ಯುಗಾದಿ ಎಂಬ ಹರುಷ 🌅

Image Credit: google.com

ಯುಗಾದಿ ಎಂಬ ಹರುಷ 🌅

     ತುಂಬಾ ದಿನದಿಂದ ಕಾಯ್ತಾ ಇದ್ದೆ. ಎಂತಕ್ ಅಂತನಾ? ನಮ್ ಹೊಸ ವರ್ಷ ಯಾವಾಗ್ ಬರತ್ತೋ ಅಂತ ಅಂದ್ರೆ ನಮ್ ಸಂತಸದ ಹಬ್ಬ ಅದೇ ಯುಗಾದಿ 💫.

     ಯುಗಾದಿ ಅಂದ್ರೆ ಖುಷಿ, ಎಲ್ಲಿಲ್ಲದ ಉತ್ಸಾಹ. ಹಾಗಾದ್ರೆ ಏನಕ್ಕೆ ಇಷ್ಟೊಂದು ಆತುರದಿಂದ ನಾನ್ ಈ ಹಬ್ಬಕ್ಕೆ ಕಾಯ್ತಿರದು ಅಂತನಾ? ಹೌದು “ಹಳೆ ನೆನಪುಗಳೊಂದಿಗೆ ಹೊಸ ಯುಗಾದಿ, ಹೊಸ ಯುಗಾದಿಯಲ್ಲಿ ನವ ನೆನಪನ್ನ ಮೂಡಿಸೋಣ ಅಂತ”.ಸಣ್ಣವರಿದ್ದಾಗ ಅಜ್ಜ ಅಜ್ಜಿ, ಆ ಹಳ್ಳಿ, ಹಳ್ಳಿಯ ಸ್ನೇಹಿತರು, ಏನೆಲ್ಲಾ ತರ್ಲೆ, ತುಂಟಾಟ, ಕಿತ್ತಾಟ, ಅಬ್ಬಬ್ಬಾ! ಹಂಗೆ ಸರ್ಯಾಗ್ ಹಬ್ಬದ್ ನಮ್ ಗಲಾಟೆ ಪ್ರಯುಕ್ತ ನಮ್ಮೆಲ್ಲರಿಗೂ ಬಿಸಿಬಿಸಿ ಕಜ್ಜಾಯ, ಕಡುಬು ಕೂಡ ಸಿಕ್ತಿತ್ತು.      

ಅದೇ ಈಗ ನಾವೆಲ್ಲ ಕಾಲೇಜ್ ಸ್ಟೂಡೆಂಟ್ಸ್ ಅಲ್ವಾ? ಅಪ್ಪ ಅಮ್ಮ ಬೈದ್ರೆ, ಬುದ್ದಿ ಹೇಳಿದ್ರೆ ನಾವೇನ್ ಮಕ್ಳ? ಅಂತ ಕೂಗಾಡೋ ನಾವು ಹಬ್ದಲ್ಲಿ ಹಳೆ ನೆನಪಲ್ಲಿ ಸಣ್ಣವ್ರಾಗ್ಬಿಡ್ತಿವಿ. ಹಬ್ಬಗಳಲ್ಲಿ ಮೊದಲ್ನೆ ಹಬ್ಬನೇ ಯುಗಾದಿ ಹಿಂದೂಗಳಿಗೆ ಹೊಸ ವರ್ಷ. ಗೊತ್ತಲ್ವಾ? ಬೇಸಿಗೆ ಕಾಲ ಕತ್ತಲೆಗೆ ಅವಕಾಶನೇ ಇಲ್ಲ. ಅದೇ ಕಂಡ್ರೀ ನಮ್ ಯುಗಾದಿ special.

ಅಷ್ಟಲ್ದೆ ನಮ್ ದ. ರಾ. ಬೇಂದ್ರೆ ಅವ್ರು ಹೇಳ್ತಾರಾ?

