ಮೊದಲು ಮನಸ್ಸು ಮಾಡು…

 

ಒಬ್ಬ ಝೆನ್ ಮಾಸ್ಟರ್ ಪ್ರತಿದಿನ ದೂರದ ನದಿಯಿಂದ ತನ್ನ ಆಶ್ರಮಕ್ಕೆ ಎರಡು ಮಣ್ಣಿನ ಮಡಕೆಗಳಲ್ಲಿ ನೀರು ತೆಗೆದುಕೊಂಡು ಹೋಗುತ್ತಿದ್ದ. ಮಾಸ್ಟರ್ ಒಂದು ಕೋಲಿನ ಎರಡೂ ತುದಿಗಳಲ್ಲಿ ಎರಡು ಮಡಕೆಗಳನ್ನು ಕಟ್ಟಿಕೊಂಡು ಆ ಕೋಲನ್ನು ತನ್ನ ಹೆಗಲ ಮೇಲೆ ಇಟ್ಟುಕೊಂಡು ಪ್ರತಿದಿನ ತನ್ನ ಆಶ್ರಮಕ್ಕೆ ನೀರು ತೆಗೆದುಕೊಂಡು ಹೋಗುತ್ತಿದ್ದ.

ಆ ಎರಡು ಮಡಕೆಗಳಲ್ಲಿ ಒಂದು ಮಡಕೆ ಕೊಂಚ ಬಿರುಕು ಬಿಟ್ಟಿತ್ತು ಮತ್ತು ಇನ್ನೊಂದು ಮಡಕೆಗೆ ಯಾವ ಹಾನಿಯೂ ಆಗಿರಲಿಲ್ಲ. ಚೆನ್ನಾಗಿ ಇರುವ ಮಡಕೆ ಪ್ರತಿದಿನ ಆಶ್ರಮಕ್ಕೆ ಒಂದು ಪೂರ್ತಿ ಮಡಕೆ ತುಂಬ ನೀರು ತೆಗೆದುಕೊಂಡು ಬರುತ್ತಿದ್ದರೆ, ಬಿರುಕು ಬಿಟ್ಟ ಮಡಕೆಯ ಅರ್ಧ ನೀರು ಸೋರಿ ಹೋಗುತ್ತಿತ್ತು, ಅದು ಆಶ್ರಮಕ್ಕೆ ಕೇವಲ ಅರ್ಧ ಮಡಕೆ ನೀರು ತರುತ್ತಿತ್ತು. ಹೀಗೇ ಈ ರೀತಿಯ ನೀರು ಸಾಗಾಣಿಕೆ ಎರಡು ವರ್ಷಗಳ ವರೆಗೆ ಮುಂದುವರೆಯಿತು.

ಹಾಗಾಗಿ ಮಾಸ್ಟರ್ ಗೆ ಪ್ರತಿದಿನ ನದಿಯಿಂದ ಕೇವಲ ಒಂದೂವರೆ ಮಡಕೆಯಷ್ಟು ಮಾತ್ರ ನೀರನ್ನ ಆಶ್ರಮಕ್ಕೆ ತರಲು ಸಾಧ್ಯವಾಗುತ್ತಿತ್ತು. ತಾನು ಹೆಚ್ಚು ನೀರು ಸಾಗಿಸುತ್ತಿದ್ದ ಕಾರಣಕ್ಕೆ ಚೆನ್ನಾಗಿದ್ದ ಮಡಕೆಗೆ ಹೆಮ್ಮೆಯಾದರೆ, ಪ್ರತಿದಿನ ಕೇವಲ ಅರ್ಧ ಮಡಕ್ಕೆಯಷ್ಟು ಮಾತ್ರ ನೀರು ಸಾಗಿಸುತ್ತಿದ್ದ ಬಿರುಕುಬಿಟ್ಟ ಮಡಕೆಗೆ ಬೇಸರ ಮತ್ತು ನಾಚಿಕೆಯಾಗುತ್ತಿತ್ತು.

