಂತಿತ್ತು. ಶಾಂತಿಯುತ ವಾತಾವರಣದಲ್ಲಿ ನೆನೆದ ನಂತರ ನಾವು ಕುಮಟಾ ಕಡೆಗೆ ಪ್ರಯಾಣ ಬೆಳೆಸಿದೆವು. ಅಲ್ಲಿಗೆ ಮಧ್ಯಾಹ್ನ 1.00ರ ಹಾಗೆ ತಲುಪಿದ ನಾವು ಭೇಟಿ ನೀಡಿದ್ದು ಅಲ್ಲಿಯ ವಾತ್-ಜಾತ್ ಫಾರ್ಮಾ ಫುಡ್ಸ್ ಕಾರ್ಖಾನೆಗೆ (Vatjat Pharma Foods). ಅಲ್ಲಿ ರಾಸಾಯನಿಕ IP (Ingress Protection Grade) ದರ್ಜೆಯ ಉತ್ಪನ್ನ, ಆಹಾರ ಉತ್ಪನ್ನಗಳ ತಯಾರಿಕೆಯ ಬಗ್ಗೆ ಅರಿತುಕೊಂಡೆವು.

ಸಂಜೆ 4.00ರ ಹೊತ್ತಿಗೆ ನಾವು ಗೋಕರ್ಣ ತಲುಪಿದೆವು. ಅಲ್ಲಿ ಕರಾವಳಿಯ ಕಲರವವು ನಮ್ಮನ್ನು ಸ್ವಾಗತಿಸಿತ್ತು. ಹತ್ತಿರದಲ್ಲಿಯೇ ಇದ್ದ ಹೋಂ ಸ್ಟೇಯಲ್ಲಿ ನಮಗಾಗಿ ಕಾಯ್ದಿರಿಸಿದ್ದ ಕೋಣೆಗಳಿಗೆ ತೆರಳಿ ಸ್ವಲ್ಪ ಹೊತ್ತು ವಿಶ್ರಮಿಸಿ ಎದುರಿನಲ್ಲಿಯೇ ಇದ್ದ ಬೀಚ್ ಗೆ ವಾಯುವಿಹಾರಕ್ಕಾಗಿ ಹೊರಟೆವು. ಹಾಗೆಯೇ ನಮ್ಮ ಪ್ರಾಣಿಶಾಸ್ತ್ರ ವಿಭಾಗಕ್ಕೆ ಬೇಕಾಗುವ, ಅಲ್ಲಿ ಸಿಗುವ ಹಾಗೂ ನಾವು ಸಂಗ್ರಹಿಸಬಹುದಾದ ಮಾದರಿ(Specimen) ಗಳನ್ನು ಸಂಗ್ರಹಿಸಿ, ಸ್ನೇಹಿತರೊಡನೆ ಸಮುದ್ರದ ಅಲೆಗಳ ಇಂಪಾದ ದನಿಯನ್ನು ಸವಿಯುತ್ತಾ ಕಾಲ ಕಳೆದೆವು. ಸಂಜೆಯ ವೇಳೆಗೆ ಮಹಾಬಲೇಶ್ವರ ಸ್ವಾಮಿಯ ದರ್ಶನ ಪಡೆದು ಅಲ್ಲಿಯೇ ಪ್ರಸಾದ ಸ್ವೀಕರಿಸಿ ನಮ್ಮ ಕೋಣೆಗಳಿಗೆ ಮರಳಿ ವಿಶ್ರಾಂತಿ ಪಡೆದೆವು.

ಮರುದಿನ, ಗೋಕರ್ಣದಿಂದ ಕಾರವಾರದ ಕಡೆಗೆ ಬೆಳಗ್ಗೆ 8.00ಕ್ಕೆ ಹೊರಟು ಅಂದಿನ ನಮ್ಮ ಮೊದಲ ನಿಲ್ದಾಣವಾದ CMFRI (Central Marine Fisheries Research Institute) ತಲುಪಿದೆವು. ಇಲ್ಲಿ ನಮಗೆ ಸಮುದ್ರ ಜಗತ್ತಿನ ಅಚ್ಚರಿಯ ಪರಿಚಯವಾಯಿತು. ಇಲ್ಲಿ ನಾವು ಬ್ರೂಡರ್(Brooder) ಗಳನ್ನು ನೋಡಿ, ಅದರ ಗುಣಲಕ್ಷಣಗಳ ಬಗ್ಗೆ ಅರಿತೆವು.

ಮಧ್ಯಾಹ್ನ 2.15ರ ಹಾಗೆ ಕಾರವಾರದ ಮೀನು ಮಾರುಕಟ್ಟೆಗೆ ಹೋಗಿ, ನಮ್ಮ ಪ್ರಯೋಗಾಲಯಕ್ಕೆ ಬೇಕಾದ ಮಾದರಿಗಳನ್ನು ಖರೀದಿ ಮಾಡಿದೆವು. ನಂತರ 3.30ರ ಹಾಗೆ ರವೀಂದ್ರನಾಥ್ ಟಾಗೋರ್ ಬೀಚ್ ಗೆ ಹೋಗಿ ಅಲ್ಲಿ ಸೀಗಡಿ(Shrimp), ಏಡಿ ಹಾಗೂ ಇತರ ಮಾದರಿಗಳನ್ನು ಸಂಗ್ರಹಿಸಿದೆವು.

ಸಂಜೆ 5.30ಕ್ಕೆ ಹೊನ್ನಾವರದೆಡೆಗೆ ಹೊರಟು ಅಲ್ಲಿ ಬೋಟಿಂಗ್ ನ ಅನುಭವ ಪಡೆದೆವು. ಜೊತೆಗೆ ವಿಶೇಷ ಸಸ್ಯ ಬೇರುಗಳಾದ  ನ್ಯೂಮಾಟೋಫೋರ್ಗಳನ್ನು (pneumatophores) ನೋಡಿದೆವು. ಈ ಬೇರುಗಳು ಸಸ್ಯಗಳಿಗೆ ನೀರಿನಲ್ಲಿ ಉಸಿರಾಡಲು ಸಹಾಯ ಮಾಡುತ್ತವೆ ಎಂದು ತಿಳಿದೆವು. ನಂತರ ಅಲ್ಲಿಂದ ಸಂಜೆ 7.30ಕ್ಕೆ ಶಿವಮೊಗ್ಗದ ಕಡೆಗೆ ಮನದ ತುಂಬಾ ನೆನಪುಗಳ ಜೊತೆಗೆ ಶೈಕ್ಷಣಿಕ ಪ್ರವಾಸದ ಪ್ರಾಮುಖ್ಯತೆಯನ್ನು ಅರಿತು ನಮ್ಮ ಪ್ರಯಾಣವನ್ನು ಬೆಳೆಸಿದೆವು.

ಈ ಎರಡು ದಿನದ ಪ್ರವಾಸವು ಶಿಕ್ಷಣ, ಆಧ್ಯಾತ್ಮಿಕತೆ, ಸಂಸ್ಕೃತಿಯ ಪರಿಪೂರ್ಣ ಮಿಶ್ರಣವಾಗಿದ್ದು- ಎಂದೆಂದಿಗೂ ಮನದಲ್ಲಿ ಉಳಿಯುವ ಅನುಭವವಾಗಿದೆ. ಅಲ್ಲದೆ ಪುಸ್ತಕದಲ್ಲಿ ಓದಿದ ವಿಷಯಗಳನ್ನು ನೈಜ ಜಗತ್ತಿನಲ್ಲಿ ನೋಡುವ, ಅನುಭವಿಸುವ ಅವಕಾಶ ನಮ್ಮದಾಗಿಸಿಕೊಂಡೆವು. ನಾನು-ನೀನು ಎಂಬ ಅಂತಾರವಿಲ್ಲದೆ ಎಲ್ಲರೊಂದಿಗೆ ಬೆರೆತು ಕಳೆದ ಈ ಎರಡು ದಿನ ಅವಿಸ್ಮರಣೀಯ.

ಶ್ರೇಯಾ. ಪಿ

ಅಂತಿಮ ಬಿ. ಎಸ್ಸಿ. ವಿದ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

NATURE BY THE VIEW

Image Credit: Google.com

NATURE BY THE VIEW,

Nature is both question and answer.

It is teacher and child, touches to sight of eye and its mystery. It has many unknown things in itself, but man always tries to reveal them. It’s beauty is always enjoyable. Every creature on Earth needs nature to live.

Nature has given life as a gift of colourful and joyfulness for many living organisms. A very precious organism in coverage of nature is human being, by biological word is ‘HOMOSEPIENS’. For human being’s nature gifted many self –requirement action through which they take use of it for their livelihood.

Nature keeps changes for itself for the weather of itself.

Nature is wholestic word for anything the writer is going to write.

From the nature, the throw of birth of life for human being is a gift as we learn from itself, growth by itself and the eyes closed to something.

Nature’s nature is unknown. Nobody knows when it was born exactly. Its sight gives pleasure to eyes. Everyone needs it it – living or non-living depend on it.

 

“Nature is limited or unlimited nobody knows, but humans are more curious to know about it”

 Pritam B. Patil

III BSW Student

Kateel Ashok Pai Memorial College, Shivamogga

ಅಂತರಪಟದಾಚೆ ವಿಧಿ ತಂದ ವರ ನೀನು!

Image Credit: KAPMC Library

ಆಕೆ ಕೂಡು ಕುಟುಂಬದಲ್ಲಿ 3ನೇಯವಳಾಗಿ ಜನಿಸಿದವಳು. ಅಲ್ಲಿ ಕೂಡ ಬಡತನವೇ ಸೈ!, ಅದು ಹೆಣ್ಣು “ಭಾರ” ಎನ್ನುವಂತ ಕಾಲ. ಒಂದೇ ಜೊತೆ ಬಟ್ಟೆಯನ್ನು ಒಬ್ಬರಿಂದೊಬ್ಬರಿಗೆ ಬದಲಾಯಿಸಿ ಮತ್ತೊಮ್ಮೆ ಧರಿಸುವಂತ ಸಂದರ್ಭ,ಆದರೂ ಹೆಸರಿಗೆ ದೊಡ್ದ ಮನೆತನವದು. ಆ ಕುಟುಂಬದಲ್ಲಿ ನಾಲ್ವರು ಗಂಡು ಹಾಗೂ ಐವರು ಹೆಣ್ಣು ಮಕ್ಕಳು. ಒಂದು ಬಡ ಕುಟುಂಬದಲ್ಲಿ ಅವರ ಜೀವನ ಗುರಿಯೇ ಹೆಣ್ಣು ಮಕ್ಕಳ ಮದುವೆ ಮಾಡಿ ಕೈ ತೊಳೆದುಕೊಳ್ಳುವುದು, ಮನೆ ನಡಿಸುವುದು ಎಷ್ಟೇ ಕಷ್ಟವಾಗಿಯೇ ಇದ್ದರೂ ಮದುವೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕಳುಹಿಸಿದರೆ ಸಾಕು ಎಂಬಂತ ಕಾಲ ,ಹಾಗೋ ಹೀಗೋ ಆಕೆಗೆ ಮದುವೆಯನ್ನಮಾಡಿದರು.

ಕಾಲಿಟ್ಟ ಮನೆಯಲ್ಲಿ ಕೂಡಾ ಅಷ್ಟೇ ತುಂಬು ಕುಟುಂಬ, ಬಡತನದ ಛಾಪು ಹೇರಳವಾಗೇ ಇತ್ತು!.ಹೇಗೊ ಇನ್ನು “ಅಂತರಪಟದಾಚೆ ನಿಂತ ನಲ್ಲನೇ ಜೀವನದ ಅರ್ಥ”, ಆತ ಕಪ್ಪಾಗಿರಲಿ, ಕಳ್ಳನಾಗಿರಲಿ,ಕುಬ್ಜನೇ ಆಗಿರಲಿ, ಮೃಗವೇ ಆಗಿರಲಿ ಆತನೇ ತನ್ನ ತನು ಮನದ ಅರ್ಧಾಂಗ ಎನ್ನುವುದನ್ನ ದೃಢವಾಗಿ ನಂಬಿದ್ದಳಾಕೆ. ಪ್ರತೀ ಹೆಣ್ಣಿಗೂ ಗಂಡನೊಂದಿಗೆ ಬೆಸೆದ ಬಾಂಧವ್ಯ ಎಷ್ಟೊಂದು ಅವಿನಾಭಾವವೆಂದರೆ!, ಆತನಾದರೂ ಆಕೆ ಸತ್ತರೆ ಇನ್ನೊಬ್ಬಳನ್ನ ಆರಾಮಾಗಿ ವರಿಸಬಲ್ಲ ಆದರೆ ಆಕೆಗೆ ಅದು ಸೂಜಿಗಳನ್ನು ನುಂಗುವಷ್ಟು ಕಷ್ಟ. ಈ ಕೂಡು ಕುಟುಂಬದಲ್ಲಿ ಹೊಂದಿಕೊಳ್ಳಲು ಆಕೆಗೆ ಅಂತೇನೂ ಕಷ್ಟವಾಗಲಿಲ್ಲ , ಆಕೆ ನೀಳವಾದ ಕೂದಲುಳ್ಳವಳು, ಸಲ್ಪ ಉಬ್ಬು ಹಲ್ಲು ಬಾಸಿಂಗದ ಸುಳಿ ಹೊತ್ತವಳು, ಅಂದದ ರಂಗೋಲಿ ಎಳೆವವಳು,ರೂಪಸಿ ಅಲ್ಲದಿದ್ದರೂ , ಚೆಂದವೇ ಇದ್ದವಳು,!..

ಈಗಿನಂಗೆ ಯಾವ ಫೋನೂ ಆಗ ಲಭ್ಯವಿರಲಿಲ್ಲ ಹಾಗಾಗಿ ಸಂಬಂಧಗಳ ಸಂತಸ ಅನು ದಿನ ಹೊಸತರಂತೆ ಇರುತ್ತಿತ್ತು!, ಅವಳು ಎಲ್ಲಾ ಕೆಲಸಗಳನ್ನೂ ಸಲೀಸಾಗಿ ಮಾಡುತ್ತಿದ್ದವಳು ಆದರೆ ಸಲ್ಪ ಕೋಪಿಷ್ಟೆ ಆದರೂ ಅಂತೇನೂ ತೊಂದರೆ ಇಲ್ಲ!.ಆಕೆಯ ದಿನಚರಿ ಪುಸ್ತಕ ಅವಳ ಗಂಡನೇ ಆಗಿರುತ್ತಿದ್ದ!. ಅದು ಎಷ್ಟು ಮುಗ್ಧ ಪ್ರೀತಿಯೆಂದರೆ ಆಕೆಯ ಎಲ್ಲಾ ಮಾತುಗಳಿಗೂ ಅವನು ಹೂ ಗೊಡುತ್ತಿದ್ದ, ನಳ ದಮಯಂತಿಯರಂತೆ ಅನ್ಯೋನ್ಯತೆ. ಅವನೂ ಕೂಡಾ ಅತೀ ಮುಗ್ಧ ಪ್ರೌಢ ದೇಹದಲ್ಲಿ ಮಗುವಿನ ಆತ್ಮ ಅಡಿಗಿದಂತೆ. ಗಂಡನಲ್ಲಿ ಎಂದೂ ಹಠ ಮಾಡಿದವಳಲ್ಲ. ಅದೋ ಕೂಡು ಕುಟುಂಬ ಬೇರೆ ಹಾಗಾಗಿ ಕೆಲಸಗಳು ಹಂಚಿಕೆಯಾಗಿರುತ್ತಿದ್ದವು!, ಮಾಡಲೇ ಬೇಕಾದ ಅನಿವಾರ್ಯತೆ ಇರುತ್ತಿತ್ತು. ಲಗ್ನವಾಗಿ ಒಂದು ವರ್ಷವಾಗುವಾಗಲೇ ಆ ದಂಪತಿಗಳಿಗೆ ಗಂಡು ಮಗುವನ್ನ ಮಡಿಲಿಗೆ ನೀಡಿದ ಪರಮಾತ್ಮ!..ಈ ಸಂತಸದ ಬೆನ್ನಲ್ಲೇ ಮತ್ತೊಂದು ಊಡುಗೊರೆಯಂತೆ ಹೆಣ್ಣು ಮಗುವೂ ಜನಿಸಿತು.

ಕಾಲ ನಡೆಯುತ್ತಿತ್ತು ಹೀಗೆ ಒಮ್ಮೆ ಒಂದು ದಿನ ಆಕೆ ಮಗುವಿಗೆ ಹಾಲುಣಿಸುತ್ತಾ ಇದ್ದಂತೆ ಜೋರು ಜೋರು ದನಿಯಲ್ಲಿನ ಮಾತುಕತೆ ಆಕೆಯ ಕಿವಿಗೆ ಬಿತ್ತು, ಏನೋ ಆಯಿತೆಂಬ ತರಾ ತುರಿಯಲ್ಲಿ ಮಗುವ ಮಲಗಿಸಿದ ಆಕೆ ಹಾಗೇ ಅಲ್ಲಿಗೆ ಹೋದಳು. ಸಲ್ಪ ದೂರದಲಿ ಬಾಗಿಲ ಬಳಿ ನಿಂತು ನೋಡುತ್ತಿದ್ದಳು, ಮಾತಿನ ಚಕಮಕಿಯಲ್ಲಿದ್ದ ಇಬ್ಬರಲ್ಲೊಬ್ಬರು ಬಾಗಿಲನ್ನ ತಿಳಿಯದೇ ತಳ್ಳಿದಾಗ ಮರುಕ್ಷಣ ಬಾಗಿಲು ಆಕೆಯ ಸ್ತನದ ಮೇಲೆ ರಬಸದಿ ಬಂದು ಬಡಿಯಿತು!, ಒಮ್ಮೆಲೇ ಜಲ್ಮ ಹೋದಂತಾಗಿ ಮನದಲ್ಲೇ ಅರಚಿದಳು.. ಮಾರನೇ ದಿನ ಸರಿಯಾದೀತೆಂದು ಸುಮ್ಮನಾಗಿಬಿಟ್ಟಳು, ಆದರೆ ಆಗಲೇ ಅದೇ ಭಾಗದಲ್ಲಿ ಹೆಪ್ಪುಗಟ್ಟಿದ ರಕ್ತ ತನ್ನ ಕೆಲಸ ಮಾಡಾಲಾರಂಭಿಸಿತ್ತು!.