“ಯುಗಾ ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ. 💕

ಹೊಸ ವರುಷಕೆ ಹೊಸ ಹರುಷವ

ಹೊಸತು ಹೊಸತು ತರುತಿದೆ”. 💫

ಅಬ್ಬಾ!! ಅಂತೂ ಯುಗಾದಿ ಬಂದೇ ಬಿಡ್ತು.. ಹೊಸ ಭರವಸೆಗಳನ್ನ ಹೊತ್ತು ತರ್ತಾ ಇದೆ. ಹಿಂದೆಲ್ಲಾ ಅಜ್ಜ ಅಜ್ಜಿ ಮುಂಜಾನೆ ನೇ ಎದ್ದೇಳಿ ಅಂತ ಬಂದ್ರೆ ಮತ್ತೆ bed sheet ಮುಚ್ ಹಕೊಂಡ್ ಮಲ್ಗ್ ತಿದ್ವಿ.. ಆದ್ರೂ ಎಬ್ಸಿ ಒಳ್ಳೆ ಎಣ್ಣೆ ಸ್ನಾನ ಮಾಡ್ಸಿ ಹೊಸ ಬಟ್ಟೆ ಅದು ಅಜ್ಜಿ ಸೀರೆಲಿ ಹೊಲ್ಸಿದ್ ಎಂತ ಕುಷಿ ನೆನಪಾದರೆ..ಆಮೇಲೆ ದೇವಸ್ಥಾನ ಹೋಗಿ ವಾವ್!! ಅದೆಲ್ಲ ಈಗ ಬರೀ ನೆನಪಾಗಿ ಇದೆ ಅಷ್ಟೇ😕.. ಈಗ ನಾವೇ ಎದ್ದು ಸ್ನಾನ ಮಾಡಿ ಒಟ್ರಾಶಿ ತಲೆ ಬಾಚ್ಕೊಂಡ್, ಬೇವು ಬೆಲ್ಲ ತಯಾರಿಸಿ, ದೇವಸ್ಥಾನ ಹೋಗ್ ಬಂದು , ಎಲ್ಲರ್ಗು ಬೇವು ಬೆಲ್ಲ ಕೊಟ್ಟು”ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ”ಅನ್ನದು.. ಹಾಗಾದ್ರೆ ಬೇವು ಬೆಲ್ಲದ ಮೂಲಕ ಈ ಜೀವನದಲ್ಲಿ ಬೇವಿನ್ ತರ ಕಹಿ ಘಟನೆಗಳು, ಕಷ್ಟಗಳು ಇದ್ದೆ ಇರುತ್ತೆ, ಅಷ್ಟಕ್ಕೇ ಬೇಜಾರ 😁 ಅದ್ರು ಜೊತೇನೆ ಬೆಲ್ಲದ ತರ ಖುಷಿ, ನೆಮ್ಮದಿ, ಸುಖ, ಸಿಹಿ ನೆನಪುಗಳು ಇರ್ತಾವೆ ಅಲ್ವಾ 😁 ನಗ್ರಿ ಹಾಗಾದ್ರೆ ನಗ್ತಾ ಇರಿ… ಕಷ್ಟ ಬಂದಾಗ ಕುಗ್ದೆ ಸುಖ ಬಂದಾಗ ಹಿಗ್ದೆ ಕಷ್ಟ, ಸುಖ ಎರಡನ್ನೂ balance ಮಾಡ್ತಾ ನಗ್ತಾ ಇರಿ ನಗುಸ್ತ ಇರಿ 🪄.

ಒಹ್ ದೇವಸ್ಥಾನ ಇಂದ ಬಂದ್ದ್ಮೆಲ್ ಏನ್ ಮಾಡದು ಹೇಳಿಲ್ಲ ಅಲ್ವಾ? ಇದೆ ಅಲ್ವಾ snap, photos, ಅಯ್ಯೋ insta reels ಮಾಡಿ ಯುಗಾದಿ ನ ಧಾಮ್ ಧೂಮ್ ಅಂತ celebreate ಮಾಡಣ..

ಹೊಸ ವರ್ಷದ ಪ್ರಯುಕ್ತ ನಿಮ್ಮೆಲ್ಲಾ “ಹಳೆಯ ಕಹಿ ನೆನಪು , ತಪ್ಪು ತಿಳುವಳಿಕೆ, ನೋವು, ಕೋಪ, ಪಶ್ಚಾತಾಪ, ಭಯ, ತಿರಸ್ಕಾರ, ಸೋಲು, ಶತ್ರುತ್ವ, ತಪ್ಪುಗಳು, negative feelings, ಇದೆಲ್ಲ account ನ close ಮಾಡಿ “ಪ್ರೀತಿ, ನಂಬಿಕೆ, ಸಾಧನೆ, positive attitude, ಖುಷಿ ಎಂಬ account ನ open ಮಾಡಿ..

” ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.🪄. ಬೇವು ಬೆಲ್ಲ ತಿಂದು ಒಳ್ಳೆ ಮಾತಾಡಿ. ಹಳೆಯ ಕಹಿ ನೆನಪನ್ನ ಮರ್ತು ಖುಷಿಯಾಗಿರಿ”. ♥️.. ನಗ್ತಾ ಇರಿ ನಗುಸ್ತಾ ಇರಿ 🪄..

ಮಧುಶ್ರಿ,

ದ್ವೀತಿಯ ಬಿ ಎ ವಿಧ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಮರೆಯಾದ ಕರಿಯ

Image Credit: anime.desktopnexus.com

ಅವತ್ ಒಂದ್ ದಿನ ಹಿಂಗೆ ಏನೋ ಯೋಚ್ನೆ ಮಾಡ್ತಾ ರಸ್ತೇಲಿ ನೆಡ್ಕೊಂಡ್ ಹೋಗ್ತಾ ಇದ್ದೆ.. ಹಾಗೆ ಸೈಡ್ ಅಲ್ಲಿದ್ದ ಒಂದ್ ಕ್ಯಾಸೆಟ್ ಅಂಗಡಿ ಕಡೆ ನೋಡ್ದೆ.. ಅಲ್ಲೊಬ್ಬ ಕರಿಯ ನಿಂತಿದ್ದ.. ನೊಡಕೇನೋ ಡುಮ್ಮುಗೆ ಕರ್ರುಗೆ ಇದ್ದ, ಆದ್ರೂ ನಂಗ್ ಇಷ್ಟ ಆದ. ಅದೇ ಗುಂಗಲ್ಲಿ ಮನೆಗ್ ಹೋದೆ. ಸಂಜೆಯೆಲ್ಲ ಅವ್ನೆ ಆ ಕರಿಯನೇ ಕಣ್ಮುಂದೆ ಬರ್ತಾ ಇದ್ದ..