ಒಂದು ದಿನ ಬಿರುಕುಬಿಟ್ಟ ಮಡಕೆ ಮಾಸ್ಟರ್ ನ ಕ್ಷಮೆ ಕೇಳಿತು, “ಮಾಸ್ಟರ್ ನಾನು ಬಿರುಕುಬಿಟ್ಟಿರುವ ಕಾರಣದಿಂದ ಪ್ರತಿದಿನ ಕೇವಲ ಅರ್ಧಮಡಕೆಯಷ್ಟು ಮಾತ್ರ ನೀರು ಸಾಗಿಸುವುದು ನನಗೆ ಸಾಧ್ಯವಾಗುತ್ತಿದೆ. ಅರ್ಧ ನೀರು ಸೋರಿ ಹೋಗಿ ವ್ಯರ್ಥವಾಗುತ್ತಿದೆ, ನನ್ನ ಕ್ಷಮಿಸು”.

“ಬೇಸರ ಮಾಡಿಕೊಳ್ಳಬೇಡ, ನಾಳೆ ನದಿಯಿಂದ ನಾವು ವಾಪಸ್ ಬರುವಾಗ ದಾರಿಯ ಒಂದು ಬದಿಯಲ್ಲಿ ಅರಳಿನಿಂತಿರುವ ಹೂವುಗಳನ್ನು ಒಮ್ಮೆ ನೋಡು, ಆಮೇಲೆ ಮಾತನಾಡೋಣ” ಝೆನ್ ಮಾಸ್ಟರ್ ಬಿರುಕುಬಿಟ್ಟ ಮಡಕೆಯನ್ನು ಸಂತೈಸಿದ.

ಮರುದಿನ ದಿನ ನೀರು ತೆಗೆದುಕೊಂಡು ವಾಪಸ್ ಬರುವಾಗ, ಬಿರುಕು ಬಿಟ್ಟ ಮಡಕೆ ದಾರಿಯಲ್ಲಿ ಅರಳಿ ನಿಂತಿದ್ದ ಸುಂದರ ಹೂವುಗಳನ್ನು ಗಮನಿಸಿತು. “ಗಮನಿಸಿದೆಯಾ ನೀರು ತರುವ ಹಾದಿಯಲ್ಲಿ ನಿನ್ನ ಬದಿಯಲ್ಲಿ ಮಾತ್ರ ಹೂವುಗಳು ಅರಳಿ ನಿಂತಿರುವುದನ್ನ? ಇನ್ನೊಂದು ಬದಿಯಲ್ಲಿ ಯಾವ ಹೂಗಳೂ ಇಲ್ಲದಿರುವುದನ್ನ? “ ಮಾಸ್ಟರ್ ಬಿರುಕುಬಿಟ್ಟ ಮಡಕೆಯನ್ನ ಪ್ರಶ್ನೆ ಮಾಡಿದ.

“ನನಗೆ ನಿನ್ನಲ್ಲಿ ಬಿರುಕು ಇರುವುದು ಗೊತ್ತಿತ್ತು ಆದ್ದರಿಂದ ನಿನ್ನ ಬದಿಯ ಹಾದಿಯಲ್ಲಿ ನಾನು ಹೂವಿನ ಗಿಡದ ಬೀಜಗಳನ್ನು ದಾರಿಯುದ್ದಕ್ಕೂ ಬಿತ್ತಿದ್ದೆ. ನಾನು ನಿನ್ನೊಳಗಿನ ಕೊರತೆಯನ್ನು ಗುರುತಿಸಿ ಅದನ್ನು ಸದುಪಯೋಗ ಮಾಡಿಕೊಂಡೆ. ನಿನ್ನಿಂದ ಸೋರಿ ಹೋಗುತ್ತಿದ್ದ ನೀರಿನಿಂದಾಗಿಯೇ ನಿನ್ನ ಬದಿಯ ಹಾದಿಯಲ್ಲಿ ಇಂದು ಹೂವಿನ ಗಿಡಗಳು ಬೆಳೆದು ನಿಂತಿರುವುದು. ಈ ಎರಡು ವರ್ಷ ನಿನ್ನಿಂದ ಸೋರಿದ ನೀರಿನ ಕಾರಣವಾಗಿಯೇ ಇವತ್ತು  ಈ ಹೂವುಗಳು ಅರಳಿ ನಿಂತಿರುವುದು, ಈ ಜಗತ್ತು ಇಷ್ಟರಮಟ್ಟಿಗೆ ಸುಂದರವಾಗಿರುವುದು.” ಮಾಸ್ಟರ್, ಬಿರುಕುಬಿಟ್ಟ ಮಡಕೆಯನ್ನು ಸಮಾಧಾನ ಮಾಡಿದ.