ಹೀಗೆ ಆ ನೋವು ಆಕೆಯನ್ನು ಸೀಳುತ್ತಿತ್ತು, ಹೇಳಿಕೊಳ್ಳಲೂ ಆಗದೆ ಏನಾಗುತ್ತಿದೆ ಎಂದು ತಿಳಿಯದೇ ಆಕೆ ತನ್ನ ಓರಗಿತ್ತಿಯ ಬಳಿ ಒಮ್ಮೆ ಹೇಳಿಕೊಂಡಳು,”ಅಕ್ಕಮ್ಮ!, ಎದೆ ತುಂಬಾ ನೋವು ಒಮ್ಮೊಮ್ಮೆ, ಮಗುವಿಗೆ ಹಾಲನುಣಿಸಲೂ ಕಷ್ಟವಾದಂತೆ!”.. ಆದರೆ ಏನೂ ಅರಿಯದ ಅಕ್ಕ ಇಲ್ಲ ಈ ಸಮಯದಲ್ಲಿ ಹಾಗಾಗುತ್ತೆ ಬಾಣಂತಿ ಇದ್ದಾಗ ಇದೆಲ್ಲ ಸರ್ವೇ ಸಾಮಾನ್ಯ ಎಂದಳು. ಆಗಲೂ ಆಕೆ ಹೌದೇನೋ ಎಂದು ಸುಮ್ಮನಾದಳು ದಿನೇ ದಿನೇ ವಿಪರೀತವಾದಂತೆ, ಸ್ತನದಿಂದ ಮೊಸರಿನ ಅಂಶ ಹೊರಬರುವುದನ್ನ ಗಮನಿಸಿದಾಕೆ ಭಯಗೊಂಡು ಗಂಡನಲ್ಲಿ ಹೇಳಿಕೊಂಡಳು. ಮಾರನೇ ದಿನ ಆಸ್ಪತ್ರೆಗೆ ಹೋದಾಗಲೇ ಅವರಿಗೆ ತಿಳಿದದ್ದು “ಅರ್ಭುದವೀಗ ವ್ಯಾಘ್ರವಾಗಿದೆ ಎಂದು”..

ಅಂದರೆ ಸ್ತನದ ಕ್ಯಾನ್ಸರ್ ಈಗಾಗಲೇ ಆಕೆಯನ್ನ ಅರ್ಧ ತಿಂದಿತ್ತು. “ಕ್ಯಾನ್ಸರ್ ಬಂದವ ಸತ್ತ” ಎಂಬ ಮಾತಿದ್ದ ಕಾಲವದು, ವಿಷಯಾರಗಿಸಿಕೊಳ್ಳುವ ಮೊದಲೇ ಆಕೆಯ ಕೈಯಲ್ಲಿ ಎರಡು ಮಕ್ಕಳೂ ಒಬ್ಬ ಮುಗ್ಧ ಪತಿಯೂ ಇದ್ದ!.. ಹರಡುತ್ತಲೇ ಹೋದ ಕ್ಯಾನ್ಸರ್ ಮೊದಲು ಕೈ ಹಾಕಿದ್ದೆ ಆಕೆಯ ಕೇಶಕ್ಕೆ!.. ಬಡತನ ಬೇರೆ ಇನ್ನೊಂದೆಡೆ, ಮಕ್ಕಳಿಬ್ಬರೂ ಯಾರದ್ದೋ ಕೈ ಮೇಲೆ!,. ಕುಡಿದ ನೀರೂ ಕಂಬನಿಯಾಗುತ್ತಿರುವ ಸಂದರ್ಭ. ಅದರಲ್ಲೂ ವೈದ್ಯ ನಮ್ಮಿಂದಾಗದು ಇನ್ನು ನಿಮಗೆ ಮಣಿಪಾಲೆ ಸರಿ ಎಂದರು!, ಜನರು ಒಂದೆಡೆ ಅವಳೆದುರಲ್ಲೇ “ಮಣಿಪಾಲಿಗೆ ಹೋದವ ಮಣ್ಣುಪಾಲೇ” ಎಂದು ಮಾತುಗಳಲ್ಲೇ ಆಕೆಯನ್ನ ಕಿತ್ತು ತಿನ್ನುತ್ತಿದ್ದಾರೆ.. ಖಾಯಿಲೆಗಿಂತಲೂ ಆಕೆಯನ್ನ ಚಿಂತೆಯೇ ಚಿತೆಗೇರಿಸುತ್ತಿದೆ!

ತವರಿನವರು ಬಂದು ನೋಡುವಾಗ ಆಕೆ ಕೃಶವಾಗಿದ್ದಳು, ಕೆನ್ನೆ ಮೂಳೆಗಂಟಿ ಕಣ್ಣುಗಳ ಸುತ್ತಲೂ ಕಾರ್ಮೋಡ ಕವಿದಿತ್ತು!.. ಮಣಿಪಾಲ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾರಂಭಿಸಿದರು, ಏನಾದರೂ ಚೇತರಿಕೆಯ ಮಾತೇ ಇಲ್ಲ! ಆಕೆಯ ತೋಳುಗಳು ಮಕ್ಕಳನ್ನೇ ಬಯಸಿದರೂ ಆಕೆಯ ಖಾಯಿಲೆ ಆಗಲೇ ಅವರಿಂದ ದೂರವಾಗಿಸಿತ್ತು. ಪತಿಯೂ ಪ್ರತೀ ಕ್ಷಣವೂ ತನ್ನಿಂದಾದಷ್ಟು ಸಮಯವನ್ನು ಅವಳೊಡನೇ ಕಳೆಯುತ್ತಿದ್ದ,ಆಗಲೇ ಮೂರು ಸಂವತ್ಸರಗಳು  ಸುಳಿವಿಲ್ಲದೇ ಕಳೆದರೂ ಆತನ ಎದೆಯಲ್ಲಿದ್ದ ಹೊಳಪು ಕಳೆಗುಂದಲೇ ಇಲ್ಲ. ನನ್ನಾಕೆ ಮತ್ತೊಮ್ಮೆ ನಗುತ್ತಾಳೆ ಎಲ್ಲವೂ ಮೊದಲಿನಂತೆ ಆದೀತೆಂಬ ಹಂಬಲ ಅವನಲ್ಲಿ, ಆತ ಮಾಡಿದ್ದ ಹರಕೆಗಳೆಷ್ಟೋ!, ಕೈ ಮುಗಿದ ಕಲ್ಹೃದಯದ ದೇವರುಗಳೆಷ್ಟೋ..

ಇನ್ನಾಕೆಯ ಜೀವ ದೇವರದ್ದು ಎಂದು ವೈದ್ಯರೂ ಕೈಚೆಲ್ಲಿ ಕುಳಿತಾಗ, ಮತ್ತೆ ಮರಳಿ ಆಕೆಯನ್ನು ತವರಿಗೆ ವೊಯ್ಯುವಂತೆ ಮಾತಾಯಿತು. ಇಲ್ಲಿ ಗಂಡನ ಮನೆಯಲ್ಲಿ ಕೂಡು ಕುಟುಂಬ ಬೇರೆಯಾಗಲೇ ಬೇಕೆಂಬ ವಿವಾದದ ಕಳ್ಳಿಗಿಡ ಬೇರೂರಿತ್ತು, ಆಕೆಯ ತವರಿನವರು ಬಂದು ಅಂಗಲಾಚಿದರು ಇನ್ನು ಕೇವಲ 6 ತಿಂಗಳಷ್ಟೇ ಆಕೆ ಹೊರಡುತ್ತಾಳೆ ದಯವಿಟ್ಟು ಇಂತಾ ಸಮಯದಲ್ಲಿ ಬೇರೆಯಾಗುವ  ಮಾತುಬೇಡವೆಂದು. ಕಿವುಡರಂತೆ ಮಾನವೀಯತೆ ಕಳೆದುಕೊಂಡ ಮೃಗರು ಕೇಳಬೇಕಲ್ಲ!?..

ಇನ್ನೊಂದೆಡೆ ತವರಲ್ಲಿ ಗಂಡನನ್ನು ಮಕ್ಕಳನ್ನೂ ತೊರೆದು ದಿನವೂ ಸಾಯುತ್ತಿದ್ದಳು ಆಕೆ!, ಆತನೋ ಅಸಹಾಯಕ ಸ್ಥಿತಿಯಲ್ಲಿ ಇದ್ದವ ಅರ್ಧ ದೇಹವೇ ಕೊಳೆಯುತ್ತಿದೆ ಎಂಬ ತೀವ್ರ ನೋವು ಎದೆಯಲ್ಲಿ!, ಇನ್ನೊಂದೆಡೆ “ನೀನೇ ಸರಿ ಇಲ್ಲ” ಎಂದು ಸುತ್ತಿಗೆ ಏಟಿನಂತ ಮಾತುಗಳು ಬೇರೆ!. ಅನ್ಯಾಯದ ವಿರುದ್ಧ ಮಾತನಾಡಲೂ ಬಾರದಂತ ಮುಗ್ಧ ಅವನು, ಒಂದೇ ದೇಹವಾಗಿದ್ದ ಮಡದಿಯ ಮೊಗವ ನೋಡಲೂ ಅವಕಾಶವಿಲ್ಲ!,ಅಲ್ಲಿ ಹೋದರೆ ಅವರು ಇಲ್ಲಿ ಬಂದರೆ ಇವರು ನಿಂದಿಸುತ್ತಲೇ ಇದ್ದಾರೆ. ಆತನೀಗ ತನ್ನ ಯೋಚನೆಗಳನ್ನು ತಾನೇ ನೋಡಲಾಗದಂತಾಗಿದ್ದಾನೆ ಆತ ತಿರುಗಿ ಏನನ್ನೂ ಹೇಳದೇ ಸುಮ್ಮನೇ ಕೂತು ಬಿಡುತ್ತಿದ್ದ..

ಹೆಂಡತಿಯ ಮೊಗ ನೋಡಲು ಬೆಳಿಗ್ಗೆ ಹೊತ್ತು ಮೂಡುವ ಮೊದಲೇ ಎದ್ದು ಎಲ್ಲ ಕೆಲಸಗಳ ಪೂರೈಸಿ ಆ ನಲ್ವತ್ತು ಮೈಲಿ ನಡೆದು ಉಸಿರುತ್ತಾ ಅವರ ಮನೆ ಬಂದಮೇಲೆ ಆತ ನಿಲ್ಲುತ್ತಿದ್ದ. ಜಗುಲಿಯ ಮೇಲೆ ಕುಳಿತಾಗ ಅವನ ಕಂಗಳು ಆಕೆಯನ್ನೇ ಹುಡುಕುತ್ತಾ ಇರುತ್ತಿದ್ದಾಗ!, ಪೂರ್ತಿ ಸೊರಗಿ ಶಕ್ತಿ ಕಳೆದುಕೊಂಡ ಆಕೆ ಅವನ ದನಿಯ ಕೇಳಿ, ಚೈತನ್ಯ ತುಂಬಿಸಿಕೊಂಡು,ಕಣ್ದುಂಬಿಕೊಂಡು ತೆವಳುತ್ತಾ ತೆವಳುತ್ತಾ ಬಂದು ಆ ಬಾಗಿಲ ಬಳಿಯಲಿದ್ದ ಏಣಿ ಕಾಲಲ್ಲಿ ಕುಳಿತು ಆತನನ್ನೇ ದಿಟ್ಟಿಸಿ ನೋಡುತ್ತಾ ಕುಳಿತಾಗ ಅವಳ ಅನುಮತಿಯ ಕೇಳದೆ ಕಣ್ಹನಿಗಳು ಕಲ್ಲಾಗಿ ಗಲ್ಲದವರೆಗೂ ಇಳಿಯುತ್ತಿದ್ದವು!.  ಇತ್ತ ಈತ ‘ಮನೆಗೆ ಬಂದು ಬಿಡೇ ಎನ್ನೋಣವೆಂದರೆ’ ನನ್ನ ಕೈಯಲ್ಲಿ ಬಿಡಿಗಾಸೂ ಇಲ್ಲವಲ್ಲ, ನಲ್ಲೇ! ದುರಾದೃಷ್ಟದ ಇನ್ನೊಂದು ಹೆಸರೇ ನಾನು ಎಂದು ಮನದಲ್ಲೇ ದುಃಖ್ಕಿಯಾಗಿದ್ದಾನೆ..!..ಇಬ್ಬರಲ್ಲೂ ತಬ್ಬಿ ಅಳುವಷ್ಟು ಆಳತೆ!, ಒಬ್ಬರೆದುರಲ್ಲಿ ಒಬ್ಬರು ಕುಳಿತು ತಲ್ಲೀನರಾಗುವಷ್ಟು ಮೌನತೆ ನೀಳವಾಗಿ ಅಡಗಿದೆ ಆದರೆ ಇಬ್ಬರೂ ಮೌನಿಗಳು!..

ಆಕೆಯ ಇಡೀ ದೇಹವನ್ನೇ ಆವರಿಸಿದ ಕ್ಯಾನ್ಸರ್ ಸಾವಿಗೂ ಆಮಂತ್ರಣ ನೀಡಿದೆ!. ಈಗ ಆಕೆ ಮತ್ತೆ ಮಗುವಾಗಿದ್ದಾಳೆ ,ಹಠ ಮಾಡುತ್ತಾಳೆ!, ಒಮ್ಮೆ ನಗುತ್ತಾಳೆ!, ಮತ್ತೊಮ್ಮೆ ಅಳುತ್ತಾಳೆ, ಮಗದೊಮ್ಮೆ ಮೌನಿಯಾಗಿ ಆಳ ಆಲೋಚನೆಯಲ್ಲಿ ಮುಳುಗುತ್ತಾಳೆ. ಅಷ್ಟೂ ದಿನದ ಸಂಸಾರದಲ್ಲಿ ಒಂದು ಮಲ್ಲಿಗೆ ಹೂವನ್ನೂ ಬಯಸದವಳು,” ರೀ!,ನಂಗೊಂದು ಸೀರೆ ಕೊಡ್ಸೀ”.. ಎಂದು ಅವನನ್ನು ದಿಟ್ಟಿಸಿ ಬೇಡುತ್ತಿದ್ದಳು!,ಆತ ಎಂದೂ ಕಣ್ಣಿಂದ ನೀರ ನೆಲಕ್ಕುರುಳಿಸದವ ಅಂದು ಪೂರ್ತಿ ನೇತ್ರಾವತಿಯನ್ನೇ ಹರಿಸಿದ್ದಿದೆ!. ಒಂದೆಡೆ ಔಷಧಿಗೆ ಹಣವೆಂಬ ಕಾಗದವನ್ನು ಬೇಡಲೇ ಇಲ್ಲ ಸೀರೆ ತರಲೇ ಎಂಬಾತನ ನೋವಿನ ಬಿಸಿಯುಸಿರು ಅವನನ್ನೇ ಸುಡುತ್ತಿದೆ..

ಆಕೆಯ ದೇಹ ದೀಪದ ಬತ್ತಿಯು ಉರಿದು ಉರಿದು ನಂದಲು ಇನ್ನೇನು ಕೆಲವು ದಿನಗಳಿರುವಾಗ ಆಕೆ ಮಗುವಂತೆ ನಾನು ನನ್ನ ಮನೆಗೆ ಹೋಗಲೇಬೇಕೆಂದು ಹಠ ಮಾಡಿದಳು, ಇರುವಷ್ಟು ದಿನವಾದರೂ ನೆಮ್ಮದಿಯಿಂದಿರಲಿ ಎಂದು ಆಕೆಯನ್ನು ಕರೆದೊಯ್ದ ಆತ, ಈಗಾಗಲೇ ಕೂಡು ಕುಟುಂಬ ಒಡೆದಿದೆ!.