ಮಾರನೆ ದಿನ ಕಾಲೇಜ್ ಗೆ ಹೋಗ್ತಾ ಇದ್ದೆ ಮತ್ತೆ ಅದೆ ರಸ್ತೆ. ಒಂದ್ಸಲ ಕ್ಯಾಸೆಟ್ ಅಂಗಡಿ ಕಡೆ ತಿರುಗ್ ನೋಡ್ದೆ, ನಿನ್ನೆ ನೋಡಿದ ಆ ಕರಿ ಸುಂದ್ರ ಅಲ್ಲಿರ್ಲಿಲ್ಲ.. ಬಿಡು, ಏನ್ ದಿನ ಕಾಣ್ತಾನ? ಅನ್ಕೊಂಡು ನಿರಾಸೆ ಇಂದ ಕಾಲೇಜ್ ಗೆ ಬಂದೆ. ಕಾಲೇಜ್ ಮುಗೀತು ನನ್ ಫ್ರೆಂಡ್ ಜೊತೆ ಮನೆಗ್ ಹೊರಟೆ.. ಮತ್ತೆ ಅದೆ ರಸ್ತೆ ಈ ಸಲ ಕ್ಯಾಸೆಟ್ ಅಂಗಡಿ ಕಡೆ ನೋಡಕೇನು ಹೋಗಿಲ್ಲ, ಸ್ವಲ್ಪ ಮುಂದೆ ಹೋದೆ. ಕಣ್ಮುಂದೆ ಅದೇ ಚೆಲುವ ನಿಂತಿದ್ದ.. ಖುಷಿ ಆಗೋಯ್ತು. ಹಿಂಗೆ ದಿನ ಕಳೆಯಿತು.. ನಂಗೂ ನನ್ ಕರಿಯಂಗು ಒಳ್ಳೆ ಸ್ನೇಹ ಬೇಳಿತು ಆದ್ರೆ ಅದು ಬರೀ ಕಣ್ಣಿನ ನೋಟದಲ್ಲೇ ಇದ್ದಿದ್ದು. ಒಂದ್ ದಿನ ಸಂಜೆ ಕಾಲೇಜ್ ಇಂದ ಮನೆಗ್ ಹೋಗ್ತಾ ಇದ್ದೆ ನನ್ ಬಾಕ್ಸ್ ಲಿ ಇದಿದ್ ಮೊಸ್ರನ್ನ ನ ಅವ್ನ್ ಗೆ ಕೊಟ್ಟೆ.. ಖುಷಿಯಾಗಿ ತಿಂದ..

ಮಾರನೆ ದಿನ ಸಿಕ್ಕಾಪಟ್ಟೆ ಖುಷಿಲಿ ಕರಿಯನ್ ನೋಡೋಕೆ ಅಂತಾನೆ ಕಾಲೇಜ್ ಗೆ ಅಬ್ಸೆಂಟ್ ಆಗಿ ಹೋದ್ರೆ, ಆ ಕರಿಯ ಅಲ್ಲಿರ್ಲೆ ಇಲ್ಲ.. ಹಿಂಗೆ 4 ದಿನ ಕಳಿತು… ಆ ನನ್ ಸುಂದ್ರ ಸಿಗ್ಲೆ ಇಲ್ಲ.. 5 ನೆ ದಿನ ಏನಾದ್ರೂ ಆಗ್ಲಿ ಅಂತ ಕ್ಯಾಸೆಟ್ ಅಂಗಡಿ ಅಣ್ಣಗೆ ಕರಿಯ ಬಗ್ಗೆ ಕೇಳ್ದೆ.

“ರಸ್ತೇಲಿ ಒಂದ್ ಬೈಕ್ ಸ್ಪೀಡ್ ಆಗಿ ಬಂತು ಕರಿಯ ಅದುಕ್ ಸಿಕ್ಕಿ ನರಳಿ ನರಳಿ ಜೀವ ಬಿಟ್ಟ, ನಾನ್ 2 ವರ್ಷದಿಂದ ಆ ನಾಯಿ ಮರಿ ಸಾಕಿದ್ದೆ..”ಅಂತ ಹೇಳ್ತಾ ಆ ಅಣ್ಣ ಅವ್ರ ಕೆಲಸದಲ್ಲಿ ತೊಡಗಿದ್ರು. ಅವತ್ತಿಂದ ಯಾವ ಬೈಕ್, ಕಾರ್ ನೋಡಿದ್ರೂ ಕರಿಯಂದೆ ನೆನ್ಪು. ನಮ್ ಮನೆಲು ಒಬ್ಬ ಕೆಂಪ ಇದ್ದ, ಮನೆಬಿಟ್ ಹೋಗಿ ಒಂದ್ ತಿಂಗಳಾಯ್ತು.. ಕರಿಯ ನ ಹಾಗೆ ಸತ್ನ? ಜೀವಂತ ಇದಾನ? ಅವ್ನ್ Girlfriend ಜೊತೆ ಓಡಿ ಹೋದ್ನ? ಒಂದು ತಿಳಿತಿಲ್ಲ..