ನಾವು ಪ್ರತಿಯೊಬ್ಬರಲ್ಲೂ ಕೊರತೆಗಳಿವೆ, ದೌರ್ಬಲ್ಯಗಳಿವೆ. ನಾವೆಲ್ಲರೂ ಒಂದು ರೀತಿಯಲ್ಲಿ ಬಿರುಕುಬಿಟ್ಟಿರುವ ಮಡಕೆಯ ಹಾಗೆ. ಆದರೆ ನಾವು ಮನಸ್ಸು ಮಾಡಿದರೆ, ಪ್ರಯತ್ನ ಮಾಡಿದರೆ. ನಮ್ಮ ದೌರ್ಬಲ್ಯ, ಕೊರತೆಗಳ ಬಗ್ಗೆ ಸುಮ್ಮನೇ ಹಳಹಳಿಸುತ್ತ ಕುಳಿತುಕೊಳ್ಳದೇ ನಾವು ನಮ್ಮ ದೌರ್ಬಲ್ಯಗಳನ್ನು ಧನಾತ್ಮಕವಾಗಿ ಬಳಕೆ ಮಾಡಬಹುದು. ಅವಗಳನ್ನ ವಿರೋಧ ಮಾಡದೇ ಅವನ್ನು ಅವಕಾಶಗಳನ್ನಾಗಿ ಬದಲಾಯಿಸಿಕೊಳ್ಳಬಹುದು. ವಿವೇಕವಂತರ ದೃಷ್ಟಿಯಲ್ಲಿ ಯಾವುದೂ ವ್ಯರ್ಥವಲ್ಲ. ನಮ್ಮ ಕೊರತೆಗಳು ನಮ್ಮನ್ನು ಕಟ್ಟಿಹಾಕುವುದು ಬೇಡ. ನಮ್ಮ ಕೊರತೆಗಳ ಬಗ್ಗೆ ತಿಳುವಳಿಕೆ ಹೊಂದಿರುವುದು ಮತ್ತು ಅದನ್ನು ಮೀರಿ ನಡೆಯುವುದು ನಮ್ಮ ಒಂದು ದೊಡ್ಡ ಸಾಮರ್ಥ್ಯ.

 

ಸಂಗ್ರಹ:

ಸುಶ್ಮಿತಾ.  ಆರ್

ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ

ಜ್ಞಾನ ಮತ್ತು ಅಹಂಕಾರ

 

Image Credit: LinkedIn

 

“ಜ್ಞಾನ ಮತ್ತು ಅಹಂಕಾರ ಎರಡಕ್ಕೂ ನೇರ ಸಂಬಂಧ ಇರುತ್ತದೆ. ಜ್ಞಾನ ಕಡಿಮೆಯಾದಷ್ಟೂ ಅಹಂಕಾರ ಹೆಚ್ಚುತ್ತದೆ……”

 ಆಲ್ಬರ್ಟ್ ಐನ್ಸ್ಟೈನ್…..