ಅದು ಗದ್ದೆ ನಾಟಿ ಸಮಯ ಎಲ್ಲರೂ ಗದ್ದೆಯಿಂದ ಬಂದು ಉಂಡು ಮತ್ತೆ ಮರಳುವ ಹೊತ್ತು, ಈಕೆಯೂ ಕೂಡಾ ಸಲ್ಪೆ ಸಲ್ಪ ಅನ್ನ ನುಂಗಿದ್ದಳು ಹಾಗೂ ಬಾಗಿಲಲ್ಲೇ ಕುಳಿತು ತನ್ನ ದುರಾದೃಷ್ಟತೆಯನ್ನು ಅನುಭವಿಸುತ್ತಾ ಕುಳಿತಿದ್ದಳು, ಗಂಡನನ್ನು ನೋಡಿ “ರೀ, ನಾನೂ ಹೊರಗಡೆ ಹೋಗ್ಬೇಕು ಕರ್ಕೊಂಡು ಹೋಗಿ” ಎಂದಳಾಕೆ!. ಅವಳನ್ನು ಕೈಮೇಲೆ ತನ್ನ ಮಗುವಂತೆ ಎತ್ತಿಕೊಂಡು ಆತ ಕರೆದೊಯ್ದ!, ಆಕೆಗೆ ಕೂರಲೂ ಸಾಧ್ಯವಾಗುತ್ತಿಲ್ಲ ಆದರೆ ಆತನಿಗೀಗ ಅವಳೊಂದು ಮಗುವಂತೆ ಕಾಣುತ್ತಿದ್ದಾಳೆ. ಅವನಿಗೆ ಅವಳ ಮೇಲಿದ್ದ ಅನಂತ ಪ್ರೇಮ ಅವಳ ದೇಹದಮೇಲಲ್ಲ, ಆಕೆಯ ಮೌನದೊಳಗಿದ್ದ ಮಾತಿನ ಮೇಲೆ!.. ಆತ ಅವಳೊಂದಿಗಿದ್ದು ಆಕೆಯ ಮಲ ಮೂತ್ರವನ್ನೂ ತೊಳೆದು ಮತ್ತೊಮ್ಮೆ ಕೈ ಮೇಲೆ ಹೊತ್ತು ಹೊಸ್ತಿಲ ಬಳಿ ಬರುವಾಗಾಗಲೇ ಆಕೆ ಅವನ ಕಣ್ಣುಗಳನ್ನೇ ನೋಡುತ್ತಾ ಮೌನವಾಗಿದ್ದಾಳೆ ಆಕೆ!..

ಒಮ್ಮೆಲೇ ಆತನ ಆರ್ತ ಕೂಗು ಜವನನ್ನೂ ನಡುಗಿಸಿತು!, ಅಂದು ಅವಳೊಂದಿಗೆ ಹೊಸ್ತಿಲ ದಾಟಿದ ಆತ ಇಂದು ಆಕೆಯ ಪಾರ್ಥೀವ ಶರೀರವನ್ನು ಹಿಡಿದು ಹೊಸ್ತಿಲಲ್ಲೇ ನಿಂತಿದ್ದಾನೆ!. ಈಗ ಆತನ ತಲೆಯಲ್ಲಿ ಕೊನೆಗೂ ಅವಳು ಕೇಳಿದ್ದ ಸೀರೆ ಅವಳಿಗಾಗಲೇ ಇಲ್ಲವಲ್ಲ ಎನ್ನುವ ಆಳ ಗಾಯದ ನೋವು!,ಅವನ ಕಣ್ಣೀರು ಮೆಲ್ಲನೆ ಜಾರಿ ಆಕೆಯ ತುಟಿಗಳ ಮೇಲೆ ಬೀಳುತ್ತಿದೆ..ಇತ್ತ ಈಕೆ ಕರ್ಮ ಹರಿದುಕೊಂಡು, ದೇಹದಿಂದ ಹೊರಗೆ ನಿಂತು!. ರೀ ಇಲ್ನೋಡಿ ನನಗೆ ಈಗ ನೋವುಗಳೇ ಇಲ್ಲ, ನಾನು ಮನಸ್ಪೂರ್ತಿಯಾಗಿ ನಗುತ್ತಿದ್ದೇನೆ ಆದರೆ ನಿಮಗೇಕೆ ಇಷ್ಟು ನೋವು ಎಂದು ಪ್ರಶ್ನಿಸುತ್ತಾ ನಿಂತಿದ್ದಾಳೆ!..ಯಮನೂ ಭೀಕರ ಮೌನದ ಏಟಿಗೆ ಬಲಿಯಾಗಿ ನಿಂತಿದ್ದಾನೆ.. ಆಕೆ ತನ್ನ ಪತಿಯ ಕೈಯಲ್ಲೇ ಮುತ್ತೈದೆಯಾಗಿ ತೆರಳಿದ್ದರಿಂದ ಆನಂದವಾಗಿ ನಗುತ್ತಿದ್ದಾಳೆ…! ಈಗ ಎಲ್ಲವೂ ಧೋ! ಎಂದು ಸುರಿದ ಮಳೆ ನಿಂತಾಗ ಬರುವ ತಣಿವಿನ ಭಾವದಲ್ಲಿದೆ..ಎಲ್ಲವೂ ಮುಗಿದಿದೆ…

ನಾ ಕಂಡಂತೆ ನೈಜ ಪ್ರೇಮವೂ ಹೀಗೇ ದೇಹದಲ್ಲಿ ಅಡಗಿರದೇ ಆತ್ಮದಲ್ಲೇ ಅಡಗಿರುತ್ತದೆ.. ಮೆಸೇಜ್,ಫೋನ್ ನಲ್ಲೇ ಪ್ರೀತಿಯ ಹುಡುಕುವ ಈ ಕಾಲದಲ್ಲಿ ನನಗೆ ಕಂಡ ನಿತ್ಯ ಪ್ರೇಮವೇ ಇದು!..ನನ್ನ ಸುತ್ತಲಿನದ್ದೆ

ಕವನ ಕೆ,

ದ್ವಿತೀಯ  ಬಿ ಎ, ವಿದ್ಯಾರ್ಥಿನಿ,

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜುಶಿವಮೊಗ್ಗ

ಅಂಕೆಯಿಲ್ಲದ ಲಂಕೇಶನ ಕದಡಿದ ಮನಸು

ನೀನಾಸಂ ನಮ್ಮ ಕೈ ಗಿತ್ತ ಬ್ಯಾಗ್ ನಲ್ಲಿದ್ದ ಎಲ್ಲವನ್ನು ನೋಡುತ್ತಾ ಬಂದ ನಮಗೆ ಸಿಕ್ಕಿದ್ದೆ “ದಶಾನನ ಸ್ವಪ್ನ ಸಿದ್ಧಿ” ಎಂಬ ಶೀರ್ಷಿಕೆಯ ಹಸ್ತಪ್ರತಿ (ಭ್ರೋಚರ್). ದಶಾನನ ಸ್ವಪ್ನಿಸಿದ್ದಿ ಕುವೆಂಪು ರಚಿತಾ ರಾಮಾಯಣ ದರ್ಶನ೦

ಕೃತಿಯಿಂದ ಆಯ್ದ ರಂಗ ಪ್ರಯೋಗ. ಅದನ್ನು ನೋಡಿದ ನಮ್ಮ ಮೊದಲ ಅನಿಸಿಕೆ “ಅದು ಸರಳ ರಗಳೆಯಲ್ಲಿರುವ ಕೃತಿ ನಮಗೆ ಅರ್ಥವಾಗುವುದು ಸ್ವಲ್ಪ ಕಷ್ಟವೇ!! ಎಂದು. ಆದರೆ ಅದರ ರಂಗ ಪ್ರಯೋಗವನ್ನು ನೋಡುತ್ತಾ ಹೋದ ನಮಗೆ ಕೊನೆಗೆ ಆದ ಅನುಭವವೇ ಬೇರೆ!!.

ಆಧುನಿಕ ಕನ್ನಡ ಸಾಹಿತ್ಯದ ಮಹೋನ್ನತ ಕೃತಿ.

ಮಹಾಕಾವ್ಯಗಳ ರಚನೆಯ ಯುಗ ಮುಗಿದೆ ಹೋಯಿತು ಎನ್ನುವಾಗಲೇ ಸೃಷ್ಟಿಯಾದ ಆಧುನಿಕ ಮಹಾಕಾವ್ಯ “ಶ್ರೀ ರಾಮಾಯಣ ದರ್ಶನ0”. ಕುವೆಂಪುರವರ ಕಿರೀಟಕ್ಕೆ ಜ್ಞಾನಪೀಠವೆಂಬ ವಜ್ರವನ್ನು ಕೊಟ್ಟ ಕೃತಿ ಇದು.

“ದಶಾನನ ಸ್ವಪ್ನ ಸಿದ್ಧಿ” ಇಲ್ಲಿ ರಾವಣನು ನಮಗೆ ತೋರುವ ಬಗ್ಗೆ ಅದ್ಭುತ. ಅವನ ಮನಸ್ಸಿನ ಲಾಗುವ  ವಿಭಿನ್ನ ಮಾರ್ಪಾಡುಗಳನ್ನು ಜಗದ ಮುಂದೆ ಇಡುವ ಪ್ರಯತ್ನ ಕವಿಯದ್ದಾದರೆ ಅದನ್ನು ರಂಗ ಪ್ರಯೋಗ ಮಾಡಿ ಎಲ್ಲರ ಕಣ್ಣುಗಳಿಗೆ ಕಟ್ಟುವಂತೆ ಮಾಡಿದ್ದು ನಿರ್ದೇಶಕರಾದ ಮಂಜು ಕೊಡಗು, ಮತ್ತು ತಂಡ.

ಕಥೆ ಹೀಗಿದೆ: ರಾಮನ ಸೈನ್ಯವು ಲಂಕಾಧಿನಾಥನ ಸೈನ್ಯವನ್ನು ಸಂಪೂರ್ಣ ನಾಶ ಮಾಡಿದೆ ಕೋಪಗೊಂಡ ರಾವಣನು ಸಂಕಲ್ಪ ಸಿದ್ಧಿಯಾಗಿ ಕಾಳಿಕಾದೇವಿಯನ್ನು ಪೂಜಿಸುತ್ತಾನೆ ವರ ನೀಡಲು ತಡ ಮಾಡಿದ ಕಾಳಿಕಾ ದೇವಿಗೆ  ತನ್ನ ತಲೆಯನ್ನೇ ಅರ್ಪಿಸಲು ಸಿದ್ಧನಾಗುತ್ತಾನೆ ಆಗ ಪ್ರಕೃತಿ ಒಂದೊಮ್ಮೆ ನಡಗುತ್ತದೆ. ಅವನು ಸ್ವಪ್ನ ಸಮಾಧಿಗೆ ಉರುಳುತ್ತಾನೆ. ಆಗ ಲಂಕಾಲಕ್ಷ್ಮೀಯು ಗೋಚರಳಾಗುತ್ತಾಳೆ, ಅವಳ ಪಾಡನ್ನು ನೋಡಿದ ರಾವಣ ಯುದ್ಧದಲ್ಲಿ ತಾನೊಬ್ಬನೇ ಸಮರಕ್ಕಿಳಿಯುವೆ ಎಂದು ಭಾಷೆ ಕೊಡುತ್ತಾನೆ. ನಂತರ ಅಲ್ಲಿ ಕೆಲವು ಮಾರ್ಪಾಡುಗಳಗೊಂಡು ದುರ್ಗೆ ಕಾಣಿ ಸುತ್ತಾಳೆ ಮಗುವಿನಂತೆ ಅಳುತ್ತಾ ಕಾಲಿಗೆರಗುತ್ತಾನೆ. ರಾಮ ಸೋಲುವಂತೆ ಸೀತೆವಶವಾಗುವಂತೆ  ಮಾಡೆ೦ದು ಕೋರುತ್ತಾನೆ. “ಸೀತೆ ಆಲಂಗಿಸುವಳು ಮತ್ತು ರಾಮನ ಸೋಲಿಸುವೆ -ಪುನರ್ಜನ್ಮದಲ್ಲಿ” ಅಂಥ ವರವಿತ್ತು ಮಾಯವಾಗುತ್ತಾಳೆ. ನಂತರ ಅವನಿಗೆ ದೇವತಾ ವಿಗ್ರಹದ ಬದಲು ಕೆನೆವ ಕುದುರೆಯೊಂದು ರೂಪತಾಳಿ ರಾವಣನ  ಬೆನ್ನಟ್ಟಿ ಬರುತ್ತದೆ. ರಾವಣನಿಗೆ ಸೀತೆಯ ಮೇಲಿದ್ದ ಅಧಮ್ಯವಾದ ಕಾಮ ರುಚಿ ಸಂಪೂರ್ಣವಾಗಿ ವಿನಾಶವಾಗುತ್ತದೆ. ಹೀಗೆ ಮುಂದುವರೆಯುತ್ತಾ ನದಿಜಲವೆಲ್ಲ  ನೆತ್ತರಾಗಿ, ಅವನು ಏರಿದ ದೋಣಿ ತಲೆ ಕೆಳಗಾಗಿ , ಅವನು ತನ್ನ ತಮ್ಮನಾದ ಕುಂಭಕರ್ಣನನ್ನು ಕಂಡು ಕೂಗುತ್ತಾನೆ ಇಬ್ಬರೂ ಹೊಳೆಯೊಡನೆ ಹೋರಾಡಿ ದಡವನ್ನು ಸೇರುತ್ತಾರೆ, ಇದ್ದಕ್ಕಿದ್ದ ಹಾಗೆ ತಾವಿಬ್ಬರು ಶಿಶುಗಳಂತಾಗಿದ್ದಾರೆ, ಅವರಿಬ್ಬರೂ ಆಗ ತಾನೆ ಹುಟ್ಟಿದ ಮಕ್ಕಳಂತೆ ಅಳತೊಡಗಿದಾಗ ಸೀತೆ ಅಲ್ಲಿಗೆ ಬಂದು ಮಕ್ಕಳನ್ನು ಎತ್ತಿ ಮುದ್ದಾಡುತ್ತಾಳೆ. ಇಲ್ಲಿ ರಾವಣನ ಮನಸ್ಸು ಸೀತೆಯ ಬಗೆಗಿನ ಮಾತೃ ಭಾವದಲ್ಲಿ ಉದಾತ್ತವಾಗುತ್ತದೆ.

ಈ ಸ್ವಪ್ನ ವಿಸ್ಮಯದಿಂದ ಹೊರಬಂದ ರಾವಣನು ಮಂಡೋದರಿಯನ್ನ ಕರೆಯುತ್ತಾನೆ ಆಗ ಬದಲಾದ ರಾವಣನು ಮಂಡೋದರಿಗೆ ಕಾಣುತ್ತಾನೆ. ತನಗಾದ ಅನುಭವವನ್ನು ಮಂಡೋದರಿಯ ಮುಂದೆ ವ್ಯಕ್ತಪಡಿಸುತ್ತಾನೆ. ಸೀತೆಯಲ್ಲಿ ತನಗಿರುವ ಈಗಿನ ಭಾವವನ್ನು ತಿಳಿಸುತ್ತಾನೆ. ಅವನ ಆತ್ಮ ಮನಸ್ಸು ದೈವಿಕ ನೆಲೆಯಲ್ಲಿ ನಿಲ್ಲುತ್ತದೆ.” ನನಗೆ ರಾಮನ ಕೊಲ್ಲುವುದಲ್ಲ ಗುರಿ ಸೀತಾಶುಭೋದಯಕೆ ಗೆಲ್ಲುವುದಲ್ಲದೆ ಕೊಲ್ಲುವುದಲ್ಲ”. ಮಂಡೋದರಿಯನ್ನ ಬೀಳ್ಕೊಡುತ್ತಾನೆ ಅಂದಿನ ಬೆಳಗು ರಾವಣನ ಪಾಲಿಗೆ ಜೇನಿನ ಮಳೆ ಸುರಿದಂತೆ, ಸೊಬಗಾಗಿ ಕಾಣುತ್ತದೆ. ನಾಳ ನಾಳದಲ್ಲಿ ಅಮೃತತ್ವ ಪಸರಿಸುತ್ತದೆ.

ಕಥೆ ಹೀಗಿದ್ದರೆ ಇದರ ರಂಗ ಪ್ರಯೋಗ ನೋಡುಗರನ್ನು ಒಂದೊಮ್ಮೆ ಚಕಿತವು , ಮೂಕವಿಸ್ಮಿತವು ಮಾಡುವುದರಲ್ಲಿ ಎರಡು ಮಾತಿಲ್ಲ. ಇದರ ವಿನ್ಯಾಸ ನಿರ್ದೇಶನ ಮಂಜು ಕೊಡಗುರವರದ್ದು ಇದರ ಪ್ರಯೋಗವನ್ನು ಇಬ್ಬರು ವೃತ್ತಿಪರ ನಟ ಅವಿನಾಶ್ ರೈ ಮತ್ತು ನಟಿ ಶ್ವೇತಾ ಅರೆಹೊಳೆಯವರದ್ದು. ಅವರು ಮಾಡಿದ ಅಭಿನಯ ನನ್ನ ಕಣ್ಣುಗಳಲ್ಲಿ ಇನ್ನು ಕಟ್ಟಿದ ಹಾಗೆ ಇದೆ. ಎಲ್ಲಾ ಪಾತ್ರಗಳು ಇವರಿಬ್ಬರೇ ಅತ್ಯಂತ ನಾಜೂಕಾಗಿ ಮತ್ತು ಆಕರ್ಷಕವಾಗಿ ಮಾಡಿ ಎಲ್ಲರ ಗಮನವನ್ನು ಸೆಳೆಯುತ್ತಾರೆ.

 

ರಾವಣನ ಮನಸ್ಸಿನಲ್ಲಾಗುವ ವಿಭಿನ್ನ ರೀತಿಯ ಮಾರ್ಪಾಡುಗಳನ್ನು  ಒಮ್ಮೆ ಕೋಪ, ಒಮ್ಮೆ ಅಪಾರಭಕ್ತಿ, ಒಮ್ಮೆ ಮಗು ಹೀಗೆ ಹಲವಾರು ರೀತಿಯ ಭಾವಗಳನ್ನು , ಪ್ರತಿ ವ್ಯಕ್ತಿಯು ಬೆಳೆಯಬಲ್ಲ ಬದಲಾಗಬಲ್ಲ ಎಂಬ ಕುವೆಂಪುರವರ ಆಶಯವನ್ನು ತಮ್ಮ ಅಭಿನಯದ ಮೂಲಕ ಮತ್ತು ಕಂಠದ ಮಾರ್ಪಾಡುಗಳ ಮೂಲಕ ನಮ್ಮೆದುರಿಗೆ ಇರಿಸಿದ ರೀತಿ ಅದ್ಭುತ.