“ಅವ್ರು ನಮ್ ಹಾಗೆ ಜೀವಿಗಳು. ಎಲ್ಲಾ ಜೀವಕ್ಕೂ ಜೀವಿಸಕ್ಕೆ ಅವಕಾಶ ಮಾಡ್ಕೊಡಿ, ಜೀವಿಸಿ ಜೀವಿಸಲು ಬಿಡಿ ಈ ತರ ಕರಿಯ ಸಾಯುವಾಗ ಹೇಳಿರ್ ಬಹುದೇನೋ? ಆಲ್ವಾ? ಯೋಚ್ನೆ ಮಾಡಿ.. ನಾವೇನೋ ನಮ್ ಖುಷಿ ಗೆ ಸ್ಪೀಡ್ ಆಗಿ ಹೋಗ್ತೀವಿ, ನಮಗೂ ಕನಸುಗಳಿವೆ ಖುಷಿ ಪಡೋಕ್ ಏನೆಲ್ಲಾ ಮಾಡ್ತೀವಿ ಅಲ್ವಾ? ಹಾಗೇ ಆ ಮುಗ್ಧ ಜೀವಿಗಳಿಗೂ ಕನಸುಗಳಿವೆ, ಆಸೆಗಳಿವೆ, ಬದುಕುವ ಹಕ್ಕಿದೆ..

ನಾವ್ ಜಾಗರೂಕವಾಗಿ ಇರೋದ್ರಿಂದ ಸಮಾಜದಲ್ಲಿ ನಾವು ತಲೆ ತಗ್ಗಿಸೋ ಸಂದರ್ಭ ನೂ ಬರಲ್ಲ, ಮುಗ್ಧ ಜೀವಿಗಳ ಶಾಪಕ್ಕು ಒಳಗ್ ಆಗಲ್ಲ..

“ಇಷ್ಟೇ , ಇನ್ನೇನ್ ಇಲ್ಲ… ನೋಡಿ ಒಮ್ಮೆ ಈ ವಾಹನಗಳ ಚಾಲನೆ ಬಗ್ಗೆ ನೀವೇ ಯೋಚ್ನೆ ಮಾಡಿ.. ಯೋಚ್ನೆ ಮಾಡ್ತೀರಾ ಅಲ್ವಾ???

” ಮುಗ್ಧಜೀವಿಗಳನ್ನು ಉಳಿಸೋಣ..”.

ಮಧುಶ್ರಿ,

ದ್ವೀತಿಯ ಬಿ ಎ ,  ವಿಧ್ಯಾರ್ಥಿನಿ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ

ಮಂಜಿನಲ್ಲಿ ಬರಿಯ ಮರಗಳು

ಮಂಜಿನಲ್ಲಿ ಬರಿಯ ಮರಗಳು (Bare Trees In The Mist- Nepal)

ಹಲವು ಉದ್ದೇಶ, ಗುರಿ, ಸಂತೋಷ, ನೆಮ್ಮದಿಗಳನ್ನು ಬಯಸುವ ವ್ಯಕ್ತಿ ಅದೇ ಗುರಿಯ ಕಡೆಗೆ ಸಾಗಲು ಹೊರಡುತ್ತಾನೆ. ಆದರೆ ಅದಕ್ಕೆ ಒಂದು ನಿರ್ದಿಷ್ಟ ಗುರಿ ಇರುತ್ತದೆ, ಆದರೆ ತನ್ನ ಗಂಡನ ಬರುವಿಕೆಯನ್ನೇ ಮುಖ್ಯಗುರಿ ಎಂದೆನಿಸಿಕೊಂಡ ಕಾಲಿ ಎಂಬ ಮಹಿಳೆಯ ಕುರಿತು ಚಿತ್ರಿಸಿರುವ ಕಿರುಚಿತ್ರವೇ ‘ಮಂಜಿನಲ್ಲಿ ಬರಿಯ ಮರಗಳು’ಎಂಬ ನೇಪಾಳಿ ಭಾಷೆಯ ಕಿರುಚಿತ್ರ.