ಇರಬಹುದೇ? ಒಮ್ಮೆ ನಮ್ಮ ಸುತ್ತಮುತ್ತಲಿನ ಅವಲೋಕನ ಮತ್ತು ನಮ್ಮೊಳಗೆ ಆತ್ಮವಿಮರ್ಶೆ ಮಾಡಿಕೊಳ್ಳೋಣ……

ಸಾಮಾಜಿಕ ಜಾಲತಾಣಗಳ ಬೆಳವಣಿಗೆಯೊಂದಿಗೆ ಬಹುತೇಕ ಆಸಕ್ತಿಯ ಎಲ್ಲಾ ಜನರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ವೇದಿಕೆ ಮತ್ತು ಸ್ವಾತಂತ್ರ್ಯ ದೊರೆತಿದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಮನುಷ್ಯನಿಗೆ ಇರಬಹುದಾದ ಅಥವಾ ಬರಬಹುದಾದ ಅಹಂಕಾರ ಅಥವಾ ಅದಕ್ಕೂ ಮಿಗಿಲಾಗಿ ದುರಹಂಕಾರ ಯಾವ ಕಾರಣಗಳಿಗಾಗಿ ಅವನೊಳಗೆ ಪ್ರವೇಶಿಸುತ್ತದೆ ಎಂಬುದನ್ನು ಪರಿಶೀಲಿಸೋಣ…..

ಹಣದ ಅಹಂ, ಅಧಿಕಾರದ ಅಹಂ, ಆಸ್ತಿಯ ಅಹಂ, ಸೌಂದರ್ಯದ ಅಹಂ, ಅಕ್ಷರದ ಅಹಂ, ಜ್ಞಾನದ ಅಹಂ, ಪ್ರಶಸ್ತಿಯ ಅಹಂ, ಜನಪ್ರಿಯತೆಯ ಅಹಂ ಹೀಗೆ ನಾನಾ ಕಾರಣಗಳಿಂದಾಗಿ ಇದು ಹುಟ್ಟುತ್ತದೆ.

ಇಲ್ಲಿ ಅಹಂಕಾರ, ದುರಹಂಕಾರ, ಹೆಮ್ಮೆ ಇವುಗಳಿಗೆ ಇರುವ ವ್ಯತ್ಯಾಸ ಕೂಡ ಗಮನದಲ್ಲಿಟ್ಟುಕೊಂಡು ಚರ್ಚಿಸಬೇಕು. ಏಕೆಂದರೆ ಇತರರ ಬಳಿ ಇಲ್ಲದಿರುವುದು ನನ್ನ ಬಳಿ ಇದೆ ಎನ್ನುವ ತನ್ನ ಸ್ವ ಸಾಮರ್ಥ್ಯದ ಹೆಚ್ಚುಗಾರಿಕೆಯ ಆಂತರಿಕ ಹೆಮ್ಮೆ ಮತ್ತು ಅದರ ಭಾಗವಾಗಿ ಬಹಿರಂಗವಾಗಿ ವಿನಯದ ಪ್ರದರ್ಶನ,  ತನ್ನ ಬಳಿ ಇರುವುದು ಅವರ ಬಳಿ ಇಲ್ಲ ಎನ್ನುವ ಕಾರಣಕ್ಕಾಗಿ ಇತರರನ್ನು ಕೀಳಾಗಿ ಕಾಣುವುದು ಅಥವಾ ಅವರಿಗೆ ಮುಜುಗರವಾಗುವಂತೆ ವರ್ತಿಸುವುದು ಅಹಂಕಾರ, ಇದೇ ಕಾರಣಕ್ಕಾಗಿ ಬೇರೆಯವರನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸಿಸುವುದು ದುರಹಂಕಾರ ಮತ್ತು ಅಪರಾಧ.