 

ಇನ್ನು ಕಾಳಿಕಾದೇವಿ, ಲಂಕಾಲಕ್ಷ್ಮೀ, ಸೀತೆ ,ದುರ್ಗೆ, ಮಂಡೋದರಿ ಈ ಎಲ್ಲಾ ಪಾತ್ರಗಳನ್ನು ನೋಡುಗರು ಕುಳಿತಲ್ಲೇ ಅಚ್ಚರಿಯಾಗುವಂತೆ ಮಾಡಿದ ಕೀರ್ತಿ ಶ್ವೇತಾ ಅರಹೊಳೆಯರವರದ್ದು. ನನಗೆ ರೆಡಿಯಾಗೋಕೆ ಒಂದು ಗಂಟೆ ಬೇಕಪ್ಪ ಅನ್ನು ಈಗಿನ ಕಾಲದ ಹುಡುಗಿಯರಿಗೆ ಕಪಾಳ ಮೋಕ್ಷ ಮಾಡುವಂತಿದ್ದದ್ದು ಅವರು ತಯಾರಾಗಲು ತೆಗೆದುಕೊಳ್ಳುತ್ತಿದ್ದ ಸಮಯ. ನಾಟಕದಲ್ಲಿ ತಮಗೆ ನೀಡಿದ ಎಲ್ಲಾ ಪಾತ್ರಗಳನ್ನು ನಿರ್ವಹಿಸುತ್ತಾ ಒಂದೊಂದು ಪಾತ್ರಕ್ಕೂ ವಿಭಿನ್ನ ಮತ್ತು ವಿಜೃಂಭಣೆಯ ವೇಷ ಭೂಷಣಗಳನ್ನ ತೊಡಲು ಅವರು ತೆಗೆದುಕೊಳ್ಳುತ್ತಿದ್ದ ಸಮಯ ನಿಮಿಷಗಳಷ್ಟೇ!! ನಾಟಕದಲ್ಲಿ ಎಲ್ಲೂ ಕೂಡ ಲೋಪಭಾರದಂತೆ ಸಮಯಪ್ರಜ್ಞೆಯಿಂದ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮತ್ತು ಬಹು ಆಕರ್ಷಣೀಯವಾಗಿ ತೆರೆಯ ಮೇಲೆ ವ್ಯಕ್ತಪಡಿಸಿದರು. ಸೀತೆಯ ಪಾತ್ರವನ್ನು ಕೂಡಿಯಾಟ್ಟಮ್ ಪ್ರಕಾರದಲ್ಲಿ ವಿನ್ಯಾಸ ಮಾಡಿದ ರೀತಿ ಬಹಳ ಆಕರ್ಷಣೀಯವಾಗಿತ್ತು.

ಇದೆಲ್ಲದರ ಸೂತ್ರಧಾರಿಗಳಾದ ಮಂಜು ಕೊಡಗು ಅವರಿಗೆ ಒಂದು ಚಪ್ಪಾಳೆ ಸಲ್ಲಲೇ ಬೇಕು, ಕುವೆಂಪುರವರ ಕಾವ್ಯಗಳನ್ನು ನಾಟಕ ರೂಪದಲ್ಲಿ ತೆರೆ ಮೇಲೆ ತರುವುದು ಕಷ್ಟ ಎಂಬ ಪದಕ್ಕೆ ವಿರುದ್ಧವಾಗಿ ನಾಟಕವನ್ನು ವಿನ್ಯಾಸಗೊಳಿಸಿ , ನೋಡುಗರ ಕಣ್ಮನ ಸೆಳೆದ ಕೀರ್ತಿ ನಿರ್ದೇಶಕರುದ್ದು.

ಒಟ್ಟಿನಲ್ಲಿ ನಾಟಕವು ರಂಗಾಸಕ್ತರ ಮನಸ್ಸನ್ನು ಸೆಳೆಯುವುದರಲ್ಲಿ ಬೇರೆ ಮಾತೇ ಇಲ್ಲ!!!

ಚಿತ್ರಗಳು: ಶ್ವೇತಾ ಅರೆಹೊಳೆ ಮತ್ತು ತಂಡ

ಸಂಧ್ಯಾ ಕೆ.ಕೆ

ತೃತೀಯ ಬಿ. ಎ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

“ನೀನಾಸಮ್ ಒಂದು ಬೇರೆಯೇ ಲೋಕ”

ಮೊದಲ ದಿನ ನೀನಾಸಮ್ ಗೆ ಕಾಲಿಟ್ಟ ತಕ್ಷಣ ಮಳೆಯ ಹನಿಗಳ ಸ್ವಾಗತ ಕಂಡರಿಯದ ಸ್ವರ್ಗಕೇ ದಾರಿ ತೋರುವಂತಿತ್ತು….ಸುತ್ತಲು ಸಂಗೀತ ಮತ್ತು ನಾಟಕಗಳ ತಯಾರಿ ಕಣ್ಣ ಮಿನುಗಿಸಿ ನೋಡುವಂತೆ ಮಾಡಿತು…

ಮೊದಲ ದಿನದ ಮೊದಲನೇ  ಪರಿಚಯ ಗೋಷ್ಠಿಯ ಪ್ರಾರಂಭದ “ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ” ಹಾಡೇ ಎಲ್ಲರ ಕರ್ಣಗಳ ಅರಳಿಸಿತು ಈ ಗೋಷ್ಠಿಯು ಅದ್ಭುತದ ಜೊತೆಗೆ ಆಶ್ಚರ್ಯವನ್ನು ನೀಡಿತ್ತು.. ಏಕೆಂದರೆ ಹೆಸರಾಂತ ಬರಹಗಾರರು, ವಿಮರ್ಶಕರು,  ಡಾಕ್ಟರು, ಶಿಕ್ಷಕರು ,ನಿರ್ದೇಶಕರು ಹಾಗೂ ಕಲಾವಿದರು ಇನ್ನೂ ಅನೇಕ ವಿದ್ಯಾವಂತರು , ಜ್ಞಾನಿಗಳು ಕೂಡ ಈ ಶಿಬಿರದಲ್ಲಿದ್ದರು..ನಾವು ಮಾತ್ರ ಏನು ಅರಿಯದ ಡಿಗ್ರಿ ಎಂಬ ಬಲೆಗೆ ಸಿಲುಕಿ ಲೋಕಜ್ಞಾನದ ಸಣ್ಣ ಪರಿಚಯವಿಟ್ಟುಕೊಂಡು ಅಲ್ಲಿಗೆ ಹೋದವರು..

ದಶಾನನ ಸ್ವಪ್ನಸಿದ್ಧಿ ಕಿರುನಾಟಕ ಅಂತೂ ಪದಗಳಲಿ ವರ್ಣಿಸಲಾಗದ ಅನುಭವ‌, ಒಬ್ಬಳೇ ಹುಡುಗಿ ೫-೬ ಪಾತ್ರಗಳನ್ನು ಅಷ್ಟು ಕಡಿಮೆ ಸಮಯದಲ್ಲಿ ನಿಭಾಯಿಸಿದ್ದು ನಿಜಕ್ಕೂ ಅಚ್ಛರಿಯ ವಿಷಯ !!ಹೀಗೆ ಒಂದೊಂದು ಗೋಷ್ಠಿಗಳು ಒಂದೊಂದು ಲೋಕಕೇ ಕರೆದೊಯ್ಯುವ ದಾರಿಯಂತಿದ್ದವು. ನನ್ನ ಗುರುಗಳಾದ ಡಾ‌.ರಾಜೇಂದ್ರ ಚೆನ್ನಿ ಸರ್ ಅವರ ಗೋಷ್ಠಿಯಂತು ಮೂಡನಂಬಿಕೆಗಳ ಮೇಲೆ ಹೆಣ್ಣಿನ ಧನಿಯ ತೆರೆಯಲಾರದ ಪರದೆ ಸರಿಸಿದಂತಿತ್ತು. ನನ್ನ ಆತ್ಮಿಯರೇ ಆದ ತೇಜಶ್ರೀ ಮೇಡಂ ನಿಖರವಾದ ಮಾತುಗಳು ಪದ್ಯದ ಪೂರ್ಣ ಅರ್ಥವನ್ನು ನೀಡಿತು.

ಮಾಲತಿ-ಮಾಧವ ನಾಟಕ ಹಿಂದಿನ ಸಮಾಜದ ದೃಷ್ಟಿಕೋನದ ಜೊತೆಗೆ  ಪ್ರೀತಿಯ ಬಲೆಯಲ್ಲಿ ಬಿದ್ದ ಇಬ್ಬರು ಪ್ರೇಮಿಗಳ ಲಜ್ಜೆಯ ಭಾವವಂತೂ ರಮಣೀಯ!!! ಪ್ರೀತಿಯನ್ನು ಪಡೆದುಕೊಳ್ಳಲು ಅವರು ಮಾಡಿದ ಸಾಹಸಗಳು ವಿಕ್ಷಕರನ್ನು ಅತ್ಯುನ್ನತ ಭಾವನೆಗೆ ಕರೆದೊಯ್ಯುತ್ತಿದ್ದವು..

ಮರುದಿನದ ಮುಂಜಾವು ನನ್ನನಾ ಅರಿಯುವ ತವಕ ಸೃಷ್ಟಿಸಿದಂತಿತ್ತು..ಆ ಮಂಜಿನ ಮುಸುಕಿನಲ್ಲಿ ಅರಳಿದ ಹೂಗಳು ನನ್ನ ಜೊತೆ ಸಂಭಾಷಣೆಗಿಳಿದಿದ್ದ ಭಾವ ಅದು…

ಗೋಷ್ಠಿಗಳ ಮೇಲೆ ಗೋಷ್ಠಿಗಳು ಲೋಕದ ಎಲ್ಲ ದೃಷ್ಟಿಕೋನಗಳನ್ನು ಕಣ್ಮುಂದೆ ತರುತ್ತಿದ್ದವು.. ಪ್ರಕೃತಿಗೆ ಸಹವೋ ವಿರುದ್ಧವೋ ಎಂಬ ಸಂದೇಹ ಹೊಂದಿರುವ ಒಂದೇ ಲಿಂಗಗಳ ಸಂಬಂಧದ ಕುರಿತು ಹೇಳುವ ಬಿ-ಲವೆಡ್ ನಾಟಕ ಸಮಾಜವೇ ಎಲ್ಲ ಸಂಬಂಧಗಳಿಗೂ ವೈರಿ ಎಂಬಂತೆ ಪ್ರಸ್ತುತ ಪಡಿಸಿತ್ತು.

ಅಂಕದ ಪರದೆ ಈ ನಾಟಕ ವೃದ್ಧರ ಕುರಿತಾಗಿದ್ದು ಅವರ ಮನಸ್ಸಿನ ತಲ್ಲಣಗಳು , ಮಕ್ಕಳ ನಿರಾಕರಣೆ ಪೋಷಕರ ಮೇಲೆ ಬೀರುವ ಪರಿಣಾಮ ಎಂತದ್ದು ಹಾಗೂ ನೋವಿನಲ್ಲೂ ಸದಾ ನಗುವ ಆ ಮುಗ್ಧ ಹೃದಯಗಳನ್ನು ಅವರ ಕೊನೆಯುಸಿರಿರೊವರೆಗೂ ನಮ್ಮ ಜೊತೆಯೇ ನೋಡಿಕೊಳ್ಳಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೇಳುತಿರಲು ಕುಳಿತ ಪ್ರತಿಯೊಬ್ಬರ ಮನ ಪರಿವರ್ತಿಸಿತು…

ಟೆರ್ರಾಕೂಟಾಯಿಂದ ಹೊಳೆಯುತಿರುವ ನೀನಾಸಮ್ ಅನ್ನು ನೋಡುವುದೇ ಒಂದು ಖುಷಿ ,ದಿನಗಳು ಹೇಗೆ ಕಳೆಯುತ್ತಿವೆ ಎಂಬುವುದೇ ತಿಳಿಯುತ್ತಿರಲಿಲ್ಲ..

ಹಬ್ಬದ ಹನ್ನೆರಡನೇ ರಾತ್ರಿ ನಾಟಕ ಗಂಟೆಗಳಕಾಲ ಶೇಕ್ಸ್‌ಪಿಯರ್ ನ ಕಾಲಕ್ಕೆ ಕರೆದ್ಯೊದಿತ್ತು. ವೀಶೆಷವೆಂದರೆ ಈ ನಾಟಕದಲ್ಲಿ ನಟಿಸಿದ ಎಲ್ಲರೂ ಕಲಾವಿದರು ನೀನಾಸಮ್ ನ ಹವ್ಯಾಸಿ ರಂಗಭೂಮಿ ಕಲಾವಿದರು ಹಾಗೂ ಗ್ರಾಮಸ್ಥರೇ ಆಗಿದ್ದರು ….

ಟೀ ಬ್ರೇಕ್ ಗಳಿಗಾಗಿ ಕಾಯುತ್ತಿದ್ದ ನಮಗೆ ಸರಳ- ಸಜ್ಜನಿಕೆ ಜ್ಞಾನಿಗಳನ್ನು ಮಾತನಾಡಿಸಬೇಕೆಂಬ ಸಣ್ಣ ಹಂಬಲದಿಂದ ಭಯದ ಬಟ್ಟೆ ತೊಟ್ಟು  ಧೈರ್ಯದ ಚಿಟ್ಟೆ ಹಿಡಿದು ಹೋಗಿ ಒಂದೆರಡು ಮಾತನಾಡಿ ಬಂದದ್ದು ಪದಪುಂಜಗಳಲ್ಲಿ ವರ್ಣಿಸಲಾಗದ ಸಂತಸ..

ಜೊತೆಗಿರುವನು ಚಂದಿರ ಜಯಂತ ಕಾಯ್ಕಿನಿ  ಅವರು ಅನುವಾದ ಮಾಡಿದ ಈ ಅತ್ಯದ್ಬುತ ನಾಟಕ ಹುಲಗಪ್ಪ ಕಟ್ಟಿಮನಿ ಅವರ ಸಂಕಲ್ಪ ರಂಗ ತಂಡ ಮತ್ತು ಮಂಗಳಾ ಮೇಡಂ ನಿರ್ದೇಶನದಲ್ಲಿ ಮೂಡಿಬಂದ ಈ ಪ್ರದರ್ಶನ ಬಡತನದ ಬೇಗೆಯಲ್ಲೇ ಹುಟ್ಟಿ ಬೆಳೆದ ನನಗೆ ವೈಯಕ್ತಿಕವಾಗಿ ಈ ನಾಟಕ ಗಾಢವಾದ ಅನುಭವನ್ನೇ ನೀಡಿದೆ.

ದಿನವಿಡೀ ದುಡಿದು ದನಿದು ಮನೆಗೆ ಬಂದ ತಂದೆ, ತನ್ನ ಎತ್ತರಕ್ಕೆ ಬೆಳೆದ ಹೆಣ್ಣು ಮಕ್ಕಳ ಮೊಗದ ನಗು ನೋಡಿ ತನ್ನೆಲ್ಲ ದನಿವ ಮರೆಯುತ್ತಾನೆಂದರೇ ಈ ವಾತ್ಸಲ್ಯಕೇ ನಿಲುಕುವ ಬೇರೊಂದು ಅಂಶ ಸಿಗಲು ಸಾಧ್ಯವೇ ಜಗದಲಿ…

ತಮ್ಮ ಮೂರು ಹೆಣ್ಣು ಮಕ್ಕಳ ಮದುವೆ ಎಂಬ ಜವಾಬ್ದಾರಿಗಾಗಿ ಜೀವನವಿಡಿ ಶ್ರಮಿಸುವ ತಂದೆ-ತಾಯಿಗೆ ಎದುರಾಗುವ ಸಮಸ್ಯೆಗಳು ಸಾವಿರದಷ್ಟು..ಪ್ರೀತಿ ಎಂಬ ಹೆಸರು ಕೂಡ ಕೇಳಲು ಇಷ್ಟ ಪಡದ ಬಡ ಮುಸ್ಲಿಂ ಕುಟುಂಬವೊಂದು ತಮ್ಮ ಮೂರು ಹೆಣ್ಣು ಮಕ್ಕಳು ಅವರವರ ಮನಸ್ಸಿಚ್ಛೆಯಂತೆ ಮದುವೆಯಾದಾಗ ಆ ತಂದೆ-ತಾಯಿಗಳ ಮನಸ್ಸಿಗಾದ ಆಘಾತ ಹೇಳತೀರದು. ಆದರೂ ಕೊನೆಗೆ ತನ್ನ ಮಕ್ಕಳು ಅಪ್ಪಾ ಎಂದು ಕೂಗಿದಾಗ ಮನಸ್ಸಿನಲ್ಲಿದ್ದ ಎಲ್ಲ ಕೋಪ ತಣ್ಣಗಾಗಿ ಅಪ್ಪಿ- ಮುದ್ದಾಡುವ ಕ್ಷಣವಂತೂ ಬಯಕೆಗೂ ಮೀರಿದ ಭಾವಗೀತೆಯಂತಿತ್ತು!!! ಮುಂದೊಂದು ದಿನ ಧರ್ಮವೆಂಬ ಹೆಸರಿನಿಂದ ದಶಕಗಳ ಕಾಲ ಗಂಡ-ಮಕ್ಕಳ ಜೊತೆ ಬದುಕಿದ ಮನೆಯನ್ನ ಬಿಟ್ಟು ಹೋಗಬೇಕಾದರೇ ಆ ತಾಯಿಗೆ ಅದೇಷ್ಟು ಸಂಕಟವಾಗಿರಬೇಕು. ತಾಯಂದಿರಿಗೆ ತಮ್ಮ ಮನೆಯ ಮೇಲಿನ ಒಲವು ಎಷ್ಟಿರುತ್ತದೆಂದರೆ ಮನೆ ಬಿಟ್ಟು ಹೋಗುವ ಕೊನೆ ಕ್ಷಣದಲ್ಲೂ ಕೂಡ ಮನೆಯನ್ನು ಸ್ವಚ್ಛವಾಗಿ ಗುಡಿಸಿ ,ಕಿಟಕಿ ಬಾಗಿಲುಗಳನ್ನು ಸ್ಪರ್ಶಿಸಿ ಹೋರಡಬೇಕಾದರೇ ನಮಗೇ ತಿಳಿಯದೇ ನಮ್ಮನ್ನು ಅದು ಬೇರೆಯೇ ಲೋಕಕೇ ಕರೆದ್ಯೊದು ಪ್ರತಿ ಕ್ಷಣವನ್ನು ಎಂದಿಗೂ  ಕಣ್ಣಿಗೆ ಕಟ್ಟುವಂತೆ ಮಾಡಿದೆ. ಆ ಬಡ ಕುಟುಂಬದ ವಾತ್ಸಲ್ಯ ಹೆಣ್ಣು ಮಕ್ಕಳ ಮದುವೆ ಎಂಬುವುದು ಬಡ ತಂದೆ-ತಾಯಿಗೆ ನೀಡುವ ಅಪಾರ ನೋವಿನ ಸರಮಾಲೆಯನ್ನು ನಿಮಿಷಗಳಲ್ಲೇ ತೋರಿಸಿ ಎಲ್ಲ ವೀಕ್ಷಕರ ಕಂಬನಿಗೆ ಪಾರವೇ ಇರದಂತೆ ಮಾಡಿದರು.