ಪ್ರಜ್ವಲ್ ನಿರ್ಮಾಣದ ರಾಜನ್ ಕಾರ್ತೂನ್ ನಿರ್ದೇಶಿಸಿ ರಚಿಸಿರುವ ಕಿರುಚಿತ್ರ, ಒಬ್ಬ ಮಹಿಳೆಯ ಜವಾಬ್ದಾರಿಯಾದ ತಾಯಿ, ಹೆಂಡತಿ, ನೆರೆಹೊರೆಯ ಪಾತ್ರ ಕೆಲಸ ಇತ್ಯಾದಿಗಳ ಜೊತೆಜೊತೆಗೆ ತನ್ನ ಸಂವೇದನಶೀಲವಾದ ಪ್ರೀತಿ ಪ್ರೇಮ ನೋವು ಹತಾಶೆ ಇವುಗಳನ್ನು ಬಿಚ್ಚಿಡುತ್ತಾ ಸಾಗುತ್ತದೆ.  ಮೊದಲಾರ್ಧ ಭಾಗದಲ್ಲಿ ನೇಪಾಳದ ಹಿಮಾವೃತ ಚಿತ್ರಣವನ್ನು ಚಿತ್ರಿಸಿ ಜೀವನದ ಭಾರಹೊತ್ತ ತಾಯಿಯ ಜೊತೆಗೆ – ಮಗನ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ಸ್ಥಿತಿಯಲ್ಲಿ ನಾವು ಕಾಲಿ ಎಂಬ ಮಹಿಳೆಯ ಪಾತ್ರವನ್ನು ನೋಡಬಹುದಾಗಿದೆ.

ಕಿರುಚಿತ್ರ, ಎರಡು ಸಂಸಾರದ ಚಿತ್ರಣವನ್ನು ಚಿತ್ರಿಸುತ್ತದೆ, ಒಂದು ಸಂಪದ್ಭರಿತ ಕೂಡುಕುಟುಂಬ ಅಂದರೆ ಚಾರ್ಲಿ, ಚಾರ್ಲಿಯ ತಂದೆ ಮತ್ತು ಚಾರ್ಲಿಯ ತಾಯಿ- ಮತ್ತೊಂದು ಕಾಲಿ ಮತ್ತು ಅವಳ ಮಗ, ಆದರೆ ಕಾಲಿಯ ಗಂಡ ವಿದೇಶದಲ್ಲಿ ಕೆಲಸಕ್ಕೆಂದು ದುಡಿಯಲು ಹೋಗಿದ್ದಾನೆ ಆದರೆ ವಿಪರ್ಯಾಸ ಎಂದರೆ ಕಾಲಿಯ ಮುಗ್ದತನ ಅರ್ಥವಾಗುವುದು ಚಾರ್ಲಿಯ ತಂದೆ ‘ನಿನ್ನ ಗಂಡ ಯಾವ ದೇಶಕ್ಕೆ ಹೋಗಿದ್ದಾನೆ ಎಂದು ಕೇಳಿದಾಗ ಅದಕ್ಕೆ ಉತ್ತರ “ಅರಬ್ ದೇಶ” ಎಂದು ಮಾತ್ರವಾಗಿತ್ತು. ಆದರೆ ಅರಬ್ ದೇಶದ ಯಾವ ಭಾಗದಲ್ಲಿ ಎಂದು ಕೇಳಿದಾಗ ಅವಳಲ್ಲಿ ಉತ್ತರ ಇರಲಿಲ್ಲ’. ಇಲ್ಲಿ ನಿರ್ದೇಶಕ ಕಾಲಿಯ ಜವಾಬ್ದಾರಿಯನ್ನು ಹೊಲ ಊಳಲು ಬಳಸುವ ನೊಗದಂತೆ ಚಿತ್ರಿಸಿದ್ದಾರೆ,ಅರ್ಥತ್ ‘ನೊಗ ಹೊತ್ತ ಮಹಿಳೆಯ ಮೂಕ ನಡಿಗೆಯು ವೀಕ್ಷಕರಿಗೆ ಸಾವಿರ ಭಾವನೆಯನ್ನು ಕಾಲಿಯ ನೋವು, ಹತಾಶೆ, ದಿಕ್ಕೇತೋಚದ ಸ್ಥಿತಿ – ಎಂತಹದ್ದು ಎಂದು ಅರಿವಾಗುತ್ತದೆ,

ಈ ಕಿರುಚಿತ್ರದಲ್ಲಿ ಸುಖೀ ಕುಟುಂಬ ಅಂದರೆ ಚಾರ್ಲಿಯ ಕುಟುಂಬ ಸುಖ ಸಂತೋಷದಿಂದ ಕೂಡಿದ್ದು ಕಾಲಿಯ ಸ್ಥಿತಿಗೆ ಅವಮಾನಿಸುವ ವ್ಯಕ್ತಿತ್ವ ಎಂಬಂತೆ ಭಾಸವಾಗುತ್ತದೆ. ಕೊನೆಯ ದೃಶ್ಯದಲ್ಲಿ ಚಾರ್ಲಿ ತನ್ನ ಕಾಲನ್ನು ಗೋಡೆಗೆ ಹೊಡೆಯುವ ದೃಶ್ಯದ ಶಬ್ದ, ಚಾರ್ಲಿ ತಾಯಿ ರುಬ್ಬುತ್ತಿರುವ ಶಬ್ದ, ಮತ್ತು ಚಾರ್ಲಿಯ ತಂದೆ ಕಟ್ಟಿಗೆಯನ್ನು ಇಬ್ಭಾಗ ಮಾಡುವಾಗ ಮೂಡಿದ ಶಬ್ದವನ್ನೇ – ‘ಕಾಲಿಯಾ ಎದೆಬಡಿತವನ್ನು ‘ಮತ್ತು ವೀಕ್ಷಕರಿಗೆ ಮುಂದೇನಾಗುತ್ತದೋ ಎಂಬ ಆಲೋಚನೆಯನ್ನು ಮೂಡಿಸುತ್ತಾರೆ ಧ್ವನಿ ಸಂಯೋಜಕರಾದ ಡಿಕೇಶ್ ಕಾಡ್ಗಿ ಶಾಹಿ ಮತ್ತು ಸಾರ ತಮಾಗ್ ರವರು.

ಚಿತ್ರದ ಛಾಯಾಗ್ರಹಣದ ವಿಷಯಕ್ಕೆ ಬಂದರೆ ಮಂಜು ಮುಸುಕಿನ ಪ್ರದೇಶದಲ್ಲಿ ಚಿತ್ರಿಸಿದ್ದಾರೆ, ಒಟ್ಟಾರೆ ಇಡೀ ಚಿತ್ರದಲ್ಲಿ ತಿಳಿ ಕಪ್ಪು ಬಣ್ಣದಲ್ಲಿ ಮೂಡಿ ಬಂದಿದ್ದು ವೀಕ್ಷಕರಿಗೆ ಮನಮುಟ್ಟುವಂತೆ ಸೆರೆಹಿಡಿದಿದ್ದಾರೆ ಛಾಯಾಗ್ರಾಹಕ. ಚಿತ್ರದ ಸಕಾರಾತ್ಮಕ ಅಂಶವೆಂದರೆ ಅಷ್ಟು ಪಾತ್ರದಾರಿಗಳ ಸ್ವಾಭಾವಿಕ ನಟನೆ, ಹಿನ್ನೆಲೆ ಧ್ವನಿಯಾದ ಹಕ್ಕಿಗಳ ಚಿಲಿಪಿಲಿ ಕಲರವ ಮತ್ತು ಸಾಕು ಪ್ರಾಣಿಗಳ ಶಬ್ದ,ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಸಕಾರಾತ್ಮಕ ಅಂಶಗಳಲ್ಲೊಂದು, ಇನ್ನು ಚಿತ್ರದ ‘ಚಿಹ್ನೆ’ ವಿಷಯಕ್ಕೆ ಬಂದರೆ ಮೂಕನಡಿಗೆ,ಕಟ್ಟಿಗೆ, ಇವೆಲ್ಲವೂ ನೂರಾರು ಭಾವನೆಗಳನ್ನು ಮತ್ತು ನೇಪಾಳದ ಭಾಗದ ಜನರ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

ಪಾತ್ರಧಾರಿಗಳ ಮೆಲ್ಲು ಧ್ವನಿ -ವೀಕ್ಷಕರಿಗೆ ಅಸಮಾಧಾನ ಮೂಡಿಸುತ್ತದೆ, ಕೆಲವೊಂದು ಸಂಭಾಷಣೆ ಮತ್ತು ಸೆರೆಹಿಡಿದಿರುವ ದೃಶ್ಯ ಮೂಕ ನಡಿಗೆ ವೀಕ್ಷಕರಿಗೆ ತುಸು ಹೆಚ್ಚಾಯಿತು ಎಂದು ಭಾಸವಾಗುತ್ತದೆ.  ‘ಮಂಜಿನಲ್ಲಿ ಬರಿಯ ಗಿಡಗಳು’ ( Bare Trees In The Mist ) ಎಂಬ ಶೀರ್ಷಿಕೆ ನೇಪಾಳದ ಪ್ರಕೃತಿಸೌಂದರ್ಯದ ಜೊತೆಜೊತೆಗೆ ಕಾಲಿಯ ಸ್ಥಿತಿಯನ್ನು ಹೋಲುತ್ತದೆ.

ಒಟ್ಟಾರೆಯಾಗಿ ಈ ಚಿತ್ರವನ್ನು ವಿವಿಧ ಸಂಸ್ಕೃತಿ ಭಾಷೆ ಮತ್ತು ಪ್ರಕೃತಿಯನ್ನು ಅರಿಯುವ ಸಲುವಾಗಿ, ವ್ಯಕ್ತಿಗತ ಸಂಬಂಧ- ಪ್ರೀತಿಯ ಮಹಿಮೆ ಮತ್ತು ತನ್ನವರಿಂದ ದೂರವಾದ ವ್ಯಕ್ತಿಯ ನೋವು ಎಂತಹದ್ದು ಎಂದು ಅರಿಯುವ ಸಲುವಾಗಿ ಈ ಚಿತ್ರವನ್ನು ನೋಡಬಹುದಾಗಿದೆ.
ಒಟ್ಟಾರೆಯಾಗಿ ಈ ಚಿತ್ರಕ್ಕೆ ಐದು ಅಂಕದಲ್ಲಿ ವಿಮರ್ಶಿಸುವುದಾದರೆ 4:50 ಅಂಕವನ್ನು ಯಾವುದೇ ಪೂರ್ವಾಗ್ರಹವಿಲ್ಲದೆ ನೀಡಬಹುದು.

ಉಮರ್ ಫಾರೂಕ್

ತೃತೀಯ ಬಿ. ಎ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜ್, ಶಿವಮೊಗ್ಗ

ಹುಡುಕಾಟದ ಕತ್ತಲು

Image Credit : benstevens

ಹುಡುಕಾಟದ ಕತ್ತಲು

ಕತ್ತಲೆಂಬ ಗರ್ಭಗೂಡು..
ಕಣ್ಣ ತೆರೆದೆ ನವಮಾಸದ ಕೊನೆಯಲಿ
ಬೆಚ್ಚಗೆ ನೇವರಿಕೆ ಇತ್ತು ಭೂಮಿ ತಾಯಿ ಮಡಿಲಿಲಿ
ಪ್ರಾಣಿ-ಪಕ್ಷಿ ಗಿಡಗಂಟಿ
ಸಖರಂತೆ ಕೋಟಿ ಕೋಟಿ
ನಡುವೆ ಬೆಳೆದೆ ಅವುಗಳಂತೆಯೇ

ಕಂಡೆ ಜ್ವಾಲೆ ಕಿಡಿಯನು
ಕಂಡೆ ಭೂಮಿ ಕೊಡುವ ರುಚಿಯನು
ಮರ್ಕಟದಾ ಮೆದುಳಿಗೆ
ತೊಡಿಸ ಹೊರಟೆ ಮನುಜನೆಂಬ ಮುಖವಾಡ
ಅದು ಸ್ವಂತ ಸಮಾಧಿಗೆ ಮೊದಲ ಕುರುಹು ಗಾಢ
ಇನ್ನೂ ಬೆಳೆದೆ ಮಗುವಿನಂತೆ

ಹುಟ್ಟಿ ರಾಜ್ಯ ಸಾಮ್ರಾಜ್ಯದ ಕಲ್ಪನೆ
ಕ್ಷಣಕೆ ಸತ್ಯ..ಕ್ಷಣಕೆ ನಿತ್ಯ.. ಸಂಸ್ಕೃತಿಗಳ ಚಿಂತನೆ
ಸ್ವಾರ್ಥಪರತೆ ನಡೆಸೆ ಸಮರ ವಂಚನೆ
ಕುರುಡು ಮನಕೆ ಸಿಕ್ಕಿತು ಸ್ವಾತಂತ್ರದ ಘೋಷಣೆ
ಕತ್ತಲ ದಾರಿಯಲ್ಲೇ ಮೂಡಿತು ಹೊಸ ಕತ್ತಲ ಯೋಚನೆ..
ಇನ್ನೂ ಬೆಳೆದೆ ಕೊಬ್ಬಿನಿಂತೇ…

ತೃಪ್ತಿ ಇರದ ಮನದೊಳಗೆ ….
ಹೊಕ್ಕಿಬಂತು ಅಧಿಕಾರದ ಕರಿನೆರಳು
ಆ ನೆರಳು ತಾಕದಾಯಿತು ಅಹಂಕಾರದ ಮುಗಿಲು
ಪಾಪ-ಪುಣ್ಯ ಎಲ್ಲ ಮರೆಸಿ ಕುಣಿಸುತಿಹುದು  ಕಾಂಚಾಣ…
ಕುಣಿತ ಕುಣಿತ ಮರೆತೆನೀಗ ನನ್ನತನವ ನಾನೆನಾ?…
ಬೆಳೆದೆ ಹಮ್ಮ ಕೊಳೆಯಲಿ…

ಕಗ್ಗತ್ತಲ ಕತ್ತಲಲ್ಲಿ ಬೆಳಕ ಕಿಡಿಯ ಸಿಂಚನ
ನಮ್ಮ ನೆರಳು ಕತ್ತಲು, ನಮ್ಮತನವು ಕತ್ತಲು….
ಕತ್ತಲೆಯೆ ಹೇಳಿತು “ಬೆಳಕು ಬರಿಯ ಬೆತ್ತಲು”
ಕತ್ತಲಲಿ ಕಾಣದೇನೂ… ಬೆಳಕು ಬರಿಯ ಬೆತ್ತಲು..!
ಬೆಳೆದೆ ತಲ್ಲಣದ ಸುಳಿಯಲಿ…

ಕತ್ತಲ ಹುಚ್ಚು ನೆತ್ತಿಗ್ಹತ್ತಿ
ಬೆಳಕ ಸತ್ಯ ಕಣ್ಣಿಗೊತ್ತಿ
ಮನದ ಗೂಡಲವಿತು ಕೂತು
ಯೋಚಿಸಿದೆ… ಯೋಚಿಸಿದೆ..
ಬೆಳೆದೆ ಯೋಚನೆಯ ಜೊತೆಯಲಿ

ಬೆಳಕು – ಕತ್ತಲು ಎರಡು ಬೇಕು
ಸಮವಾಗಿ…ದೃಡವಾಗಿ
ಭೂಮಿ ಕರುಳ ಬಸಿಯ ಹೊರಟ “ಕತ್ತಲೆ”
ಕರಿ ಇರುಳ ಕಸಿಯ ಹೊರಟ  “ಬೆಳಕ ಬೆತ್ತಲೆ”
ಒಂದೇ ಎನಿಸಿದರೂ… ವಿರುದ್ಧ

ಬಂದಾಗಿದೆ ಸೊಕ್ಕಿನಿಂದ
ಉಂಟೆ ಒಂದು ಅವಕಾಶ
ಅಮ್ಮಾ…
ಕ್ಷಮಿಸುವೆಯಾ ಈ ಎಲ್ಲ ತಪ್ಪಿಗೆ?
ಇಲ್ಲ…
ಮರಳಬೇಕೆ… ನಾನೀಗ ಸ್ವರಚಿತ ಸಮಾಧಿಗೆ?

 

ಪ್ರಣಮ್ಯ ಬಿ.  ತೃತೀಯ ಬಿ.ಎ

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು- ಶಿವಮೊಗ್ಗ

ಕಗ್ಗತ್ತಲ ಸಮಯದಲ್ಲಿ

ಕಗ್ಗತ್ತಲ ಸಮಯದಲ್ಲಿ

 

ಸಂತಸದಿ ತುಂಬಿತ್ತು ಈ ಜಗ
ಸಾವುನೋವಿನಲಿ ಮರುಗಿದೆ ಈಗ.
ಜೀವಿಗಳಿಗದು ಕತ್ತಲ ಕೂಪ
ಏನಿದೇನು ??… ಕರಿನೆರಳ ಕೋಪ?

ಜಗತ್ತೇ ಕತ್ತಲಿಂದ ಬಳಲುತ್ತಿದೆ
ನೋವಿಗೆ ಮಿತಿಯೇ ಇಲ್ಲದೆ?
ನಿನ್ನೆ ನೋಡಿದವರಿಂದಿಲ್ಲ ,
ಆಗು ಹೋಗುಗಳ ಅರಿವೇ ಇಲ್ಲ!

ಅಂದು ಆ ಮಲೆನಾಡು
ಇಂದು ಬಯಲುಸೀಮೆಯ ಬೀಡು
ಮನಸ್ಸಿಗೆ ಮುದ ನೀಡಿದ್ದ ತಂಗಾಳಿ
ಇಂದು ಮನಸ ಘಾಸಿಗೊಳಿಸುವ ಬಿರುಗಾಳಿ
ಅಯ್ಯೋ ಏನಿದು ಕರಾಳ ರಾತ್ರಿಯ ರೌದ್ರಾವತಾರ?

ಕತ್ತಲಾವರಿಸಿದೆ ಮನದಲ್ಲಿ
ಕರೋನ ಎಂಬ ಭಯದಲ್ಲಿ
ಹೊರ ಜಗಕ್ಕೆ ಪ್ರವೇಶವಿಲ್ಲ
ಒಳ ಜಗದಲ್ಲಿ ಮನಃಶಾಂತಿಯೇ ಇಲ್ಲ 😞..

ದುಡಿಮೆ ಇಲ್ಲದೆ ಕಾಸಿಲ್ಲ
ಕಾಸಿಲ್ಲದೆ ಕೂಳಿಲ್ಲ
ಕೂಳಿಲ್ಲದೆ ಜೀವವೇ ಇಲ್ಲಾ…
ಇರುವುದೊಂದೇ ಕಗ್ಗತ್ತಲು…

ಬೃಹದಾಕಾರದ ಕಟ್ಟಡಗಳ ನಿರ್ಮಾಣ,
ಅದೇ ಇಂದು ನಮ್ಮೆಲ್ಲರ ನಿರ್ವಾಣ,
ಹಾಕಿದೆವು ಪಕ್ಷಿಗಳ ಪಂಜರದಲ್ಲಿ,
ನೂಕಿದೇವು ಪ್ರಾಣಿಗಳ ಸರ್ಕಸಿನಲ್ಲಿ,
ಫಲವಾಗಿ ನಾವಿಂದು ಮನೆಯೆಂಬ ಸೆರೆಮನೆಯಲ್ಲಿ.

ಸಾಗಬೇಕಿದೆ ಜೀವನ ಸುಗಮವಾಗಿ.
ಬದಲಾಗಬೇಕಿದೆ ಕಗ್ಗತ್ತಲು ಬೆಳಕಾಗಿ.
ಜೀವನವನ್ನು ಪ್ರೀತಿಸುತ್ತಾ, ಮಗುವಂತೆ ನಗುತ್ತಾ, ಎಲ್ಲರನ್ನು ಗೌರವಿಸುತ್ತಾ , ಮೆರೆಯಬೇಕಿದೆ ಮಾನವೀಯತೆ.

ಮಧುಶ್ರಿ,

ಪ್ರಥಮ ಬಿ ಎ

ಕಟೀಲ್ ಅಶೋಕ್ ಪೈ ಸ್ಮಾರಕ ಸಂಸ್ಥೆ