ಬಹುಶಃ ಐನ್ಸ್ಟೈನ್ ಅವರ ಮಾತಿನ ಅರ್ಥ ಅಜ್ಞಾನಿಗಳು ಹೆಚ್ಚು ಅಹಂಕಾರ ಹೊಂದಿರುತ್ತಾರೆ ಕಾರಣ ಅವರಿಗೆ ಸಮಗ್ರ ಚಿಂತನೆಯಾಗಲಿ, ವಿಶಾಲ ಮನೋಭಾವವಾಗಲಿ, ಒಳ್ಳೆಯತನವಾಗಲಿ ಇರುವುದಿಲ್ಲ. ಸಂಕುಚಿತ ದೃಷ್ಟಿಕೋನ ಮತ್ತು ನಾನು ನನ್ನದು ಎಂಬ ಸ್ವಾರ್ಥ ತುಸು ಹೆಚ್ಚಾಗಿಯೇ ಇರುತ್ತದೆ. ಆ ಅಜ್ಞಾನ ಅಹಂಕಾರವಾಗಿ ನಮಗರಿವಿಲ್ಲದೇ ಪರಿವರ್ತನೆ ಹೊಂದಿ ನಮ್ಮೊಳಗೆ ಅಡಕವಾಗಿ ನಮ್ಮ ನಡವಳಿಕೆಯಾಗಿ ಮಾರ್ಪಡುತ್ತದೆ ಎಂಬುದಾಗಿರಬಹುದು.

ಆಳದಲ್ಲಿ ಅಹಂಕಾರದ ಒಳ ಅರ್ಥ ಮತ್ತೇನೋ ಇರಬಹುದು ಅಥವಾ ಆ ರೀತಿಯಲ್ಲಿ ವ್ಯಾಖ್ಯಾನಿಸಬಹುದು. ಆದರೆ ವ್ಯಾವಹಾರಿಕವಾಗಿ ಐನ್ಸ್ಟೈನ್ ಹೇಳಿದ ನಡವಳಿಕೆ ನಮ್ಮ ಸುತ್ತಮುತ್ತಲಿನ ಜನರ ಒಡನಾಟದಿಂದ ನಮಗೆ ಅರಿವಾಗುತ್ತದೆ.

ಉದಾಹರಣೆಗೆ ನಮ್ಮ ನಿಮ್ಮ ನಡುವೆ ಸಾಮಾನ್ಯ ಪರಿಸ್ಥಿತಿಯಲ್ಲಿ ಆತ್ಮೀಯವಾಗಿ ಸ್ನೇಹದಿಂದ ಇರುವ ವ್ಯಕ್ತಿಗಳು ಅಥವಾ ಸಂಬಂಧಿಕರು ಯಾವುದೋ ಕಾರಣದಿಂದಾಗಿ ಅವರ ಒಟ್ಟು ಪರಿಸ್ಥಿತಿ ನಮಗಿಂತ ಉತ್ತಮವಾದಾಗ ಅವರ ವರ್ತನೆಯ ಬದಲಾವಣೆಗಳನ್ನು ಗಮನಿಸಬಹುದು.

ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತೊಂದಿದೆ. ಜ್ಞಾನವಂತನ ಮನಸ್ಥಿತಿ ಹೆಚ್ಚು ಸಮತೋಲನದಿಂದ ಕೂಡಿರುತ್ತದೆ. ಪ್ರಬುದ್ದತೆಯ ಮಟ್ಟ ಉತ್ತಮ ಗುಣಮಟ್ಟ ಹೊಂದಿರುತ್ತದೆ. ಆಗ ವಿಷಯ ಯಾವುದೇ ಇರಲಿ ಸ್ಥಿತಪ್ರಜ್ಞತೆ ಕಾಪಾಡಿಕೊಳ್ಳಬಹುದು.

ಇದನ್ನು ಸರಿಯಾಗಿ ಅರ್ಥಮಾಡಿಕೊಂಡು ನಮ್ಮ ಮನೋಭಾವ ಮತ್ತು ನಡವಳಿಕೆಯಲ್ಲಿ ಒಂದಷ್ಟು  ಬದಲಾವಣೆ ಮಾಡಿಕೊಂಡರೆ ಅಹಂಕಾರ ಮತ್ತು ದುರಹಂಕಾರ ಕಡಿಮೆಯಾಗುವ ಎಲ್ಲಾ ಸಾಧ್ಯತೆ ಇದೆ. ಆತ್ಮವಿಮರ್ಶೆ ಇದಕ್ಕಾಗಿ ಇರುವ ಅತ್ಯುತ್ತಮ ಮಾರ್ಗ.