ನಾಟ್ಯ ಮಯೂರಿಯಾಗಿ ನರ್ತಿಸಿ ಪ್ರತಿಯೊಬ್ಬರ ಕಣ್ಣಂಚಲ್ಲಿ ನೀರೂರುವಂತೆ ಮಾಡಿದವರು ಅನುಪಮಾ ರಾಜೇಂದ್ರ ಅವರು!.. ದ್ರೌಪದಿ ವಸ್ತ್ರಾಪಹರಣದ ಒಂದು ಘೋರ ಘಟನೆಯನ್ನು ಮತ್ತೆ ನಮ್ಮುಂದೆ ಇಟ್ಟು ಅವರು ನರ್ತಿಸುವಾಗ ಪ್ರತೀ ಪ್ರೇಕ್ಷಕರೂ ಕೂಡ ಅಸಹಾಯಕ ಹಾಗೂ ದುಃಖಿತರಾಗಿದ್ದನ್ನು ನಾನು ಗಮನಿಸಿದ್ದೇನೆ.. ಅಬ್ಬಾ ಒಂದೊಮ್ಮೆ ಪಾಂಚಾಲಿಯೇ ಬಂದು ತನ್ನ ಸೆರಗೊಡ್ಡಿ ಕಾಪಾಡಿ ಎಂದು ಕೇಳಿದ ಹಾಗೆ ಮೈ ನವಿರೇಳಿಸಿದ ಕ್ಷಣವದು. ನಾಟ್ಯ ಶಾರದೆ ನಮಗಾಗಿ ಇಳಿದುಬಂದು ಹಳದಿ ಸೀರೆಯುಟ್ಟು ನಗುತ್ತಾ ನರ್ತಿಸುವಂತಿತ್ತು ಆ ಅಮೋಘ ದೃಶ್ಯ.. ಇಷ್ಟೇ ಅಲ್ಲದೆ ಅವರಲ್ಲಿದ್ದ ಆ ವಿನಯತೆಯೇ ಆವರ ಈ ಎಲ್ಲ ಸಾಧನೆಗಳ ಮೂಲವೆನಿಸುತ್ತದೆ, ಯಾವ ಪದಗಳಲ್ಲಿ ವರ್ಣಿಸಲಿ ಆ ನಯನ ಮನೋಹರ ದೃಶ್ಯವನ್ನ!?..

ಹೀಗೆ ಹೊಸ-ಹೊಸ ಅನುಭಗಳ ಸುರಿಮಳೆಯ ಸುರಿಸಿದ ಐದು ದಿನಗಳ ಕಲೆಗಳ ಸಂಗಡ ಮಾತುಕತೆ ಶಿಬಿರ ಸಾಹಿತ್ಯದ ಹುಚ್ಚಿರುವ ನನಗೆ ಇನ್ನಷ್ಟು ಕಿಚ್ಚೆರುವಂತೆ ಮಾಡಿದೆ..

ನಮ್ಮ ನಾಗರಾಜ ಸರ್ ಕೂಡ ಎಲ್ಲರನ್ನು ಮಾತಾಡ್ಸಿ ಪರಿಚಯ ಮಾಡ್ಕೊಳ್ಳಿ , ನೀವು ಹೀಗೆ ನೂರಾರು ಶಿಬಿರಗಳಲ್ಲಿ ಭಾಗವಹಿಸಬೇಕು ಭಯ ಬಿಡಿ ಆರಾಮಾಗಿ ಎಲ್ಲರ ಜೊತೆ ಬೇರೆಯಿರಿ ಎಂದೂ ಕ್ಷಣ-ಕ್ಷಣಕ್ಕೂ ಧೈರ್ಯ ತುಂಬುತಿದ್ದರು . ಅವರ ಈ ಮಾತುಗಳಿಂದಲೇ ಭಯವಿದ್ದರೂ ತೋರದಂತೆ ಜಯಂತ ಕಾಯ್ಕಿನಿ ಸರ್ ಅವರನ್ನು ಮಾತನಾಡಿಸಲು ಹೋಗಿ ಅವರ ಆಟೋಗ್ರಾಫ್ ತಗೊಂಡು,ಅವರು ನಗೆ ಬೀರುತ  ಹೇಳಿದ ಮಾತು  “ಶಿಬಿರದ ಕೊನೆಯಾದರೇನು  ನಿನ್ನ ಜೀವನದ ಹೊಸದೊಂದು ದಾರಿ ಇಂದಿನಿಂದಲೇ ಪ್ರಾರಂಭವಾಗಲಿ” ನಾನು ಇದನ್ನೆ ಇಚ್ಛಿಸುವೆ..

ಇಂತಹ ಮಹೋನ್ನತ ಕಾರ್ಯವನ್ನು ಪ್ರತಿವರ್ಷವೂ ನಡೆಸಿಕೊಂಡು ಬರುತ್ತಿರುವ ಅಗಾಧ ಜ್ಞಾನ ಹೊಂದಿದ ಮಗು ಮನಸ್ಸಿನ ಕೆ.ವಿ. ಸುಬ್ಬಣ್ಣ ಅವರ ಮಗ ಅಕ್ಷರ ಸರ್ ಅವರಿಗೂ ಹಾಗೂ ಶಿಬಿರವನ್ನು ತಮ್ಮ ಮನೆಯ ಕಾರ್ಯಕ್ರಮದಂತೆ ನಡೆಸಿ ನಮ್ಮೆಲ್ಲರನ್ನು ಪ್ರೀತಿಯಿಂದ ನೋಡಿಕೊಂಡ ಮಾಧವ ಚಿಪ್ಪಳ್ಳಿ ಸರ್ ಅವರಿಗೆ ಮತ್ತು ನಮ್ಮಂತಹ ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯದ ಜೊತೆಗೆ  ಲೋಕಜ್ಞಾನವನ್ನು ನೀಡುತ್ತಿರುವ ನೀನಾಸಮ್ ಗೆ ನಾನೆಂದಿಗೂ ಋಣಿ..!!!

ನನ್ನ ಜೀವನದ ಹೊಸ ದಾರಿಗೆ ಬೆಳಕಾಗಿರುವ ಡಾ.ಎಚ್.ಎಸ್.ಅನುಪಮಾ ಮೇಡಂಗೆ, ಅನೀರಿಕ್ಷಿತವಾಗಿ ದೊರೆತ ಈ ಅಮೋಘ ಅವಕಾಶವನ್ನು ನೀಡಿದ ಹಾಗೂ ವಿದ್ಯಾರ್ಥಿಗಳ ಏಳಿಗೆಗಾಗಿಯೇ ಶ್ರಮಿಸುವ ನಮ್ಮ ಕಾಲೇಜಿನ ಪ್ರಾಂಶುಪಾಲರಾದ ಡಾ.ಸಂಧ್ಯಾ ಕಾವೇರಿ ಮೇಡಂಗೆ , ತನ್ನ ಅವಕಾಶವನ್ನು ನನಗಾಗಿ ಬಿಟ್ಟುಕೊಟ್ಟ ಪ್ರೀತಿಯ ಸ್ನೇಹಿತೆ ಸ್ಪೂರ್ತಿಗೂ ಹಾಗೂ ಶಿಬಿರದ ಬಗ್ಗೆ ಕೊಂಚ ಭಯವಿದ್ದಾಗ ಪ್ರೊತ್ಸಾಹ ನೀಡಿ ಕಳಿಸಿದ ನನ್ನ ರೇಷ್ಮಾ ಮೇಡಂ ಇವರೆಲ್ಲರಿಗೂ ನನ್ನ ಮನ ಪೂರ್ವಕ ಧನ್ಯವಾದಗಳು….

ಸಂಗೀತಾ ಆರ್. ಬುದ್ನಿ

ಎರಡನೇ ವರ್ಷದ ಬಿ.ಎ ವಿದ್ಯಾರ್ಥಿನಿ

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

 

ನೀನಾಸಂನ ನೀಳ ನೆನಪುಗಳು

 

 

ಹೆಗ್ಗೋಡು ನನಗೆ ಚಿರಪರಿಚಿತ ಊರು!.. ಅಮ್ಮ ಆಗಲೇ ನನಗೆ ನೀನಾಸಂನ ಬಗ್ಗೆ ಸದಾ ಹೇಳುತ್ತಿದ್ದಳು ಏಕೆಂದರೆ ಅದು ಅವಳೂರು, ಒಂದೊಮ್ಮೆಯಾದರೂ ಅಲ್ಲಿಗೆ ಭೇಟಿ ನೀಡುವ ಆಸೆ ನನ್ನೊಳಗೆ ಯಾವಾಗಲೂ ಇರುತ್ತಿತ್ತು. ಎಲ್ಲದಕ್ಕೂ ಸಮಯ ಬೇಕೆಂಬಂತೆ!, ನನ್ನ ಕಾಲೇಜು ಈ ದೊಡ್ಡ ಅವಕಾಶದ ಬಾಗಿಲತ್ತ ನನ್ನ ಒಯ್ದು ಬಿಟ್ಟಾಗ ಬೆಲ್ಲ ತಿಂದಷ್ಟು ಕುಷಿ ನನಗಾಯ್ತು!!..

ನೀನಾಸಂ ಈ ಐದು ದಿನಗಳು ನಮಗೆ ಜ್ಞಾನದೌತಣ ನೀಡಿತು. ಖಾಲಿ ಮಸ್ತಕದ ಭೃಂಗದಂತೆ ಹೋದ ನಾವು!ಮರಳಿದ್ದು ವೈವಿದ್ಯಮಯ ಅನುಭವ ಹಾಗೂ ಅರಿವ ಕುಸುಮಗಳ ಮಕರಂದದೊಂದಿಗೆ. ಅಂದು ಸಂಜೆ ನೀನಾಸಂಗೆ ನಮ್ಮಡಿ ಸೋಕುತಿದ್ದಂತೆ ನನ್ನ ಮನಸ್ಸಿಗೆ ಉಲ್ಲಾಸವೆನಿಸಿದ ವಿಷಯವೆಂದರೆ ಸಾವಿರಾಕ್ಷರಗಳ ಸುಂದರ ಪುಸ್ತಕಗಳ ಚೀಲ! ಅಬ್ಭಾ ಅದಂತೂ ಅಧ್ಬುತ ಕ್ಷಣ.. ಆದರೂ ನನ್ನ ಮನದಲ್ಲಿ ಒಂದು ಸಣ್ಣ ಯೋಚನೆಯಿತ್ತು, ನೀನಾಸಂ ಆಧುನಿಕತೆಯ ಛಾಪನ್ನು ಪಡೆದು ಹಳೇತನ ಕಳೆದುಕೊಂಡಿರಬಹುದೇನೋ ಎಂದು!, ಆದರೆ ನನ್ನ ನಿರೀಕ್ಷೆಗೆ ಅಲ್ಲಿನ ಹಳೆತನದ ಸುವಾಸನೆ ಕಪಾಳಮೋಕ್ಷ ಮಾಡಿತು. ಅಲ್ಲಿನ ಹಳ್ಳಿಯ ಸೊಗಡೇ ಬೇರೆ ಆಧುನೀಕರಣದ ಭೂತ ಎಂದೂ ಆ ಹಳ್ಳಿಯ ದೈವೀಕತೆಯನ್ನು ಮುಟ್ಟಲಾರದು.

ನಮಗೆ ನೀಡಿದ್ದ ವಸತಿ ಸ್ಥಳ ಅದರ ಬಾಗಿಲಲ್ಲಿದ್ದ ಶೀರ್ಷಿಕೆಯೇ ನಮ್ಮನ್ನು ಸ್ವಾಗತಿಸುತ್ತಿತ್ತು. ನಾಳಿನ ಕೌತುಕಗಳ ಸಿಹಿ ಕ್ಷಣಗಳನ್ನು ನಿರೀಕ್ಷಿಸುತ್ತಾ ನಿದ್ರೆಗೆ ಜಾರಿದೆವು. ಮೊದಲ ದಿನವು ಹೊಂಬಣ್ಣದ ಅರುಣನಿಂದ ಅರಳಿ ನಿಂತಿತ್ತು. ಸುತ್ತಲೂ ನೋಡಿದಷ್ಟೂ ಅನುಭವೀ ಮೇಘಗಳು!, ನಮಗೆ ನಡೆದಾಡುವ ಪುಸ್ತಗಳಂತೆ ಎಲ್ಲರೂ ತೋರುತ್ತಿದ್ದರು. ಎಲ್ಲರನ್ನೂ ನೋಡಿ ಮನವು ಹೊಸದೊಂದು ಚೈತನ್ಯ ತುಂಬಿಸಿಕೊಂಡು ಸಭಾಂಗಣ ಹೊಕ್ಕಿತು!, ನೀನಾಸಂ ನಮ್ಮ ಮೇಲೆ ಐದೂ ದಿನ ಜ್ಞಾನ ದೀವಿಗೆಯ ಬೆಳಕೊಗೆಯಲು ತಮ್ಮ ಅರ್ಥಿಗಳ ಧನಿಯ ಮೂಲಕ “ಕಲ್ಪನಾ ವಿಲಾಸ” ಎಂಬ ಭಾವಗೀತೆಯ ಅಡಿಗಲ್ಲನ್ನು ಹಾಕಿತು. ಎಲ್ಲರ ಪರಿಚಯ ಮಾಡಿಸುವ ಮೂಲಕ ನಮಗೆ ಆಗಮಿಸಿದ್ದ ಪ್ರತಿ ವೈವಿಧ್ಯಮಯ ವೈಖರಿಯಲ್ಲಿ ಕಾಣುತ್ತಿದ್ದ ಎಲ್ಲ ಬದುಕುಗಳ ಶೀರ್ಷಿಕೆ ದರ್ಶನ ಮಾಡಿಸಿದ ನೀನಾಸಂಗೆ ನಾವು ಖಂಡಿತಾ ಋಣಿ. ಈ ಕಲೆಗಳ ಸಂಗಡ ಮಾತುಕತೆ ಆರಂಭವಾದದ್ದು ನಾಗೇಶ್ ಹೆಗ್ಗಡೆಯವರ ಮಾತಿಂದ ಅವರ ಮಾತುಗಳು ಎಷ್ಟು ಕತ್ತಿಯಂತೆ ನಮ್ಮನ್ನು ಹೊಡೆಯಿತೆಂದರೆ, ಅದು ನಾವೇ ಮಾಡುತ್ತಿರುವ ಪ್ರಕೃತಿ ನಾಶದ ಚಿತ್ರವನ್ನು ಕಲಾವಿದರು ತಮ್ಮ ಪ್ರತಿಭೆಗಳ ಮೂಲಕ ವ್ಯಕ್ತಪಡಿಸುವುದರ ಅಥವಾ ಬಿಡಿಸುವ ಪೂರ್ಣ ಚಿತ್ರಣವನ್ನು ಸ್ಥೂಲವಾಗಿ ವಿವರಿಸಿದರು. ಇದರ ಮಧ್ಯದಲ್ಲಿ ನಮಗಾಗಿ ಕಾದಿದ್ದ ಇನ್ನೊಂದು ಅಚ್ಚರಿಯೇ ನಮ್ಮ ನಾಗರಾಜ್ ಸರ್ ಕಂಡದ್ದು!..

ಎಲ್ಲದಕ್ಕಿಂತ ವೈವಿಧ್ಯಮಯತೆ ಎಂದರೆ ಆ ಗೋಡೆಗಳ ಮೇಲಿನ ಚಿತ್ರಗಳು ಅಬ್ಭಾ ಎನಿಸುವಂತವು. ಘಳಿ-ಘಳಿಗೆಯೂ ಸಿಹಿತ್ವ ಹೊಂದಿತ್ತು, ಅಲ್ಲಿಗೆ ಬಂದ ಪ್ರತಿಯೊಬ್ಬರ ಪ್ರಭೆ ಅವರ ಮಾತು ನಡುವಳಿಕೆಗಳೇ ವರ್ಣಿಸುತ್ತಿದ್ದವು. ಪ್ರತಿಯೊಬ್ಬರೂ ವೇದಿಕೆಯ ಮೇಲೆ ನಿಂತು ತಮ್ಮ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದಂತೆ ಅವುಗಳ ಮೇಲಿನ ಪ್ರಶ್ನೆಗಳಂತೂ ಇನ್ನೂ ಹೊಸತೊಂದನ್ನು ಹೊತ್ತಿರುತ್ತಿದ್ದವು. ಅಬ್ಭಾ! ಮೊದಲ ದಿನದ ದಶಾನನ ಸ್ವಪ್ನಸಿದ್ದಿ  ನಾಟಕ ಪ್ರಸ್ತುತಿಯಂತೂ ಅಷ್ಟು ಪುಟ್ಟ ವೇದಿಕೆ ಮೇಲೆ ಮತ್ತೊಮ್ಮೆ ರಾಮಾಯಣ ದರ್ಶನವಾದಂತೆ ಕಣ್ಕಟ್ಟುವಂತಿತ್ತು, ಬಹುಶಃ ನನ್ನ ಪದ ಚೀಲದಲ್ಲಿ ಯಾವ ಪದಗಳೂ ವರ್ಣನೆಗಿಲ್ಲ.

ನನ್ನ ಮನಸ್ಸು ನವ ಚೇತನ ಭಾವದೊಳು ಹೊಸತರ ಅರಿವನ್ನು ಪಡಿದುಕೊಳ್ಳಲು ಬಾಗಿಲ ತೆರೆದು ಒಂದೊಂದನ್ನೇ ಹೀರುತ್ತಿತ್ತು. ಜಯಂತ್ ಕಾಯ್ಕಿಣಿ ಅವರು ಹೇಳಿದಂತೆ ನನ್ನ ಪಾಲಿಗೂ ನೀನಾಸಂ ಹೆರಿಗೆ ಆಸ್ಪತ್ರೆಯಂತೆ ಆಗಿತ್ತು. ‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ಗಾದೆಯಂತೆ ಅಲ್ಲಿ ಬಂದ ಯಾರೊಬ್ಬರಲ್ಲೂ ಅಹಂಕಾರ, ಅಸೂಯೆ ಭಾವಗಳನ್ನು ನಾನು ಕಾಣಲಿಲ್ಲ. ಅರಿವ ಅಂಬುದಿಯ ದಂಡೆ ಮೇಲೆ ನಿಂತಂತೆ ಭಾಸವಾಗುತ್ತಿತ್ತು ದಿಗಂತದತ್ತ ನೋಡುತ್ತಿತ್ತು ಮನಸ್ಸು.

ಮಲ್ಲಪ್ಪ ಬಂಡಿ ಸರ್ ಅವರ ಮಾತುಗಳು ಕಣ್ಣಂಚಲ್ಲಿ ನೀರೂರುವಂತೆ ಮಾಡಿದವು, ಸಾಧನೆಗೆ ತನುವು ಎಂದಿಗೂ ಅಡ್ಡಲಾಗಲಾರದೆಂಬ ಸ್ಪೂರ್ತಿ ನನ್ನೊಳಚಿಮ್ಮಿತು. ಹೀಗೇ ಪ್ರತೀಯೊಂದನ್ನೂ ಹೇಳುತ್ತಾ ಹೋದರೆ ಪುಟಗಳೇ ಸಾಲದೆನಿಸುತ್ತದೆ. ಯಾರನ್ನೂ ಅಲ್ಲಗಳಿವಂತಿಲ್ಲ, ತೇಜಶ್ರೀಯವರ ಮಾತಿನಲ್ಲಿದ್ದ ನಿಖರತಾಭಾವ ಹಾಗೂ ನಾಟ್ಯ ಅಭಿಜಾತೆಯಾಗಿ ಬಂದ ನಿರುಪಮಾ ರಾಜೇಂದ್ರ ಅವರು ಹೇಳ ತೀರದ ವರ್ಣನೆಯಾಗಿದ್ದಾರೆ.  ಅಕ್ಷರರವರ ಸಾಮಾನ್ಯೀಕರಣದ ವಿವರಣೆ ತರ್ಕ ಬದ್ದವಾಗಿತ್ತು!,ಹಾಗೂ ಏನೊಂದೋ ಅರಿವಿನ ಅಲೆಯ ಹೊಂದಿತ್ತು. ಅಷ್ಟೇ ಅಲ್ಲದೇ ಹೆಚ್.ಎಸ್ ಶಿವಪ್ರಸಾದ್ ಅವರು ನನ್ನ ಅಕ್ಷಿಗಳೆದುರು ಆಸೀನರಾಗಿ ಶೇಕ್ಸ್ಪಿಯರ್ ಬಗೆಗಿನ ಉಪನ್ಯಾಸ ನೀಡುವಾಗ ನಮಗಿವರು ನಿಜವಾಗಿಯೂ ಶಿವ ಪ್ರಸಾದರೇ ಎನಿಸಿತು.. ಈ ಎಲ್ಲಾ ಅಭಿಜಾತರ ನಡುವೆ ಕುಳಿತ ನಾವು ಹಲವಾರು ಹೆಸರಾಂತ ಸವಿಭಾವಗಳ ಪರವಶರಾಗಿದ್ದೆವು. ಅಕ್ಷರ ಅವರ ಸಾಮಾನ್ಯನಂತೆ ನಾನು ಎಂಬ ಪದ್ಯದ ವಿಮರ್ಶೆಯಂತೂ ಇನ್ನೂ ಕಿವಿಯಲ್ಲಿ ಅನುರಣಿಸುವಂತಿದೆ..

ಹಾಗೂ ‘ಅಕ್ಷರ’ರ ‘ವಿದ್ಯೆ’ಯೊಂದಿಗೆ ಮಾತನಾಡಿದಾಗ ಅರಿತದ್ದು ಹೆಸರಿಗೆ ಉಸಿರು ಕೊಡುವ ಬಗೆಗೆ.. ಅಲ್ಲದೇ ರಾಜೇಂದ್ರ ಚೆನ್ನಿ ಸರ್ ಅವರ “ಇರುಮುಡಿ” ಹಾಗೂ “ಧನ್ಯವಾದಗಳು” ಪದ್ಯಗಳ ವಿಶ್ಲೇಷಣೆ, ಸ್ತ್ರೀಯರ ಸಂಪೂರ್ಣ ಜೀವನದ ಪರಿಯ ದರ್ಪಣವೇ ಆಗಿತ್ತು.. ರುದ್ರವೀಣೆಯ ನಾದ ತಂತಿ ನನ್ನ ಹೃದಯದೊಳಗೆ ಇಳಿದು ಮೀಟಿ ಅನುರಣಿಸುತ್ತಿರುವಾಗ ತಾಯಿ ವೀಣಾಪಾಣಿಯೇ ಕುಳಿತಂತ ಸಂಗೀತ ಭಾವ.. ಪ್ರಸ್ತುತ ಜಗತ್ತಿನ ಪ್ರಕೃತಿ ವಿರುದ್ಧದ ಮಾನವನ ಮೋಹದ ಬದುಕನ್ನ ಬಿ-ಲವೆಡ್ ನಾಟಕ ಬಿಚ್ಚಿಟ್ಟಾಗ ಸಮಾಜದ ಬಗೆಗೆ ಅಸೂಯೆ ಮೂಡಿತು..

ಇದೆಲ್ಲದರ ಬಗೆಗೆ ಹೇಳುತ್ತಿದ್ದಂತೆ ಮರೆಯಲಾಗದ ವಿಷಯವೆಂದರೆ ನೀನಾಸಂನಲ್ಲಿನ ಊಟೋಪಹಾರದ ವ್ಯವಸ್ಥೆ !, ಎಷ್ಟು ಸ್ವಚ್ಚ ಸುಂದರವಾದ ವ್ಯವಸ್ಥೆ ಅಲ್ಲಿತ್ತೆಂದರೆ ಆ ಬಾಳೆಎಲೆಯೇ ಎಲ್ಲ ಭಾವನೆಗಳನ್ನು ಹಸುರಾಗಿಟ್ಟಿತ್ತು..

ಹೇಳಲೇ ಬೇಕಾದ ವಿಷಯವೊಂದಿದೆ ಹಾಗೂ ಈಕೆಯ ಪರಿಚಯ ಖಂಡಿತಾ ಎಲ್ಲರಿಗೂ ಆಗಬೇಕು!, ಶಿಬಿರ ಮುಗಿದ ರಾತ್ರಿ ನಾವೆಲ್ಲರೂ ಮಾತಿನಲ್ಲಿ ಮುಳುಗಿಹೋಗಿದ್ದೆವು ಅನೇಕ ವಿಷಯಗಳು ಮಾತುಗಳಲ್ಲಿ ಹಾಡು ಹೋದವು ಹೀಗೆ ಮಾತನಾಡುತ್ತಿದ್ದಂತೆ ಪ್ರಜ್ಞಾ ಅವರ ಬಾಯಿಂದ ಹೊರಟ ಮಾತು ನನ್ನನ್ನು ಮೌನಿಯಾಗಿಸಿತು. ನಮ್ಮಂತೆ ಮೊದಲ ವರ್ಷದ ಶಿಬಿರಾರ್ಥಿಯಾಗಿ ಬಂದ ದಿಟ್ಟ ಹಾಗೂ ಗಟ್ಟಿ ಮಹಿಳೆಯಾದ ಪ್ರಜ್ಞಾ ಮೇಡಂ ಅವರೂ ಕೂಡ ಲೇಖಕಿಯೇ ,ಅವರು ಸ್ತ್ರೀಯರ ಬಗೆಗೆ ಬರೆದ ಅತ್ಯುತ್ತಮ ಸಾಲು ನನ್ನ ಅಂತರಂಗದಾಳವನ್ನೇ ಕಲುಕಿತು ಆ ಮಾತು ಹೀಗಿದೆ “ನಾನು ಜೀವಿಗಳ ಸೃಷ್ಟಿ ಕರ್ತೆಯಾಗಿದ್ದರೆ, ಪ್ರತೀ ಹೆಣ್ಣು ಮಕ್ಕಳ ಯೋನಿಯಲ್ಲಿ ಹರಿತವಾದ ಹಲ್ಲುಗಳನ್ನೂ ತುಟಿಗಳ ಮೇಲೆ ಉಗುರುಗಳನ್ನೂ ಸೃಷ್ಟಿಸುತ್ತಿದೆ” ಎಂಬುದು, ಬಹುಶಃ ಈ ಮಾತಿನ ವಿಮರ್ಶೆಯ ಅಗತ್ಯತೆ ಇಲ್ಲ ಎನಿಸುತ್ತದೆ…

ಒಟ್ಟಾರೆಯಾಗಿ ಹೇಳುವುದಾದರೆ ನೀನಾಸಂನಲ್ಲಿ ವಿನಯತೆ, ಸಂಸ್ಕೃತಿ,ಅರಿವು ಪ್ರೀತಿ ಜೀವನದ ಎಲ್ಲ ಮೌಲ್ಯಗಳು ಭಗವಂತ ಪಾರ್ಥಾನಿಗೆ ತಾಳ್ಮೆಯಿಂದ ಹೇಳಿದ ಗೀತದಂತೆ ನಮ್ಮ ಕರ್ಣ ಹೊಕ್ಕು ನೆತ್ತರು ಮಾಂಸ ನರಮಂಡಲಗಳ ಸೀಳಿ ಹೃದಯ ಹಾಗೂ ಮಸ್ತಕವನ್ನ ಸೇರಿದಂತಾಯಿತು. ಅಕ್ಷರ ಸರ್ ಹೇಳಿದಂತೆ “ಪ್ರತೀ ಅಂತ್ಯವೂ ಹೊಸತೊಂದು ಆರಂಭ” , ಮರಳುವಾಗ ಹಸ್ತಗಳ ತುಂಬ ಪುಸ್ತಕಗಳು ಮಸ್ತಕದ ತುಂಬಾ ಹೊಸತನ್ನು ತಂದ ಹೆಮ್ಮೆ ನಮಗಿದೆ

ಈಗ ನೀನಾಸಂನೊಂದಿಗೆ ಬೆಸೆದ ಈ ಹೊಸದಾದ ಅವಿನಾಭಾವ ಸಂಬಂಧ ಇನ್ನೂ ಮುಂದುವರಿಯಬೇಕು ಎಂಬ ಆಸೆಯೊಂದಿಗೆ ನಾನು ಅಲ್ಲಿಂದ ಹೊರಬಂದೆ!. ನೀನಾಸಂನಂತ ನಾಕದ ಬಾಗಿಲ ತೋರಿದ ನಮ್ಮ ಸಂಧ್ಯಾ ಕಾವೇರಿ ಮೇಡಂ ಹಾಗೂ ರೇಷ್ಮಾ ಮೇಡಂ ಗೆ ನಾನಂತೂ ಚಿರ ಋಣಿ!..

ಕವನ ಕೆ,

ದ್ವಿತೀಯ  ಬಿ ಎ, ವಿದ್ಯಾರ್ಥಿನಿ,

ಕಟೀಲ್ ಅಶೋಕ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಸ್ವಾಭಿಮಾನದ ಸಾಧ್ವಿಗೆ ‘ಘನತೆ’ಯೆಂಬ ಗದ್ದುಗೆ!

ಸ್ವಾಭಿಮಾನದ ಸಾಧ್ವಿಗೆಘನತೆಯೆಂಬ ಗದ್ದುಗೆ!

ಮನುಷ್ಯ ಜಗತ್ತಿಗೆ ಸ್ವಾವಲಂಬನೆಯೆಂಬ ಹಂದರವನ್ನು ಇಳೆಯ ಮೇಲೆ ಹಾಕಿರುವವಳೇ ಮಹಿಳೆ. ಮಹಿಳೆ ಎಂದರೆ ಇನ್ನೊಬ್ಬರ ಹಾದಿಯಲ್ಲಿ ಸಾಗುವ ಬದಲು ತನ್ನದೇ ಆದ ದಿಟ್ಟ ಹೆಜ್ಜೆಯಲ್ಲಿ ನಡೆಯುವವಳು ಎಂದರ್ಥ. ವ್ಯಂಜನಕ್ಕೆ ಸ್ವರವು ಆಧಾರವಾಗುವಂತೆ ಅವಳ ಅಸ್ತಿತ್ವ ರೂಪಿಸಿಕೊಳ್ಳಲು ‘ಸ್ವಾವಲಂಬನೆ’ ಎಂಬ ಖಡ್ಗವನ್ನು ಹಿಡಿದವಳು ಮಹಿಳೆ. ಸಿಕ್ಕಿ ರೋವ್ ರವರು “ಮಹಿಳೆಯಾದರೆ ಆತ್ಮವಿಶ್ವಾಸ ಮತ್ತು ಸ್ವಾಭಿಮಾನ ಹೊಂದಿರುವ  ಮಹಿಳೆಯಾಗಬೇಕು, ಆಗ ಗಂಡಿಗೆ ಹೋರಾಡಲು ಒಂದು ಯೋಗ್ಯವಾದ ಕಾರಣ ಸಿಗುತ್ತದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪುರುಷ ‘ಶಕ್ತಿ’ಯೇ ಮೇಲೆಂದು ಬೀಗುತ್ತಿದ್ದ ಇಂತಹ ಜಗತ್ತಿಗೆ ಸ್ತ್ರೀ ‘ಶಕ್ತಿ’ ಏನೆಂದು ತೋರಿಸಿಕೊಟ್ಟದ್ದು ‘ಶಕ್ತಿ’ ಯೋಜನೆಯು ಜಾರಿಯಾದಂತಹ ಈ ವರ್ಷ. ಈ ಯೋಜನೆಯಲ್ಲಿ ‘ಶಕ್ತಿ’ಯ ಪ್ರದರ್ಶನವೇನೋ  ಆಯಿತು ಎಂದು ನಾವು ದೂರದರ್ಶನ, ಸುದ್ದಿಪತ್ರಿಕೆ, ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ ಹಾಗೂ ಕೇಳಿದ್ದೇವೆ,  ಆದರೆ ‘ಶಕ್ತಿ’ಯಲ್ಲಿ ಪ್ರದರ್ಶನಗೊಂಡ ಮಹಿಳಾ ಶಕ್ತಿಯು ಶಾಶ್ವತವೋ ಅಥವಾ ತಾತ್ಕಾಲಿಕವೋ ನಾನರಿಯೇ..!!

ಜಾಗತಿಕವಾಗಿ 3.905 ದಶಕೋಟಿಗಳಷ್ಟು ಮಹಿಳಾ ಜನಸಂಖ್ಯೆ ಇದ್ದು, ಡಬ್ಲ್ಯೂ. ಈ.ಐ.ಯ ವರದಿಯ ಪ್ರಕಾರ 60 ಪ್ರತಿಶತದಷ್ಟು  ಮಹಿಳೆಯರು ಸ್ವಾವಲಂಬನೆ ಸಾಧಿಸಿದ್ದಾರೆ, ಅಂದರೆ ಪ್ರಮುಖ ಮಾನವ ಅಭಿವೃದ್ಧಿ ಆಯಾಮಗಳಲ್ಲಿ ಪುರುಷರು ಸಾಧಿಸುವ ಸರಾಸರಿ 72ರಷ್ಟು ಪ್ರತಿಶತವನ್ನು ಅವರು ಸಾಧಿಸಿದ್ದಾರೆ. ಇದನ್ನು ಜೆಪಿಪಿಐನಿಂದ ಅಳೆಯಲಾಗುತ್ತದೆ, ಇದು 28 ಪ್ರತಿಶತ ಲಿಂಗವನ್ನು ಪ್ರತಿಬಿಂಬಿಸುತ್ತದೆ .ಭಾರತದಲ್ಲಿ 48 ಪ್ರತಿಶತದಷ್ಟು ಮಹಿಳೆಯರು ಸ್ವಾವಲಂಬಿ ಜೀವನವನ್ನು ನಡೆಸುತ್ತಿದ್ದಾರೆ ಎನ್ನಲಾಗಿದೆ.

ಹೊನ್ನುಂಗಾರದಲ್ಲಿ ಹೆಣ್ಣಿನ ಕತ್ತು ಹಿಸುಕಿದ್ದರೂ, ಕತ್ತಲ ಕೋಣೆಗಳು ಕನಸ ಕೊಂದರೂ ಕೂಡ ಬಿಸಿಯ  ಮರಳ ಪದೇ ಪದೇ ನೆನೆಸುವ ಅಬ್ಧಿಯ ಅಲೆಯ ತೆರದಿ ತನ್ನ ಘನತೆಯ ಬದುಕಿಗೆ ಸ್ವಾವಲಂಬನೆ ಎಂಬ ಸ್ವಾಭಿಮಾನದ ಹಣತೆಯನ್ನ ಹೊತ್ತಿಸಿದವಳು ಮಹಿಳೆ!. ವಿಪರ್ಯಾಸವೆಂದರೆ ಬರಿಯ ಮಾತಲ್ಲೇ ಹಿಡಿದುಕೊಂದು, ನಗುನಗುತ್ತಲೆ ಹಂಗಿನೂಟವ ಉಣಿಸಿ, ಅವಳ ಸ್ವಾವಲಂಬನೆಯನ್ನು ಕಿತ್ತುಕೊಳ್ಳುವ ಕ್ರೂರ ಮನಸ್ಸಿನ ಮನುಷ್ಯ ಮುಖವಾಡವನ್ನು ಹಾಕಿಕೊಂಡಿರುವ ಮೃಗಗಳು ನಮ್ಮ ನಡುವೆ ಇದ್ದಾರೆ. “ಎಲ್ಲಿ ಅವಳು ಸ್ವಾವಲಂಬನೆಯಿಂದ ಪ್ರಗತಿಯ ಪತದತ್ತ ಸಾಗಿ ಬಿಡುವಳೋ!”  ಎಂದು ಅವಳಿಗೆ ವಂಚನೆಯನ್ನು ಮಾಡುತ್ತಿದ್ದಾರೆ. ಪುಸ್ತಕ- ಪೆನ್ನು ಹಿಡಿಯಬೇಕಾದ ಕೈಗೆ ಕಸ- ಮುಸುರೆ ಪಾತ್ರೆ ಕೊಟ್ಟು ಕೂರಿಸುವ ಕುಕೃತ್ಯ ನಡೆಸಿದ್ದಾರೆ. ಇದು ತಪ್ಪಲ್ಲವೇ? ಹೆಣ್ಣು ಗಂಡು  ಒಂದೇ ನಾಣ್ಯದ  ಎರಡು ಮುಖಗಳು. ಗಂಡು ಸ್ವಾವಲಂಬನೆಯಿಂದ ಬದುಕಬಹುದಾದರೆ ಹೆಣ್ಣು ಏಕೆ ಬದುಕಬಾರದು??

ತಾಳ್ಮೆಯ ಪ್ರತೀಕವಾದ ಹೆಣ್ಣು ಕೆಲವೊಮ್ಮೆ ಬದುಕಬಂಡಿಯ ಸಾಗಿಸುವ ಆಸೆ ಹೊತ್ತು ಸ್ವಾವಲಂಬನೆಯನ್ನು ಕಟ್ಟಿಕೊಳ್ಳಹೊರಟರೆ, ಇತ್ತ ತಾಳ್ಮೆಗೆ ತರ್ಪಣ ಕೊಟ್ಟು ರಕ್ತದ ಹಾದಿಯನ್ನು  ಹಿಡಿದದ್ದೂ  ಉಂಟು. ಸ್ವಾವಲಂಬನೆಯ ಬದುಕಿಗೆ ತಾಳ್ಮೆಯು ಅವಶ್ಯಕ, ಆದರೆ ತಾಳ್ಮೆಯೇ ನೇಣು ಕುಣಿಕೆಯಾದರೆ ಹೇಗೆ? ತಾಳ್ಮೆ ಎಷ್ಟು ದಿನ ಇರಲು ಸಾಧ್ಯ! ತಾಳ್ಮೆಯಿಂದಿರುವ ಹೆಣ್ಣನ್ನು ಸಮಾಜ ಹೇಗೆ ದೂಷಿಸುತ್ತದೆ, ಸ್ವಾವಲಂಬನೆಯನ್ನು ಕಟ್ಟಿಕೊಳ್ಳ ಹೊರಟ ಆಕೆಗೆ ಜನರೇನು ಹೇಳುತ್ತಾರೆ, ತಾಳ್ಮೆ ಕೆಟ್ಟರೆ ಹೇಗೆ ಹೆಣ್ಣು ಸ್ಫೋಟಗೊಳ್ಳುತ್ತಾಳೆ, ಅವಳನ್ನು ಸಮಾಜ ಯಾವ ದೃಷ್ಟಿಯಿಂದ ನೋಡಬಹುದು ಎಂಬುವುದನ್ನು ಒಂದು ಸ್ವಅನುಭವದ ಮೂಲಕ ನಾನು ತಿಳಿಸುತ್ತೇನೆ.

ಅವರದ್ದು ಗಂಡ-ಹೆಂಡತಿ, ಮಗಳು ಮತ್ತು ಮಗನಿರುವ ಸಾಮಾನ್ಯ ಕುಟುಂಬ. ಬಿತ್ತಿಬೆಳೆದು ಉಣ್ಣಲು ಮನೆ ಹಿತ್ತಲಿನ ಬರಡು ಜಾಗವೊಂದನ್ನು ಬಿಟ್ಟರೆ ಬಿಡಿಕಾಸಿನ ಭೂಮಿ ಸಹ ಇರಲಿಲ್ಲ. ಮನೆಯ ಯಜಮಾನ ಮಂಜುನಾಥ! ಹಳ್ಳಿಯಲ್ಲಿ ಆತನನ್ನು ‘ಬುಚ್ಚ’ ಅಥವಾ ‘ಬುಚ್ಚಣ್ಣ’ ಎಂದು ಕರೆದೇ ಅಭ್ಯಾಸ. ಹೆಸರಿಗೆ ದೇವರ ಹೆಸರನ್ನು ಇಟ್ಟುಕೊಂಡಿದ್ದರೂ ಸಹ ಸ್ವಭಾವದಲ್ಲಿ ತೀರಾ ತದ್ವಿರುದ್ಧ. ಇದರ ಜೊತೆಗೆ ಅವನಿಗೆ ಅಂಟಿಕೊಂಡು ಬಂದಿರುವ ಚರಾಸ್ತಿಯೆಂದರೆ ಕೃಷಿಜೀತ, ಸ್ತಿರಾಸ್ತಿಯೆಂದರೆ ಒಂದೆರಡು ಪಾತ್ರೆಪಗಾಡಿಗಳು. ಅಸಾಧ್ಯ ಹುಟ್ಟು ಕುಡುಕನೆಂದು ಊರಿಗೇ ಕುಖ್ಯಾತನಾಗಿದ್ದ ಇವನ ಹೆಂಡತಿ ಮಕ್ಕಳ ಒಡನಾಟ ಒಂದು ರೀತಿಯಾಗಿ ನಾಯಿ-ಬೆಕ್ಕಿನ ಸಂಬಂಧ! ದಿನಬೆಳಗೂ ಹೆಂಡತಿಗೆ  ಹೊಡೆಯುವುದು, ಬಡಿಯುವುದು ಮಾಡುತ್ತಾ ಬರುತ್ತಲಿದ್ದ ಅವನಿಗೆ ಊರಿನಲ್ಲಿ ಅವನದೇ ಕುಡುಕ ಸ್ವಭಾವದ ಮೂರ್ನಾಲ್ಕು ಜನ ಸ್ನೇಹಿತರು ಅನ್ನೋನ್ಯ ಸಂಬಂಧಿಗಳಾಗಿದ್ದರು ಎನ್ನಬಹುದು.

ಬುಚ್ಚಣ್ಣನಿಗೆ ಮಗಳಾದ ನಂತರ ಮಗನಾಗುವವರೆಗೂ ಬುಚ್ಚಣ್ಣನ ಎಲ್ಲಾ ಅರ್ಭಟಗಳನ್ನು ಸಹಿಸಿಕೊಂಡಿದ್ದು ಇನ್ನೂ ತಾಳಲಾಗದೆ ‘ಗೌರಿ’ ರೋಸಿಹೋದಳು. ತನ್ನದೇ ಜಮೀನಿನಲ್ಲಿ ದುಡಿಯುವ ಭಾಗ್ಯ ಹೊಂದಿರದ ಅಕೆಯು ಕಂಡ ಕಂಡವರ ಮನೆಯವರಿಗೆಲ್ಲ ಅತ್ತೂ ಕರೆದು,ಕಾಲಿಗೆ ಬಿದ್ದು ಕೆಲಸ ಮಾಡಿ ಬಂದದ್ದೂ ಉಂಟು. ಬೆಳಿಗ್ಗೆ ತನ್ನ ಮಗ ಹಾಗೂ ಮಗಳಿಗೆ ಮನೆಯ ನಿತ್ಯದ ಕೆಲಸವನ್ನು ವಹಿಸಿ ಮುಂಜಾನೆ ಜೀತದ ಕೆಲಸಕ್ಕೆ ಹೊರಟ ಆಕೆ ಬರುವುದು ತಿಳಿಸಂಜೆಯೇ. ಬಿಸಿಲು, ಮಳೆ, ಚಳಿ, ಗಾಳಿಗಳನ್ನು ಲೆಕ್ಕಿಸದೆ ಸೊಂಟ ಬಗ್ಗಿಸಿ ಭೂಮಿಗೆ ಕೈಹಾಕಿದಳೆಂದರೆ ಮತ್ತೆ ಏಳುವುದು ಮದ್ಯಾಹ್ನದ ಊಟದ ಸಮಯಕ್ಕೇ! ಮನೆಗೆ ಬಂದ ನಂತರ ಉಳಿದ ಮನೆಕೆಲಸಗಳನ್ನು ಮುಗಿಸಿ ಅಡಿಕೆ ಸುಲಿಯಲು ಹೊರಟು ಮನೆಗೆ ವಾಪಸ್ಸಾಗುವಷ್ಟರಲ್ಲಿ ಅರ್ಧರಾತ್ರಿಯಾಗುತ್ತಿತ್ತು.

ಗಂಡನ ನಿರ್ದಾರುಣ್ಯ ಹಿಂಸೆ, ಬಡಕಲಾದ ದೇಹ, ಹೊತ್ತಿನ ಊಟಕ್ಕಾಗಿ ಪಡುತ್ತಿರುವ ಕಷ್ಟವನ್ನು ನೋಡಿ ಕನಿಕರಪಡದೆ ಇರುವ ಮನುಜರೇ ಇರಲಿಲ್ಲ. ಆದರೂ ಈಕೆಯ ಕೆಲಸದ ಅಗ್ಗಕ್ಕೆ ಬಿದ್ದವರು ಗೌರಿ ಊರ ಗೌಡನ ಜೊತೆಯಲ್ಲಿ ಮಲಗಿದ್ದಾಳೆಂದು ಕುಟುಕು ಮಾತಾಡಲು ಅವರ ಎಲುಬಿಲ್ಲದ ನಾಲಿಗೆ ಸಾಹಸವನ್ನೇನೋ ಪಡುತ್ತಿರಲಿಲ್ಲ.

ಮೈಮುರಿದು ದುಡಿಯುವ ಕೆಲಸಕ್ಕೆ ವ್ಯಾಯಾಮವೋ ಎಂಬಂತೆ ವಾರಕ್ಕೊಮ್ಮೆ ಗಂಡನ ಹೊಡೆತಗಳು ತಪ್ಪದೇ ಇರುತ್ತಿದ್ದವು. ಕೆಲವೊಮ್ಮೆ ಬುಚ್ಚಣ್ಣನು ಆಸ್ಪತ್ರೆಗೆ ದಾಖಲಾದಾಗ ಗಂಡನಿಗಾಗಿ ಅವಳ ಬಿಕ್ಕಳಿಸುವ ಅಳು ಮುಗಿಲುಮುಟ್ಟುವಂತಹವುಗಳು.

ಮಕ್ಕಳು ಬೆಳೆದು ದೊಡ್ಡವರಾಗುತ್ತಿದ್ದಂತೆ ಜಗಳ ಗಲಾಟೆಗಳು ತಾರಕವನ್ನೇರತೊಡಗಿದವು. ಬುಚ್ಚಣ್ಣನೂ ಸಹ ಮಧ್ಯಾದೇವಿಯ ದಾಸನಾಗಿ ಗೌರಿಯಂತೆ ಬಡಕಲು ಪೇತನಾಗುವುದರಲ್ಲಿದ್ದನು. ಗೌರಿಯ ಮಗನಂತೂ ಯಾವುದಕ್ಕೂ ಹಿಂದೆ ಮುಂದೆ ನೋಡುವವನಲ್ಲ! ಒಂದೆರಡು ಬಾರಿ ಪಿತೃವಿಗೆ ಸೌದೆಯಿಂದಲೋ, ತುರೇಮಣೆ ಕತ್ತಿಯಿಂದಲೋ ಹೊಡೆತಗಳ ತರ್ಪಣವನ್ನು ಕೊಟ್ಟದ್ದೂ ಉಂಟು. ಅಂತೂ ಗೌರಿಯು ಮಕ್ಕಳ ಪರವಾಗಿಯೂ ನಿಲ್ಲಲಾಗದೆ, ಪಾತಿವ್ರತ ಧರ್ಮವನ್ನೂ ಮೀರಲಾಗದೆ ಕಕ್ಕಾಬಿಕ್ಕಿಯಾಗಿದ್ದಳು. ಹೀಗೆ ಸಾಗುತ್ತಿತ್ತು ಗೌರಿಯ ಹಾಗೂ ಆಕೆಯ ಮನೆಯ ದಿನಚರಿ!

ಒಂದು ದಿನ ಊರ ತುಂಬೆಲ್ಲಾ ವಿನೂತನ ಸುದ್ದಿಯೊಂದು ಕೇಕೆಹಾಕತೊಡಗಿತು. ಮನೆಯ ಜಗಲಿ ತುಂಬೆಲ್ಲಾ ರಕ್ತದ ಮಡು. ಗೌರಿಯ ತವರುಮನೆಯವರು, ಊರ ಮುಖ್ಯಸ್ಥರು, ಜನಗಳು ಓಡೋಡಿ ಗೌರಿಯ ಮನೆಯ ಕಡೆಗೆ ಧಾವಿಸುತ್ತಿದ್ದರು. ಕಂಡವರೆಲ್ಲ “ಅಯ್ಯೋ, ದೇವ್ರೆ ಎಂತ ಕಾಲ ಬಂತಪ್ಪಾ!”ಅಂದವರೇ. . ಬುಚ್ಚಣ್ಣನ ತಮ್ಮನ ಹೆಂಡತಿ ಎಲೆ, ಅಡಕೆ ಹಾಕಿ ತುಪ್ಪುತ್ತ- ಕ್ಯಾಕರಿಸುತ್ತ ಆಕಾಶ-ಭೂಮಿ ನಡುಗುವಂತೆ ಬೊಂಬಾಯಿ ತೆರೆದು, “ ಅವಳ ಕುಲನಾಶ ಅಗೋಗ,ಅವ್ಳ್ ಕಾಲಿಗೆ ಹುಳಾ ಬೀಳಾ, ನೀನು ಹಾಳಾಗಿ ಹೋಯ್ತಿಯಾ ” ಎಂದು ಬೈಯುತ್ತ ಅರ್ಭಟಿಸುತ್ತಿದ್ದಳು! ಅಲ್ಲಿಂದ ಮರಳಿ ಬಂದವರ ಬಾಯಲ್ಲಿ ಬಂದದ್ದು ಒಂದೇ ಮಾತು –‘ಅಯ್ಯೋ, ಏನ್ ಕಾಲ ಬಂತಪ್ಪಾ, ಹಾಳಾದ್  ಗೌರಿ ಗಂಡನ್ನೇ ತಿಂದ್ಳಲ್ಲಪ್ಪಾ!”

ಈ ರೀತಿಯಾದರೆ ಯಾವ ಹೆಣ್ಣು ತಾನೇ ಸ್ವಾವಲಂಬನೆಯ ಬದುಕನ್ನ ಕಟ್ಟಿಕೊಳ್ಳಲು ಸಾಧ್ಯ? ಸ್ವಾವಲಂಬನೆಗೆ ಅಡ್ಡಲಾಗಿ ಸಮಾಜವೆಂಬ ನಾಣ್ಯದ ಇನ್ನೊಂದು ಮುಖವಾದ ಪುರುಷ ಪ್ರಧಾನ ಅಂಶಗಳು  ಮುಳ್ಳಿನ ಹಾದಿಗಳಾಗುತ್ತವೆ.  ಈ ರೀತಿಯಾಗಿ ಮಹಿಳೆಯ ತಾಳ್ಮೆಗೆ ಕತ್ತಲು ಕವಿದಾಗ ಅವಳ ಘನತೆಯು ವೃದ್ಧಿಸುವುದಾದರೂ ಹೇಗೆ?

ಹೆಣ್ಣಾಗಿ ಜೀವನ ನಡೆಸುವುದು ಸುಲಭದ ಆಟವಲ್ಲ. ಪ್ರತಿದಿನ ಸೂರ್ಯನಾಗಿ ಹುಟ್ಟಬೇಕಾಗುತ್ತದೆ, ಎದುರಿಗೆ ಘನವಾದ ಕತ್ತಲೆ ಇದ್ದರೂ ಎಲ್ಲರ ಜೀವನದಲ್ಲಿ ಬೆಳಕನ್ನು ಕೊಡಬೇಕಾಗುತ್ತದೆ. ಅಂತಹ ಹೆಣ್ಣೆಂಬ ಶಕ್ತಿಯ ಪ್ರಗತಿಗೆ ಪೂರಕವಾದ ಅಂಶಗಳಲ್ಲಿ ಸ್ವಾವಲಂಬನೆಯಿದ ಸಿಗುವ ‘ಘನತೆಯು’ ಮೊದಲನೆಯದಾಗಿ ನಿಲ್ಲುವ ಅಂಶವಾಗಿದೆ. ಘನತೆಯ ಬದುಕಿಗೆ ಸ್ವಾವಲಂಬನೆಯ ಅಂಶ ಹೇಗೆಲ್ಲಾ ಅವಶ್ಯಕತೆಯಾಗಿದೆ ಎಂಬುವುದನ್ನು ನೋಡುವುದಾದರೆ, ಸ್ವಾವಲಂಬನೆಯಿಂದಾಗಿ ಮಹಿಳೆಯರು ಶಿಕ್ಷಣ ಪಡೆಯುವಂತಾಗಿ, ಮಹಿಳಾ ಅನಕ್ಷರಸ್ಥರು ಕಡಿಮೆಯಾಗಿ ಅಕ್ಷರಸ್ಥರು ಹೆಚ್ಚಾಗುತ್ತಾರೆ.  ನೇಮಿಚಂದ್ರ, ಡಾ. ಅನುಪಮ ನಿರಂಜನ. ಸಾರಾ ಅಬೂಬಕ್ಕರ್ ಮುಂತಾದವರು ನಮ್ಮ ನಡುವೆಯೇ ಶೈಕ್ಷಣಿಕವಾಗಿ ಸಾಧನೆ ಮಾಡಿರುವ ಹಲವಾರು ಮಹಿಳೆಯರು, ಇವರೆಲ್ಲರು ಸರ್ವರಿಗೂ ಮಾದರಿಯಾಗಿದ್ದಾರೆ.

ಸ್ವಾವಲಂಬನೆಯಿಂದಾಗಿ ಆರ್ಥಿಕವಾಗಿ ಮಹಿಳೆಯರು ಬಲಗೊಳ್ಳುತ್ತಾರೆ, ಇದರಿಂದ ತನ್ನನ್ನು ಮತ್ತು ತನ್ನ ಕುಟುಂಬದ ಆರ್ಥಿಕತೆಗೆ ಸಹಾಯವಾಗುತ್ತದೆ. ಮಹಿಳೆ ಎಷ್ಟೋ ಬಾರಿ ಪುರುಷರಿಗೂ ಸಹ ಆರ್ಥಿಕವಾಗಿ ಸಹಾಯ ಮಾಡಿರುವುದುಂಟು.

ಸುಧಾ ಮೂರ್ತಿ, ಕಿರಣ್ ಮಜುಂದಾರ್ ಶಾ ,ಇಂದ್ರನೋಹಿ, ವಂದನಾ ಲುತ್ರ ಇವರುಗಳು ಆರ್ಥಿಕವಾಗಿ ತನ್ನ ಸಂಸ್ಥೆಗೂ , ದೇಶಕ್ಕೂ ಹಲವು ಕೊಡುಗೆಗಳನ್ನು ನೀಡಿದ್ದಾರೆ.

ಸ್ವಾವಲಂಬನೆಯಿಂದ ಸಾಮಾಜಿಕವಾಗಿ ಸಮಾನತೆಯ ಹಾದಿಯಲ್ಲಿ ಗಂಡನ ಜೊತೆ ಪಯಣ ಸಹಾಯಕವಾಗುತ್ತದೆ. ಹೇಗೆ ಒಂದು ಬಂಡಿಯ ಎರಡು ಚಕ್ರಗಳು ಸಮಾನವಾಗಿ ಒಂದೇ ರೀತಿಯಲ್ಲಿ ಸಾಗುತ್ತದೆಯೋ ಹಾಗೆ ಸ್ವಾವಲಂಬನೆಯಿಂದ ಪುರುಷ ಮಹಿಳೆ ಒಟ್ಟಿಗೆ ಸಾಗಿದರೆ ಅದರ ಮಾತೇ ಬೇರೆ ಅಲ್ಲವೇ?   ಕಿರಣ್ ಬೇಡಿ, ಕಮಲಾ ದಾಸ್ ಮುಂತಾದವರನ್ನು ನೋಡಿ ನಾವು ಕಲಿತುಕೊಳ್ಳಲೇಬೇಕು ಎಂದನಿಸುವುದಂತೂ ನಿಜ!

ರಾಜಕೀಯವಾಗಿ ಸ್ವಾವಲಂಬನೆ ಆಗುವ ಮೂಲಕ ತನ್ನ ಸುತ್ತಲಿನ ಮತ್ತು ರಾಜ್ಯದ ದೇಶದ ಪ್ರಗತಿಯ ಪಥದತ್ತ ಕರೆದುಕೊಂಡು ಹೋಗಲು ಸ್ವಾವಲಂಬನೆಯಿಂದ ಕೂಡಿದ ಮಹಿಳೆಯ ಘನತೆಯು ಸಹಾಯ ಮಾಡುತ್ತದೆ. ರಾಜಕೀಯವಾಗಿ ರಾಣಿಯ ತೆರದಿ ಬದುಕಿರುವುದನ್ನು , ಬದುಕುತ್ತಿರುವುದನ್ನು ಸಹ ನಾವು ನೋಡಬಹುದು. ಉದಾಹರಣೆಗೆ ಸರೋಜಿನಿ ನಾಯ್ಡು, ಇಂದಿರಾಗಾಂಧಿ, ನಿರ್ಮಲಾ ಸೀತಾರಾಮನ್, ದ್ರೌಪದಿ ಮುರ್ಮು, ಇವರುಗಳು ರಾಜಕೀಯವಾಗಿ ಸ್ತ್ರೀಶಕ್ತಿಯಾಗಿ ಹೊರಹೊಮ್ಮಿದರು.

ಸ್ವಾವಲಂಬನೆಯಿಂದ ಕ್ರೀಡೆಯಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸಿರುವ ಧೀರ ಮಹಿಳೆಯರನ್ನು ಸಹ ನಾವು ನೋಡಿದ್ದೇವೆ. ಚಿನ್ನ ಬೆಳ್ಳಿ ಕಂಚನ್ನು ಭಾರತಮಾತೆಯ ಕೊರಳಿಗೆ ಹಾಕಿದ ಎಷ್ಟೋ ಮಹಿಳೆಯರು ನಮಗೆ ಸರಿಸಾಟಿ ಇಲ್ಲವೆಂದು ತೋರಿಸಿಕೊಟ್ಟರು. ಉದಾಹರಣೆಗೆ ಪಿವಿ ಸಿಂಧು ,ಸೈನಾ ನೆಹ್ವಾಲ್, ಮಮತಾ ಪೂಜಾರಿಯಂತಹ ಮಹಾನ್ ಮಹಿಳೆಯರು ಪ್ರತೀ ಹೆಣ್ಣು ಕುವರಿಯರ ಪ್ರೇರಣೆ.

ಲತಾ ಮಂಗೇಶ್ಕರ್  (ಸಂಗೀತ), ರುಕ್ಮಿಣಿ  ದೇವಿ ( ಭರತನಾಟ್ಯ) ಮುತಾದವರು ಸ್ವಾವಲಂಬನೆಯ ಮೂಲಕ ಸಾಂಸ್ಕೃತಿಕ ಕ್ಷೇತ್ರವನ್ನು ರಾರಾಜಿಸುವಂತೆ ಮಾಡಿ ಘನತೆಯ ಸಂಕೇತವನ್ನು ಮಿಂಚಿಸಿದಂತಹ  ಮಹಿಳೆಯರು ನಮ್ಮ ನಡುವೆ ಇದ್ದಾರೆ

ಒಟ್ಟಿನಲ್ಲಿ ಆಕೆಗಿರುವ ಧೈರ್ಯ, ಸ್ಥೈರ್ಯ ಜೊತೆಗೆ ಸ್ವಾವಲಂಬನೆಯು ಸೇರಿದಾಗ ಮಗಳಾಗಿ, ಮಡದಿಯಾಗಿ, ತಾಯಿಯಾಗಿ, ಶ್ರೇಷ್ಠ ಮಹಿಳೆಯಾಗಿ ಹತ್ತು ಹಲವು ಕಾರ್ಯಗಳನ್ನು ಮಾಡುತ್ತಾಳೆ.ಆಕೆಯ ಸಾಮರ್ಥ್ಯಕ್ಕೆ ಆಕೆಯೇ ಸರಿಸಾಟಿಯಾಗುತ್ತಾಳೆ.

ಹೆಣ್ಣಿನ ಪೂರಕ ಶಕ್ತಿಯಾಗಿರುವ ಸ್ವಾವಲಂಬನೆ ಇಲ್ಲದಿದ್ದರೆ ಅವಳ ಸ್ಥಿತಿ ಏನಾಗುತ್ತದೆ ಎಂದು ಒಮ್ಮೆ ಅವಲೋಕನ ಮಾಡಿದರೆ, ಅವಳಿಗಾಗುವ ತೊಂದರೆಯಿಂದ ಇಡೀ ಪ್ರಪಂಚಕ್ಕೆ ಬಾರುಕೋಲಿನ ಹೊಡೆತ ಬಿದ್ದಂತಾಗುತ್ತದೆ. ಸ್ವಾವಲಂಬನೆ ಇಲ್ಲದಿದ್ದರೆ ಅಂದಿನ ಅನಿಷ್ಠ ಪದ್ಧತಿಗಳಾದ ವರದಕ್ಷಿಣೆ, ಸತಿ ಪದ್ಧತಿ ಇನ್ನೂ ಕೂಡ ತನ್ನ ಅಟ್ಟಹಾಸವನ್ನು ಮೆರೆಸುತ್ತಿತ್ತು. ಸ್ವಾವಲಂಬನೆ ಇಲ್ಲದಿದ್ದರೆ ನಾಲ್ಕು ಗೋಡೆಯ ಮಧ್ಯೆಯೇ ಕೀಲಿ ಹಾಕಿಕೊಂಡು ಕೂರಬೇಕಾಗುತ್ತಿತ್ತು. ಹಾರುವ ರೆಕ್ಕೆಗಳಿದ್ದರೂ ಗಗನದೆತ್ತರಕ್ಕೆ ಹಾರುವ ಸಾಮರ್ಥ್ಯವಿದ್ದರೂ ಕೂಡ ಪಂಜರದ ಹಕ್ಕಿಗಳಾಗಿ ಜೀವನ ನಡೆಸಬೇಕಾಗುತ್ತಿತ್ತು.

‘ಸ್ವಾವಲಂಬಿ ಜೀವನ ಸಾರ್ಥಕತೆಯ ಸಂಕೇತ’ ಎನ್ನುವ ಮಾತಿನ ಪ್ರಕಾರ ಸ್ವಾವಲಂಬನೆ ಇಲ್ಲದಿದ್ದರೆ ಮಹಿಳೆಯ ಬದುಕಿಗೆ ಮತ್ತು ದೇಶದ ಸರ್ವತೋಮುಖ ಬದುಕಿಗೂ ಅಡ್ಡಿಯಾಗಿ ನಿಲ್ಲುವ ಮೊದಲ ಅಂಶ ಅವಲಂಬನೆಯಾಗಲಿದೆ. ಹಾರುವ ಹಕ್ಕಿಗೆ ರೆಕ್ಕೆ ಇಲ್ಲದಂತಾಗುತ್ತದೆ. ಕನಸುಗಳನ್ನು ಕಣ್ಣೊಳಗೇ ಕೊಂದುಕೊಳ್ಳಬೇಕಾಗುತ್ತದೆ. ಚಿಗುರಿದ ಆಸೆಗಳನ್ನು ಮನದೊಳಗೆ ಚಿವುಟಬೇಕಾಗುತ್ತದೆ. ಒಲ್ಲದ ಮನಸ್ಸು ಇದ್ದರೂ ಒಲ್ಲೆನೆಂದು ಹೇಳಲಾರದೆ ‘ಬದುಕು  ಜಟಕಾಬಂಡಿ ಗಂಡು ಅದರ ಸಾಹೇಬ’ ಎಂದು ಜೀವನವನ್ನು ಕಳೆಯಬೇಕಾಗುತ್ತದೆ ಎಚ್ಚರ!!

 

ಸಂಧ್ಯಾ ಕೆ ಕೆ  &  ರಕ್ಷಿತ್ಹೆಚ್. ಆರ್

ವಿದ್ಯಾರ್ಥಿಗಳು

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು – ಶಿವಮೊಗ್ಗ

ಪ್ರೀತಿಯ ತೋರಣ

 

Image Credit : Google.com

ಬೆಳಗಿನ ಬೆಳಕಿನ ನಿಶ್ಯಬ್ದ ಝೇಂಕಾರದಲಿ,

ನಿನ್ನ ನೆರಳು ಮೃದುವಾಗಿ ಮರೆಯಾಯಿತು ನನ್ನ ದೃಷ್ಟಿಯಲಿ,

ಮೆಲ್ಲನೆ ಹೆಚ್ಚರಿಸುವೆ ನಿನ್ನ ಪ್ರೀತಿಯ ನನ್ನ ಹಾಡಿನಲಿ,

ಅದು ದೀರ್ಘಕಾಲ ಉಳಿಯುವುದು ನಮ್ಮ ಹೃದಯಗಳಲಿ.

 

ಸಂಜೆಯ ತಂಗಾಳಿಯ ಒಂದು ಪಿಸುಮಾತಿನಲಿ,

ಆತ್ಮವನು ನಿರಾಳವಾಗಿಸುವುದು ನಿನ್ನಯ ನೋಟದಲಿ,

ಸಾಮರಸ್ಯದಲ್ಲಿರುವ ಎರಡು ಆತ್ಮಗಳು ಭೇಟಿಯಲಿ,

ಕಾಣುವುದು ನಗುವಿನ ಸಿಹಿ ನಮ್ಮ ಮೊಗದಲಿ.

 

ಪ್ರೀತಿ ಮಳೆಯ ಲಯವಾಗಲಿ,

ಶಮನಗೊಳಿಸುವುದು ನಮ್ಮಯ ನೋವನು ಆಳದಲಿ,

ಬೇಸಿಗೆಯ ಉಷ್ಣವಿರಲಿ ಅಥವಾ ಚಳಿಗಾಲದ ಶೀತದಲಿ,

ನಿನ್ನಯ ಸ್ಪರ್ಶವೆ ಸಾಕಿನ್ನು ನನ್ನ ಕೈಗಳಲಿ.

 

ಭಾಷೆಯು ಮೌನವಾಗಲಿ , ಕಣ್ಣುಗಳು ಮಾತಾಗಲಿ

ಪ್ರೀತಿಯ ಭಾವದಲ್ಲಿ ಹೃದಯಗಳು ಸ್ಪಷ್ಟವಾಗಿರಲಿ

ತಾಳ್ಮೆ, ದಯೆ ಮತ್ತು ಅಂತ್ಯವು ನೀನಾಗಿರಲಿ,

ನನ್ನಯ ಪ್ರೇಮಿಯ ಕಾಣುವೆ ಸದಾ ಮನದಲಿ.

 

ನಮ್ಮಯ ಪ್ರೀತಿ ನಿತ್ಯ ಮಿನುಗುವ ನಕ್ಷತ್ರವಾಗಲಿ,

ನಮ್ಮ ಜೀವವೇ ನಿಮಗೆ ಸ್ಫೂರ್ತಿಯಾಗಲಿ,

ಕಾಣಿಸುವೆವು ನಾವು ನಮ್ಮ ತ್ಯಾಗದ ಬೆಳಕಿನಲಿ,

ಸದಾ ಇರುವೆವು ನಾವು ಜೊತೆಯಲಿ , ಜೊತೆ ಜೊತೆಯಲಿ……!

 

ಮಂಜುನಾಥ್. ಎಸ್

ಸಹಾಯಕ ಪ್ರಾಧ್ಯಾಪಕರು, ಮನೋವಿಜ್ಞಾನ ವಿಭಾಗ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