ಮನುಷ್ಯ ಸಾವಿರಾರು ವರ್ಷಗಳಷ್ಟು ಬದುಕುವುದಿಲ್ಲ. ಸಾಮಾನ್ಯವಾಗಿ 60 ರಿಂದ 80 ಎಂದು ಒಂದು ಅಂದಾಜು. ಈ ಕಾಲದಷ್ಟು ಜೀವನದಲ್ಲಿ ಇತರರೊಂದಿಗೆ ನಾವು ಕೂಡ ಒಂದಷ್ಟು ನೆಮ್ಮದಿ – ಸಂತೋಷದಿಂದ ಜೀವನ ನಡೆಸಬೇಕೆಂದರೆ ಇಡೀ ಸಮಾಜದ ವಾತಾವರಣ ಮುಖ್ಯವಾಗಿ ನಮ್ಮ ಮತ್ತು ನಮ್ಮ ಸಹವರ್ತಿಗಳ ನಡವಳಿಕೆ ಉತ್ತಮವಾಗಿರಬೇಕು ಅಂದರೆ ಅಹಂಕಾರ ಅಥವಾ ದುರಹಂಕಾರಗಳ ಹೆಚ್ಚು ಪ್ರದರ್ಶನಕ್ಕೆ ಅವಕಾಶ ಇರಬಾರದು.

ಜ್ಞಾನದ ಬಲದಿಂದ ಅಜ್ಞಾನದ ಕೇಡ ನೋಡ” ಎಂದು ವಚನ ಸಾಹಿತ್ಯದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ನಾವೆಲ್ಲರೂ ಇನ್ನು ಮುಂದೆ ನಮ್ಮ ಸಾಮರ್ಥ್ಯ, ನಮ್ಮ ಅದೃಷ್ಟ, ನಮ್ಮ ಉತ್ತಮ ಜೀವನಮಟ್ಟ, ನಮ್ಮ ಸುಖ ಸಂತೋಷಕ್ಕಾಗಿ ಹೆಮ್ಮೆ ಪಡೋಣ. ಆದರೆ ಅಹಂಕಾರ ಅಥವಾ ದುರಹಂಕಾರ ಪಡುವುದು ಬೇಡ.

ನಮ್ಮಲ್ಲಿ ಇನ್ನೂ ದುರಹಂಕಾರ ಇದೆ ಎಂದಾದರೆ ನಾವು ಇನ್ನೂ ಅಜ್ಞಾನಿಗಳು ಎಂದು ನಮ್ಮನ್ನು ನಾವೇ ನಿರ್ಧರಿಸಿ ಮತ್ತೆ ನಾವು ಅಹಂಕಾರ ತ್ಯಜಿಸಿ ಜ್ಞಾನವಂತರಾಗಲು ಪ್ರಯತ್ನಿಸೋಣ. ಇದೊಂದು ನಿರಂತರ ಪ್ರಕ್ರಿಯೆ. ಇದು ಸ್ವಲ್ಪಮಟ್ಟಿಗೆ ಸಾಧ್ಯವಾದರೆ ಪ್ರಬುದ್ಧ ಮನಸ್ಸುಗಳ ಪ್ರಬುದ್ಧ ಸಮಾಜ ನಿರ್ಮಾಣದೆಡೆಗೆ ನಮ್ಮ ಹೆಜ್ಜೆಗಳು ಸಾಗುತ್ತಿವೆ ಎಂದು ಭಾವಿಸಬಹುದು.

ಸುಶ್ಮಿತಾ.  ಆರ್

ಪ್ರಥಮ ವರ್ಷದ ಬಿಎಸ್ಸಿ ವಿದ್ಯಾರ್ಥಿನಿ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜುಶಿವಮೊಗ್ಗ